
ನವದೆಹಲಿ, ಜೂನ್ 20: ಐಸಿಸಿ ವಿಶ್ವಕಪ್ 2019ರಿಂದ ಶಿಖರ್ ಧವನ್ ಹೊರ ಬಿದ್ದಿದ್ದಕ್ಕೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ತಂಡಕ್ಕೆ ಧವನ್ ಬಲವಿಲ್ಲದ್ದಕ್ಕೆ ಸಂಬಂಧಿಸಿ ಗೌತಮ್ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಪ್ಯಾಟ್ ಕಮಿನ್ಸ್ ಎಸೆತ ಎದುರಿಸುವಾಗ ಆರಂಭಿಕ ಬ್ಯಾಟ್ಸ್ಮನ್ ಧವನ್ ಎಡಗೈ ಹೆಬ್ಬೆಳಿಗೆ ಗಾಯ ಮಾಡಿಕೊಂಡಿದ್ದರು. ಆದರೂ ತಂಡದಲ್ಲೇ ಉಳಿಸಿಕೊಂಡು ಅವರ ಆರೋಗ್ಯ ಸುಧಾರಣೆ ಬಗ್ಗೆ ಬಿಸಿಸಿಐ ನಿಗಾವಹಿಸಲಾಗಿತ್ತು.
ಆದರೆ ಧವನ್ ಶೀಘ್ರ ಚೇತರಿಕೆಯ ಮುನ್ಸೂಚನೆ ಕಾಣದಿದ್ದರಿಂದ ಅವರು ಮುಂದಿನ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ಬಿಸಿಸಿಐ ಬುಧವಾರ (ಜೂನ್ 19) ಖಾತರಿಪಡಿಸಿತ್ತು. 'ಗಬ್ಬರ್ ಸಿಂಗ್' ಶಿಖರ್ ಬದಲಿಗೆ ಯುವ ಬ್ಯಾಟ್ಸ್ಮನ್, ವಿಕೆಟ್ ಕೀಪರ್ ರಿಷಬ್ ಪಂತ್ಗೆ ಸ್ಥಾನ ನೀಡುತ್ತಿರುವುದಾಗಿ ಬಿಸಿಸಿಐ ತಿಳಿಸಿತ್ತು.
ಧವನ್ ಕುರಿತು ಟ್ವೀಟ್ ಮಾಡಿರುವ ಗಂಭೀರ್, 'ವಿಶ್ವಕಪ್ನಲ್ಲಿ ಧವನ್ ಇನ್ನು ಆಡುತ್ತಿಲ್ಲವೆಂದು ತಿಳಿದಾಗ ತುಂಬಾ ಬೇಸರವಾಯಿತು. ನನ್ನ ಹಾರೈಕೆ ಯಾವತ್ತಿಗೂ ನಿನ್ನೊಂದಿಗಿದೆ ಸಹೋದರಾ. ಬೇಸರಿಸಬೇಡ, ಜಗತ್ತೇನೂ ಕೊನೆಗೊಂಡಿಲ್ಲ. ಇನ್ನೂ ಅವಕಾಶಗಳಿಗೆ' ಎಂದು ಬರೆದುಕೊಂಡಿದ್ದಾರೆ.
ಧವನ್ ಸ್ಥಾನಕ್ಕೆ ಭಾರತದ 15 ಜನರ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಪಂತ್ಗೆ ಗೌತಮ್ ಶುಭ ಹಾರೈಸಿದ್ದಾರೆ. 'ಪಂತ್ಗೆ ಶುಭ ಹಾರೈಕೆಗಳು. ಪಂತ್ ಮೇಲೆ ಅನಗತ್ಯ ಒತ್ತಡ ಬೀಳದಿರುವುದನ್ನು ನಾನು ಬಯಸಿದ್ದೇನೆ' ಎಂದೂ ಸಾಲು ಸೇರಿಸಿಕೊಂಡಿದ್ದಾರೆ. ಪಂತ್ ಸದ್ಯ ಟೀಮ್ ಇಂಡಿಯಾದಲ್ಲಿ ಹೆಸರಿಸಲ್ಪಟ್ಟಿದ್ದಾರಾದರೂ ಆಡುವ 11ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೋ ಎಂಬುದು ಇನ್ನೂ ಖಾತ್ರಿಯಾಗಿಲ್ಲ.