ಭಾರತ vs ಇಂಗ್ಲೆಂಡ್: ಜೋ ರೂಟ್ ಮಾಡಿದ ಈ 3 ತಪ್ಪುಗಳಿಂದ ಭಾರತದ ಗೆಲುವು ಸುಲಭವಾಯಿತು!

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದಿದೆ. ನಾಟಿಂಗ್ ಹ್ಯಾಂ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು, ಆದರೆ ಲಾರ್ಡ್ಸ್ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡದ ವಿರುದ್ಧ 151 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್ನಲ್ಲಿ 364 ರನ್ ಗಳಿಸಿತು, ಇತ್ತ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡ ಮೊದಲನೇ ಇನ್ನಿಂಗ್ಸ್ನಲ್ಲಿ 391 ರನ್ ಗಳಿಸಿ 27 ರನ್ಗಳ ಮುನ್ನಡೆ ಸಾಧಿಸಿತ್ತು. ಹೀಗೆ ಮೊದಲನೇ ಇನ್ನಿಂಗ್ಸ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳೆರಡು ಸಮಬಲದ ಹೋರಾಟ ನಡೆಸಿದ್ದವು. ಹೀಗಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಮತ್ತಷ್ಟು ರೋಚಕ ಹಣಾಹಣಿಯ ನಿರೀಕ್ಷೆ ಇತ್ತು. ಅದರಂತೆಯೇ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ನಾಲ್ಕನೇ ದಿನದಾಟವನ್ನು ಅಂತ್ಯಗೊಳಿಸಿತ್ತು. ಹೀಗೆ ಎರಡನೇ ಇನ್ನಿಂಗ್ಸ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ ಗೆಲುವಿನ ಕಡೆ ಹೆಜ್ಜೆ ಹಾಕುತ್ತಿದ್ದ ಇಂಗ್ಲೆಂಡ್ ಐದನೇ ದಿನ ಭಾರತದ ಎದುರು ಅಕ್ಷರಶಃ ಮಂಕಾಯಿತು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 8 ವಿಕೆಟ್ ಕಳೆದುಕೊಂಡ ನಂತರ ಒಂಬತ್ತನೇ ವಿಕೆಟ್ಗೆ ಜೊತೆಯಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ 89 ರನ್ಗಳ ಜತೆಯಾಟ ಆಡುವುದರ ಮೂಲಕ ಇಂಗ್ಲೆಂಡ್ ತಂಡಕ್ಕೆ 271 ರನ್ಗಳ ಕಠಿಣ ಗುರಿಯನ್ನೇ ನೀಡಿದರು. ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಟೀಂ ಇಂಡಿಯಾ ನೀಡಿದ್ದ 271 ರನ್ ಗುರಿ ತಲುಪಲಾಗದೇ 120 ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 151 ರನ್ಗಳ ಸೋಲನುಭವಿಸಿತು. ಹೀಗೆ ಮೊದಲನೇ ಇನ್ನಿಂಗ್ಸ್ನಲ್ಲಿ ಲೀಡ್ ತೆಗೆದುಕೊಂಡಿದ್ದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಹೀನಾಯ ಪ್ರದರ್ಶನ ನೀಡುವ ಮೂಲಕ ಪಂದ್ಯದಲ್ಲಿ ಸೋಲನುಭವಿಸಿತು. ಇಂಗ್ಲೆಂಡ್ ತಂಡ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿ ಭಾರತದ ಎದುರು ಶರಣಾಗಲು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮಾಡಿದ ಈ ಕೆಳಕಂಡ ತಪ್ಪುಗಳು ಕೂಡ ಕಾರಣವೆನ್ನಬಹುದು..

ಐದನೇ ದಿನ ಆ್ಯಂಡರ್ಸನ್ಗೆ ಸರಿಯಾಗಿ ಬೌಲಿಂಗ್ ನೀಡದೇ ಇದ್ದದ್ದು
ಎರಡನೇ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ಔಟ್ ಆಗುತ್ತಾ ಇದ್ದಂತೆ ನಿಟ್ಟುಸಿರುಬಿಟ್ಟ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ನಂತರ ಬಂದ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ವಿರುದ್ಧ ಆರಂಭದಲ್ಲಿಯೇ ಜೇಮ್ಸ್ ಆ್ಯಂಡರ್ಸನ್ಗೆ ಬೌಲಿಂಗ್ ಮಾಡುವ ಅವಕಾಶವನ್ನು ನೀಡಲಿಲ್ಲ. ರಾಬಿನ್ಸನ್, ಮೊಯಿನ್ ಅಲಿ ಇಬ್ಬರೂ ಸಹ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ಬೌಲಿಂಗ್ ಮಾಡಿ ಸಾಕಷ್ಟು ರನ್ ನೀಡಿದ್ದರು ಮತ್ತು ಈ ಸಮಯದಲ್ಲಿ ಮೊಹಮ್ಮದ್ ಶಮಿ ಪಿಚ್ಗೆ ಹೊಂದಿಕೊಳ್ಳುವಲ್ಲಿ ಯಶಸ್ವಿಯಾದರು. ತದನಂತರ ಜೇಮ್ಸ್ ಆ್ಯಂಡರ್ಸನ್ಗೆ ಬೌಲಿಂಗ್ ನೀಡಿದರೂ ಸಹ ಯಾವುದೇ ವಿಕೆಟ್ ಪಡೆಯಲಾಗಲಿಲ್ಲ. ಹೀಗಾಗಿ ಮೊಹಮ್ಮದ್ ಶಮಿ ಮೈದಾನಕ್ಕಿಳಿದ ಕೂಡಲೇ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ ಮಾಡಿದ್ದರೆ ಆ ಸಂದರ್ಭದಲ್ಲಿಯೇ ಜಸ್ ಪ್ರೀತ್ ಬುಮ್ರಾ ಮತ್ತು ಶಮಿಯನ್ನು ಕಟ್ಟಿ ಹಾಕಬಹುದಿತ್ತು.

ನಾಲ್ಕನೇ ದಿನ ತೆಗೆದುಕೊಂಡ ಆತುರದ ನಿರ್ಧಾರ
ನಾಲ್ಕನೇ ದಿನದಾಟದ ಕೊನೆಯಲ್ಲಿ ಇನ್ನೂ 30 ನಿಮಿಷಗಳ ಆಟ ಬಾಕಿ ಇರುವಾಗಲೇ ಕೆಟ್ಟ ಬೆಳಕಿನ ಕಾರಣದಿಂದ ಮೈದಾನದಲ್ಲಿದ್ದ ರಿಷಭ್ ಪಂತ್ ಮತ್ತು ಇಶಾಂತ್ ಶರ್ಮಾ ತೀರ್ಪುಗಾರರಿಗೆ ಕೆಟ್ಟ ಬೆಳಕಿನ ಕುರಿತು ದೂರು ನೀಡಿದರು. ಹೀಗಾಗಿ ಆಟವನ್ನು ನಾಲ್ಕನೇ ದಿನದ ಕೊನೆಯಲ್ಲಿ ಮುಂದುವರೆಸಲು ಭಾರತೀಯ ಆಟಗಾರರು ಸಿದ್ಧವಿರಲಿಲ್ಲ. ರಿಷಭ್ ಪಂತ್ ರನ್ ಕಲೆಹಾಕಲು ಎಡವುತ್ತಿದ್ದರು ಮತ್ತು ಇಶಾಂತ್ ಶರ್ಮಾ ಕೂಡ ವಿಶ್ವಾಸದಿಂದ ಬ್ಯಾಟ್ ಬೀಸುತ್ತಿರಲಿಲ್ಲ. ಮತ್ತೊಂದೆಡೆ ಇಂಗ್ಲೆಂಡ್ ತಂಡಕ್ಕೆ ಹೊಸ ಬಾಲ್ ತೆಗೆದುಕೊಳ್ಳುವ ಅವಕಾಶವಿತ್ತು. ಇಂತಹ ಸಮಯದಲ್ಲಿ ಜೋ ರೂಟ್ ಹೊಸ ಬಾಲ್ ತೆಗೆದುಕೊಂಡು ಪಂದ್ಯವನ್ನು ಮುಂದುವರಿಸದೇ ಪಂದ್ಯವನ್ನು ಅಲ್ಲಿಗೆ ನಿಲ್ಲಿಸಲು ಒಪ್ಪಿಗೆ ನೀಡಿ ತಪ್ಪು ಮಾಡಿದರು ಎಂದರೆ ತಪ್ಪಾಗಲಾರದು. ಪಂದ್ಯ ಮುಂದುವರಿಸಲು ಇನ್ನೂ ಸಮಯವಿದ್ದಾಗ ಹೊಸ ಬಾಲ್ ತೆಗೆದುಕೊಂಡು ಟೀಮ್ ಇಂಡಿಯಾದ ಮತ್ತಷ್ಟು ವಿಕೆಟ್ನ್ನು ನಾಲ್ಕನೇ ದಿನವೇ ಪಡೆದುಕೊಂಡಿದ್ದರೆ ಬುಮ್ರಾ ಮತ್ತು ಮೊಹಮ್ಮದ್ ಶಮಿ ಇಷ್ಟು ದೊಡ್ಡ ಮಟ್ಟದ ಪ್ರದರ್ಶನ ನೀಡುವುದು ಸುಲಭದ ಮಾತಾಗಿರಲಿಲ್ಲ.

ಮೊದಲ ಇನ್ನಿಂಗ್ಸ್ನಲ್ಲಿ ಆ್ಯಂಡರ್ಸನ್ಗೆ ಸ್ಟ್ರೈಕ್ ಬಿಟ್ಟುಕೊಟ್ಟದ್ದು ತಪ್ಪು
ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ಅಜೇಯ 180 ರನ್ ಬಾರಿಸಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ತಂಡ 9 ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ನಾನ್ ಸ್ಟ್ರೈಕ್ ಕೊನೆಯಲ್ಲಿದ್ದ ಜೇಮ್ಸ್ ಆ್ಯಂಡರ್ಸನ್ಗೆ ಓವರ್ವೊಂದರ ಮಧ್ಯದಲ್ಲಿಯೇ ಬ್ಯಾಟಿಂಗ್ ಮಾಡುವ ಅವಕಾಶವನ್ನು ಬಿಟ್ಟುಕೊಟ್ಟರು. ಮೊದಲೇ ಬೌಲಿಂಗ್ ಮಾಡಿ ಸಾಕಷ್ಟು ಸುಸ್ತಾಗಿದ್ದ ಜೇಮ್ಸ್ ಆ್ಯಂಡರ್ಸನ್ ಜಾಣ್ಮೆಯ ಆಟವಾಡದೇ ವಿಕೆಟ್ ಒಪ್ಪಿಸಿದರು. ಹೀಗೆ ಜೇಮ್ಸ್ ಆ್ಯಂಡರ್ಸನ್ಗೆ ಬ್ಯಾಟಿಂಗ್ ಬಿಟ್ಟುಕೊಡದೆ ಇನ್ನೂ ಸ್ವಲ್ಪ ಹೊತ್ತು ಜೋ ರೂಟ್ ಬ್ಯಾಟಿಂಗ್ ಮಾಡಿದ್ದರೆ ಅವರು ದ್ವಿಶತಕವನ್ನು ಬಾರಿಸಬಹುದಿತ್ತು ಮತ್ತು ಇಂಗ್ಲೆಂಡ್ ತಂಡದ ಲೀಡ್ ರನ್ನ್ನು ಮತ್ತಷ್ಟು ಹೆಚ್ಚಿಸುವುದರ ಮೂಲಕ ಭಾರತದ ಮೇಲೆ ಒತ್ತಡವನ್ನು ಹೇರಬಹುದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications