ಹಾರ್ದಿಕ್ಗೆ ನಾಯಕತ್ವ ಪಂತ್ ಉಪ ನಾಯಕ
ಟಿ20 ವಿಶ್ವಕಪ್ನಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಬೆಂಚು ಕಾದಿದ್ದ ರಿಷಬ್ ಪಂತ್ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ವಿಶ್ವಕಪ್ನಲ್ಲಿ ಭಾಗವಹಿಸಿದ ಹಲವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ವಿಶ್ವಕಪ್ನಲ್ಲಿ ಎಡವಿದ ಡಿಕೆ
ಇನ್ನು ಈ ಬಾರಿಯ ವಿಶ್ವಕಪ್ ತಂಡದಲ್ಲಿ ಅರ್ಹವಾಗಿಯೇ ಸ್ಥಾನವನ್ನು ಪಡೆದುಕೊಂಡರು ದಿನೇಶ್ ಕಾರ್ತಿಕ್. ಆದರೆ ಸೂಪರ್ 12 ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿಯೂ ನಿರಾಸೆ ಮೂಡಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಡಿಕೆ ಗಳಿಸಿದ್ದು ಕೇವಲ 7 ರನ್ ಮಾತ್ರ. ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ಗಳಿಂದ ಸೋಲು ಅನುಭವಿಸಿದ ಪಂದ್ಯದಲ್ಲಿ 15 ಎಸೆತಗಳಿಂದ 6 ರನ್ಗಳಿಸಿದ್ದು ಕೂಡ ಸೇರಿದೆ. ಪಾಕಿಸ್ತಾನದ ವಿರುದ್ಧದ ರೋಚಕ ಪಂದ್ಯದಲ್ಲಿ ಡಿಕೆ ಕೇವಲ ಒಂದು ರನ್ ಮಾತ್ರವೇ ಗಳಿಸಿ ವಿಕೆಟ್ ಕಳೆದುಕೊಂಡಿದ್ದರು. ಈ ಪ್ರದರ್ಶನದ ಕಾರಣ ಹಾಗೂ ವಯಸ್ಸಿನ ಕಾರಣದಿಂದಾಗಿ ವಿಶ್ವಕಪ್ ಟೂರ್ನಿ ಡಿಕೆ ಪಾಲಿಗೆ ಕೊನೆಯ ಅವಕಾಶವಾಗಲಿದೆಯಾ ಎಂಬುದು ಈಗ ಪ್ರಶ್ನೆಯಾಗಿದೆ.
ಇದು ವಿಶ್ರಾಂತಿಯಷ್ಟೇ ಎಂದ ಆಯ್ಕೆ ಮಂಡಳಿ ಮುಖ್ಯಸ್ಥ
ಇನ್ನು ತಂಡದ ಆಯ್ಕೆಯನ್ನು ಪ್ರಕಟಿಸಿದ ಬಳಿಕ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ದಿನೇಶ್ ಕಾರ್ತಿಕ್ ಅವರನ್ನು ನ್ಯೂಜಿಲೆಂಡ್ ಸರಣಿಯಿಂದ ಹೊರಗಿಟ್ಟ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. "ವಿಶ್ವಕಪ್ ಮುಕ್ತಾಯವಾದ ಕೇವಲ ಐದು ದಿನಗಳ ಅಂತರದಲ್ಲಿ ಈ ಸರಣಿ ನಡೆಯುತ್ತಿರುವ ಕಾರಣ ಇದು ಕೆಲಸದ ಒತ್ತಡವನ್ನು ಕಡಿಮೆ ಮಾಡಲು ತೆಗೆದುಕೊಂಡ ನಿರ್ಧಾರ ಮಾತ್ರವೇ ಆಗಿದೆ. ಆ ಬಗ್ಗೆ ನಾವು ಸಾಕಷ್ಟು ಗಮನಹರಿಸುತ್ತಿದ್ದೇವೆ. ಯಾರಿಗೆ ಯಾವ ಸಂದರ್ಭದಲ್ಲಿ ವಿಶ್ರಾಂತಿ ನೀಡಬೇಕು ಎಂಬ ಬಗ್ಗೆ ನಾವು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದಿದ್ದಾರೆ. ಮುಂದುವರಿದು ಮಾತನಾಡಿದ ಚೇತನ್ ಶರ್ಮಾ ದಿನೇಶ್ ಕಾರ್ತಿಕ್ ಓರ್ವ ಅದ್ಭುತ ಆಟಗಾರನಾಗಿದ್ದು ತಂಡದ ಬಾಗಿಲು ಆತನಿಗೆ ತೆರೆದಿದೆ. ಆತನಲ್ಲಿ ಯಾವುದೇ ಸಮಸ್ಯೆಯಿಲ್ಲ. ಆತ ಭವಿಷ್ಯದಲ್ಲಿಯೂ ತಂಡದಲ್ಲಿ ಇರಲಿದ್ದಾರೆ ಎಂದು ಹೇಳುವ ಮೂಲಕ ಡಿಕೆ ಭವಿಷ್ಯ ಬಗೆಗಿನ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾದ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ), ಇಶಾನ್ ಕಿಶನ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಭುನ್ನೇಶ್ವರ್ ಕುಮಾರ್ ಪಟೇಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.