
ಚಟ್ಟೋಗ್ರಾಮ್ನಲ್ಲಿ ಬುಧವಾರ, ಡಿಸೆಂಬರ್ 14ರಂದು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನ ಮೊದಲ ದಿನದಂದು ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಉತ್ತಮವಾದ ಪ್ರದರ್ಶನ ನೀಡಿದರು.
ಶ್ರೇಯಸ್ ಅಯ್ಯರ್ 10 ಬೌಂಡರಿಗಳ ಸಮೇತ ಮೊದಲ ದಿನದಾಟದ ಅಂತ್ಯಕ್ಕೆ 82 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಇನ್ನು ಭಾರತ ತಂಡ ಮೊದಲ ದಿನ 90 ಓವರ್ಗಳಲ್ಲಿ 278 ರನ್ಗೆ 6 ವಿಕೆಟ್ ಕಳೆದುಕೊಂಡು ಮಿಶ್ರಫಲ ಅನುಭವಿಸಿತು.
ರಿಷಭ್ ಪಂತ್ ವಿಕೆಟ್ ಬಿದ್ದಾಗ ಭಾರತ ತಂಡ 112 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಬ್ಯಾಟಿಂಗ್ಗೆ ಬಂದ ಶ್ರೇಯಸ್ ಅಯ್ಯರ್ ನಿಧಾನವಾಗಿ ಚೇತೇಶ್ವರ ಪೂಜಾರ ಜೊತೆ ಇನ್ನಿಂಗ್ಸ್ ಕಟ್ಟಿದರು.

ಒತ್ತಡದಲ್ಲಿದ ಭಾರತವನ್ನು ಮೇಲೆತ್ತಿದ ಈ ಇಬ್ಬರು ನಂಬಿಕಸ್ಥ ಬ್ಯಾಟ್ಸ್ಮನ್ಗಳು ಐದನೇ ವಿಕೆಟ್ಗೆ 149 ರನ್ಗಳ ಜೊತೆಯಾಟವನ್ನು ನೀಡಿ ಮೊದಲ ದಿನದ ಗೌರವ ಉಳಿಸಿದರು.
ಚೇತೇಶ್ವರ ಪೂಜಾರ ಅವರು ದುರದೃಷ್ಟಕರವಾಗಿ 10 ರನ್ಗಳ ಕೊರತೆಯಿಂದ ಅತ್ಯುತ್ತಮ ಶತಕ ತಪ್ಪಿಸಿಕೊಂಡರು. ಇದೇ ವೇಳೆ ಶ್ರೇಯಸ್ ಅಯ್ಯರ್ಗೆ ಎರಡನೇ ಜೀವದಾನ ಸಿಕ್ಕಿತು.
ಇನಿಂಗ್ಸ್ನ 84ನೇ ಓವರ್ನಲ್ಲಿ ಎಬಾಡೋಟ್ ಹೊಸೈನ್ ಎಸೆದ ಮಧ್ಯಮ ವೇಗದ ಎಸೆತವು ಲೆಗ್ ಸ್ಟಂಪ್ನ್ನು ಸವರಿ ಹೋಯಿತು. ಆಗ ಬೆಲ್ಸ್ನಲ್ಲಿ ಲೈಟ್ ಮೂಡಿದವು. ಆದರೆ ಒಂದು ಬೆಲ್ಸ್ ಮೇಲೆ ಹಾರಿದರೂ, ಕೆಳಕ್ಕೆ ಬೀಳದೆ ಸ್ಟಂಪ್ ಮೇಲೆ ಇದ್ದವು. ಇದು ಅಂತರರಾಷ್ಟ್ರೀಯ ಕ್ರಿಕೆಟ್ನ ವಿಚಿತ್ರ ಘಟನೆಗಳಲ್ಲಿ ಒಂದಾಗಿದೆ.
ಆ ಕ್ಷಣ ಬ್ಯಾಟ್ಸ್ಮನ್ ಅಯ್ಯರ್ ಸೇರಿದಂತೆ ಬೌಲರ್, ಸ್ಲಿಪ್ ಫೀಲ್ಡರ್ ಆಚ್ಚರಿಗೊಂಡರು. ಶ್ರೇಯಸ್ ಅಯ್ಯರ್ ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ, ಔಟಾಗಲಿಲ್ಲ. ಕ್ಲೀನ್ ಬೌಲ್ಡ್ ಆಗಿದ್ದರೂ ಶ್ರೇಯಸ್ ಅಯ್ಯರ್ ನಾಟೌಟ್ ಆದ ವಿಡಿಯೋ ಇಲ್ಲಿದೆ.
ಶ್ರೇಯಸ್ ಅಯ್ಯರ್ ಶತಕದ ಸಮೀಪದಲ್ಲಿದ್ದಾರೆ. ಆದರೂ, ಅವರಿಗೆ ಇನ್ನೊಂದು ತುದಿಯಿಂದ ಬೆಂಬಲದ ಅಗತ್ಯವಿದೆ. ದಿನದ ಕೊನೆಯ ಎಸೆತದಲ್ಲಿ ಔಟಾದ ಅಕ್ಷರ್ ಪಟೇಲ್ ರೂಪದಲ್ಲಿ ಭಾರತ 6ನೇ ವಿಕೆಟ್ ಕಳೆದುಕೊಂಡಿತು. ಮೆಹಿದಿ ಹಸನ್ ಮಿರಾಜ್ ಎಸೆದ 90ನೇ ಓವರ್ನ ಕೊನೆಯ ಎಸೆತದಲ್ಲಿ ಅಕ್ಷರ್ ಎಲ್ಬಿಡಬ್ಲ್ಯೂ ಆದರು.
2ನೇ ದಿನದಂದು ಭಾರತವು ಟೆಸ್ಟ್ ಪಂದ್ಯವನ್ನು ಪುನರಾರಂಭಿಸಿದಾಗ ರವಿಚಂದ್ರನ್ ಅಶ್ವಿನ್ ಮುಂದಿನ ಬ್ಯಾಟಿಂಗ್ಗೆ ಬರಲಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ಶತಕವನ್ನು ಪೂರ್ಣಗೊಳಿಸಲು ಮತ್ತು ಭಾರತವನ್ನು 300ರಿಂದ 350 ರನ್ ದಾಟಿಸಲು ಪ್ರಯತ್ನಿಸಲಿದ್ದಾರೆ.

ಮೊದಲ ದಿನ ಬಾಂಗ್ಲಾದೇಶ ಪರ ಬೌಲಿಂಗ್ನಲ್ಲಿ ತೈಜುಲ್ ಇಸ್ಲಾಂ ಮೂರು ವಿಕೆಟ್ ಪಡೆದರೆ, ಮೆಹಿದಿ ಹಸನ್ ಮಿರಾಜ್ ಎರಡು ವಿಕೆಟ್ ಪಡೆದರು. ಮೊದಲ ಅವಧಿಯಲ್ಲಿ ಬಿದ್ದ ಕೆಎಲ್ ರಾಹುಲ್ ಅವರ ವಿಕೆಟ್ ಅನ್ನು ಖಲೀದ್ ಅಹ್ಮದ್ ಪಡೆದರು.