ಐಸಿಸಿ ಇಬ್ಬಗೆ ನೀತಿ ವಿರುದ್ಧ ಹರಿಹಾಯ್ದ ಹರ್ಭಜನ್ ಸಿಂಗ್

ಮುಂಬೈ, ಮಾರ್ಚ್ 26: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅವರಿಗೆ ಐಸಿಸಿ ನೀಡಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ವಿಶ್ವ ಕ್ರಿಕೆಟ್ ದಿಗ್ಗಜರುಗಳಿಂದ ಟೀಕೆ ವ್ಯಕ್ತವಾಗುತ್ತಿದೆ.
ಐಸಿಸಿಯು ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಅವರಿಗೆ ಕೇವಲ ಒಂದು ಪಂದ್ಯದ ನಿಷೇಧ ಮತ್ತು ದಂಡ ವಿಧಿಸಿದ್ದರೆ, ಬ್ರೆಂಕ್ಫೋಲ್ಡ್ ಅವರಿಗೆ ಕೇವಲ ಮೂರು ಡಿಮೆರಿಟ್ ಪಾಯಿಂಟ್ ನೀಡಿ ಕೈತೊಳೆದುಕೊಂಡಿತ್ತು. ಇದಕ್ಕೆ ಭಾರತದ ಬೌಲರ್ ಹರ್ಭಜನ್ ಸಿಂಗ್ ಸೇರಿದಂತೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಕೆವಿನ್ ಪಿಟರ್ಸನ್, ಜಿಂಬಾಬ್ವೆಯ ಗ್ರಾಂಟ್ ಫ್ಲವರ್, ಮ್ಯಾಟ್ ಪ್ರಿಯರ್ ಅವರುಗಳು ಐಸಿಸಿ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಐಸಿಸಿ ನೀಡಿರುವ ತೀರ್ಪಿನ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಟರ್ಬೊನೇಟರ್ ಖ್ಯಾತಿಯ ಹರ್ಭಜನ್ ಸಿಂಗ್, ವ್ಯಂಗ್ಯವಾಗಿ ಐಸಿಸಿಗೆ ಶಹಭಾಸ್ ಹೇಳಿದ್ದಾರೆ. ಹಳೆಯ ದಿನಗಳನ್ನು ಐಸಿಸಿಯ ನೆನಪಿಗೆ ತಂದಿರುವ ಅವರು '2001 ರಲ್ಲಿ ದಕ್ಷಿಣ ಆಫ್ರಿಕಾ ಪಂದ್ಯದ ವಿರುದ್ಧ ಸಾಕ್ಷ್ಯಗಳು ಇಲ್ಲದೆ ಇದ್ದರೂ ನಮ್ಮ ತಂಡದ ಆರು ಜನ ಆಟಗಾರರನ್ನು 'ಅತಿಯಾದ ಅಪೀಲ್' ಆರೋಪ ಹೊರಿಸಿ ಒಂದು ಪಂದ್ಯದಿಂದ ನಿಷೇಧಿಸಿದ್ದಿರಿ' ಎಂದು ಹೇಳಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ಖ್ಯಾತ ಪ್ರಕರಣಗಳಲ್ಲಿ ಒಂದಾದ 'ಮಂಕಿ ಗೇಟ್' ಪ್ರಕರಣವನ್ನೂ ಉಲ್ಲೇಖಿಸಿರುವ ಹರ್ಭಜನ್ ಸಿಂಗ್ 'ಆರೋಪ ಸಾಬೀತಾಗದೇ ಇದ್ದರೂ ನನ್ನ ವಿರುದ್ಧ ಒಂದು ಪಂದ್ಯದ ನಿಷೇಧ ಹೇರಲಾಗಿತ್ತು, ಆದರೆ ಈಗ ಸಾಕ್ಷ್ಯ ಇದ್ದರೂ ಕೂಡ ಬ್ಯಾಂಕ್ರಾಫ್ಟ್ ಅನ್ನು ನಿಷೇಧಿಸದೇ ಬಿಟ್ಟಿದ್ದೀರಿ. ಒಂದು ತಂಡಕ್ಕೆ ಒಂದು ರೀತಿಯ ನಿಯಮ ಇನ್ನೊಂದು ತಂಡಕ್ಕೆ ಇನ್ನೊಂದು ನಿಯಮವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ಆಸ್ಟ್ರೇಲಿಯನ್ನರ ಈ ಕುತಂತ್ರದ ನಡೆಯನ್ನು ಖಂಡಿಸಿದ್ದಾರೆ. ಐಸಿಸಿ ಶಿಕ್ಷೆ ನಂತರ ಕ್ರಿಕೆಟ್ ಆಸ್ಟ್ರೇಲಿಯಾವು ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅವರನ್ನು ನಾಯಕ ಉಪನಾಯಕ ಸ್ಥಾನದಿಂದ ಕೆಳಗಿಳಿಯುವಂತೆ ಹೇಳಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪಟ್ಟ ಟಿಮ್ ಪೈನೆ ಹೆಗಲೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications