ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತೀಯ ಆಟಗಾರರನ್ನು ಗುರಿ ಮಾಡಿ ನಿಂದಿಸಿರುವ ಘಟನೆ ಕ್ರೀಕೆಟ್ ಲೋಕದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬೂಮ್ರಾ ಅವರನ್ನು ಆಸಿಸ್ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದರು. ಈ ಘಟನೆಯ ಬಗ್ಗೆ ಐಸಿಸಿ ತನಿಖೆ ನಡೆಸುತ್ತಿದೆ. ಈ ಘಟನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆಯಾಚನೆಯನ್ನು ಮಾಡಿದೆ.
ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ಈ ಬೆಳವಣಿಗೆಯ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ತಂಡ ಹಾಗೂ ಮೊಹಮ್ಮದ್ ಸಿರಾಜ್ ಅವರಲ್ಲಿ ಡೇವಿಡ್ ವಾರ್ನರ್ ಬಹಿರಂಗವಾಗಿ ಕ್ಷಮೆಯಾಚನೆಯನ್ನು ಮಾಡಿದ್ದಾರೆ.
ಹನುಮ ವಿಹಾರಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಕ್ಕೆ: ಇಂಗ್ಲೆಂಡ್ ಟೆಸ್ಟ್ಗೂ ಅನುಮಾನ
"ನಾನು ಮೊಹಮ್ಮದ್ ಸಿರಾಜ್ ಅವರಲ್ಲಿ ಮತ್ತು ಭಾರತೀಯ ತಂಡದ ಬಳಿ ಜನಾಂಗೀಯ ನಿಂದನೆಗೆ ಒಳಗಾದ ಬಗ್ಗೆ ಕ್ಷಮೆಯಾಚಿಸುತ್ತೇನೆ. ನಿಂದನೆ ಯಾವುದೇ ಕ್ಷಣದಲ್ಲಿ, ಯಾವುದೇ ಸಂದರ್ಭದಲ್ಲಿ ಹಾಗೂ ಯಾವುದೇ ಸ್ಥಳದಲ್ಲಿ ಸ್ವೀಕಾರಾರ್ಹವಲ್ಲ ಹಾಗೂ ಸಹನೀಯವಲ್ಲ. ನಮ್ಮ ಪ್ರೇಕ್ಷಕರಿಂದ ನಾನು ಇದಕ್ಕಿಂತ ಉತ್ತಮವಾಗಿರುವುದನ್ನು ಬಯಸುತ್ತೇನೆ" ಎಂದು ವಾರ್ನರ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸಿಡ್ನಿ ಪಂದ್ಯದ ಬಗ್ಗೆ ವಾರ್ನರ್ ಮಾತನಾಡಿದ್ದಾರೆ. "ಕಳೆದವಾರ ಮತ್ತೆ ಅಂಗಳದಲ್ಲಿ ಕಣಕ್ಕಿಳಿದಿದ್ದು ಸಾಕಷ್ಟು ಖುಷಿ ನೀಡಿದೆ. ಆದರೆ ಇದು ನಮಗೆ ಉತ್ತಮವಾದ ಫಲಿತಾಂಶವಾಗಿರಲಿಲ್ಲ. ಆದರೆ ಟೆಸ್ಟ್ ಕ್ರಿಕೆಟ್ ಅಂದರೆ ಹಾಗೆಯೇ. ಐದು ದಿನಗಳ ಕ್ರಿಕೆಟ್ ಆಟ ತುಂಬಾ ಕಠಿಣ. ನಮ್ಮ ಹುಡುಗರು ಸಾಕಷ್ಟು ಹೋರಾಟವನ್ನು ನಡೆಸಿದ್ದಾರೆ. ಭಾರತೀಯ ತಂಡ ಅದ್ಭುತವಾಗಿ ತಿರುಗಿಬಿದ್ದು ಡ್ರಾ ಮಾಡಿಕೊಂಡಿದೆ. ಇದೇ ಕಾರಣಕ್ಕಾಗಿ ನಾವು ಈ ಆಟವನ್ನು ಪ್ರೀರಿಸುತ್ತೇವೆ " ಎಂದು ವಾರ್ನರ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್ನಿಂದ ರವೀಂದ್ರ ಜಡೇಜಾ ಹೊರಕ್ಕೆ
ಗಾಯದಿಂದಾಗಿ ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಸೀಮಿತ ಓವರ್ಗಳ ಪಂದ್ಯಗಳ ಸಹಿತ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಮೂರನೇ ಟೆಸ್ಟ್ನಲ್ಲಿ ವಾರ್ನರ್ ಕಣಕ್ಕಿಳಿದಿದ್ದರಾದರೂ ಎರಡೂ ಇನ್ನಿಂಗ್ಸ್ನಲ್ಲಿ ವಿಫಲರಾಗಿ ಶೀಘ್ರವಾಗಿ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದರು.