
ನವದೆಹಲಿ, ಡಿಸೆಂಬರ್ 19: ಕಾಲು ಕೆರೆದು ಜಗಳಕ್ಕೆ ಹೋದೋನೇ ಯರ್ರಾಬಿರ್ರಿ ಗೂಸಾ ತಿಂದಂಗಾಗಿದೆ ಈಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕತೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತನಗೆ ದೊಡ್ಡ ಮೊತ್ತದ ಹಣವನ್ನು ಪರಿಹಾರವಾಗಿ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಈ ಹಿಂದೆ ಹೇಳಿತ್ತು. ಅದೀಗ ಪಿಸಿಬಿಗೇ ತಿರುಗುಬಾಣವಾಗಿದೆ.
2014ರಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳುವುದಾಗಿ ಎರಡೂ ಬೋರ್ಡ್ಗಳು ಮಾಡಿಕೊಂಡಿದ್ದ ಒಪ್ಪಂದವನ್ನು ಬಿಸಿಸಿಐ ಮುರಿದಿದೆ. ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಪಾಲ್ಗೊಂಡಿಲ್ಲ. ಇದರಿಂದ ನಮಗೆ ನಷ್ಟವಾಗಿದೆ. ಹೀಗಾಗಿ ಬಿಸಿಸಿಐ ನಮಗೆ ಸುಮಾರು 492 ಕೋ.ರೂ. ಪರಿಹಾರ ನೀಡಬೇಕೆಂದು ಪಿಸಿಬಿ ಈ ಹಿಂದೆ ರಚ್ಚೆ ಹಿಡಿದಿತ್ತು.
ಈ ವಿವಾದವನ್ನು ವಿಚಾರಣೆಗೆ ಒಳಪಡಿಸಿರುವ ಐಸಿಸಿ, ಬಿಸಿಸಿಐಯಿಂದ ಕೇಳಿದ್ದ ಪರಿಹಾರದ ಶೇ.60ರಷ್ಟುನ್ನು ಪಿಸಿಬಿಯೇ ಬಿಸಿಸಿಐಗೆ ನೀಡಬೇಕು ಎಂದು ಆದೇಶ ನೀಡಿದೆ. ದ್ವಿಪಕ್ಷೀಯ ಸರಣಿ ಆಡದಿರುವುದಕ್ಕೆ ರಕ್ಷಣಾ ಕಾರಣಗಳನ್ನು ಬಿಸಿಸಿಐ ವಾದದ ವೇಳೆ ಹೇಳಿಕೊಂಡಿತ್ತು. ಒಟ್ಟಿನಲ್ಲಿ ಪಾಕ್ ಕ್ರಿಕೆಟ್ ಬೋರ್ಡ್ಗೆ ಈಗ ಭಾರೀ ಮುಖಭಂಗವಾಗಿದೆ.