
ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಶಾರ್ದೂಲ್ ಠಾಕೂರ್
ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಬದಲು ಟೀಮ್ ಇಂಡಿಯಾದ ಪರ ಆಡುವ ಅವಕಾಶವನ್ನು ಪಡೆದ ಶಾರ್ದೂಲ್ ಠಾಕೂರ್ ಆ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡರು. ಮೊದಲನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದು ಮಿಂಚಿದ ಶಾರ್ದೂಲ್ ಠಾಕೂರ್ ಮೊದಲ ಇನ್ನಿಂಗ್ಸ್ನಲ್ಲಿ 64 ಬಾರಿಸಿ ಟೀಮ್ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಕೆಟ್ ಪಡೆಯುವುದರ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಶಾರ್ದೂಲ್ ಠಾಕೂರ್ ಮೊದಲ ಇನ್ನಿಂಗ್ಸ್ನಲ್ಲಿ ಜೋ ರೂಟ್ ವಿಕೆಟ್ ಪಡೆದದ್ದು ಠಾಕೂರ್ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ತಪ್ಪಾಗಲಾರದು. ಎರಡನೇ ಇನ್ನಿಂಗ್ಸ್ನಲ್ಲಿಯೂ ಲಾರೆನ್ಸ್ ಮತ್ತು ಜೋಸ್ ಬಟ್ಲರ್ ವಿಕೆಟ್ ಪಡೆಯುವುದರ ಮೂಲಕ ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಠಾಕೂರ್ ಉತ್ತಮ ಬೌಲಿಂಗ್ ಅಶ್ವಿನ್ ಸ್ಥಾನಕ್ಕೆ ಕುತ್ತು ತರಬಹುದು
ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿರುವುದರಿಂದ ಮುಂಬರುವ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನಕ್ಕೆ ಕುತ್ತು ಬರಬಹುದು ಎಂದು ನೆಟ್ಟಿಗರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಶಾರ್ದೂಲ್ ಠಾಕೂರ್ ಜೊತೆ ಪೈಪೋಟಿ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ ಎನ್ನಲಾಗುತ್ತಿದೆ.

ಶಾರ್ದೂಲ್ ಠಾಕೂರ್ ಜತೆ ಅಶ್ವಿನ್ ಪೈಪೋಟಿ ಎಂದ ದೀಪ್ ದಾಸ್ ಗುಪ್ತಾ
ಇನ್ನು ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಕೂಡ ಈ ವಿಷಯವಾಗಿ ಚರ್ಚಿಸಿದ್ದು ರವಿಚಂದ್ರನ್ ಅಶ್ವಿನ್ಗೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಸಿಗಬೇಕೆಂದರೆ ಶಾರ್ದೂಲ್ ಠಾಕೂರ್ ಜತೆ ಪೈಪೋಟಿ ನಡೆಸಬೇಕಾಗುತ್ತದೆ ಎಂದಿದ್ದಾರೆ. ಎಲ್ಲರೂ ರವಿಚಂದ್ರನ್ ಅಶ್ವಿನ್ ರವೀಂದ್ರ ಜಡೇಜಾ ಜತೆ ಪೈಪೋಟಿ ನಡೆಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ, ಆದರೆ ನಿಜವಾಗಿಯೂ ರವಿಚಂದ್ರನ್ ಅಶ್ವಿನ್ ಪೈಪೋಟಿ ನಡೆಸುತ್ತಿರುವುದು ಶಾರ್ದೂಲ್ ಠಾಕೂರ್ ಜತೆ ಎಂದು ದೀಪ್ ದಾಸ್ ಗುಪ್ತಾ ಹೇಳಿಕೆ ನೀಡಿದ್ದಾರೆ.


Click it and Unblock the Notifications
