
ಬುಧವಾರ, ಫೆಬ್ರವರಿ 1ರಂದು ನಡೆಯಲಿರುವ ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಸರಣಿ ಗೆಲುವಿಗಾಗಿ ಸೆಣಸಾಡಲಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹೀನಾಯ ಸೋಲಿನ ನಂತರ, ಭಾರತ ತಂಡವು ಎರಡನೇ ಟಿ20 ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಪ್ರಯಾಸಕರ ಗೆಲುವು ದಾಖಲಿಸಿ, ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿಕೊಂಡಿತು.
ಇದೀಗ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ಬುಧವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲೂ ಗೆಲುವು ದಾಖಲಿಸಿ ಸರಣಿ ಕೈವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಕಳೆದೆರಡು ಟಿ20 ಪಂದ್ಯಗಳಲ್ಲಿ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕ್ರಮವಾಗಿ 7 ಮತ್ತು 11 ರನ್ಗಳಿಗೆ ಔಟಾದರು. ಅವರು ಇತ್ತೀಚಿನ ಏಕದಿನ ಸ್ವರೂಪದಲ್ಲಿ ಪ್ರದರ್ಶಿಸಿದ ಅದ್ಭುತ ಬ್ಯಾಟಿಂಗ್ ಫಾರ್ಮ್ ಟಿ20 ಸರಣಿಯಲ್ಲಿ ಮುಂದುವರೆಸಲು ವಿಫಲರಾದರು.

ನ್ಯೂಜಿಲೆಂಡ್ ವಿರುದ್ಧದ ಸರಣಿ ನಿರ್ಣಾಯಕ ಮೂರನೇ ಟಿ20 ಪಂದ್ಯದಲ್ಲಿ ಶುಭ್ಮನ್ ಗಿಲ್ ಬದಲಿಗೆ ಭಾರತ ತಂಡದ ಮ್ಯಾನೇಜ್ಮೆಂಟ್ ಬೆಂಚ್ ಕಾಯಿಸುತ್ತಿರುವ ಪೃಥ್ವಿ ಶಾ ಅವರಿಗೆ ಅವಕಾಶ ನೀಡಬಹುದು ಎಂದು ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಶುಭ್ಮನ್ ಗಿಲ್ ಹೇಗೆ ಆಡಿದ್ದಾರೆ ಎಂಬುದನ್ನು ನೀವು ಈಗಾಗಲೇ ನೋಡಿದ್ದೀರಿ. ಪೃಥ್ವಿ ಶಾ ಸ್ಫೋಟಕ ಬ್ಯಾಟ್ಸ್ಮನ್ ಮತ್ತು ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿದ್ದಾರೆ. ಭಾರತ ತಂಡ ಪೃಥ್ವಿ ಶಾ ಅವರಿಗೆ ಶುಭ್ಮನ್ ಗಿಲ್ ಬದಲಿಯಾಗಿ ಅವಕಾಶ ನೀಡಬಹುದು," ಎಂದು ದಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
"ಶುಭ್ಮನ್ ಗಿಲ್ ಉತ್ತಮ ಬ್ಯಾಟ್ಸ್ಮನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಅವರ ಬ್ಯಾಟಿಂಗ್ನಲ್ಲಿನ ಕೆಲವು ನ್ಯೂನತೆಗಳನ್ನು ನೋಡಬೇಕಾಗಿದೆ. ಕಿವೀಸ್ ಸ್ಪಿನ್ ಬೌಲರ್ಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಭಾರತ ಗೆದ್ದರೂ, ಬ್ಯಾಟಿಂಗ್ನಲ್ಲಿ ಕೆಲವು ಸುಧಾರಣೆಯ ಅವಶ್ಯಕತೆಯಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ," ಎಂದು ದಾನಿಶ್ ಕನೇರಿಯಾ ತಿಳಿಸಿದರು.
ಇದೇ ವೇಳೆ ಭಾರತದ ಮಾಜಿ ಎಡಗೈ ಬ್ಯಾಟರ್ ಗೌತಮ್ ಗಂಭೀರ್ ಕೂಡ ಶುಭ್ಮನ್ ಗಿಲ್ ಮತ್ತು ಪೃಥ್ವಿ ಶಾ ನಡುವಿನ ಬ್ಯಾಟಿಂಗ್ ಬಗ್ಗೆ ವ್ಯತ್ಯಾಸ ತಿಳಿಸಿದ್ದಾರೆ.
ಶುಭ್ಮನ್ ಗಿಲ್ ಅವರ ಆಟವು ಟಿ20 ಕ್ರಿಕೆಟ್ಗಿಂತ ಏಕದಿನ ಕ್ರಿಕೆಟ್ಗೆ ಸರಿಹೊಂದುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಪೃಥ್ವಿ ಶಾ ಒಬ್ಬ ಆಕ್ರಮಣಕಾರಿ ಆಟಗಾರನಾಗಿದ್ದು, ಅವರ ಆಟವು ಟಿ20 ಸ್ವರೂಪಕ್ಕೆ ಹೇಳಿಮಾಡಿಸಿದಂತಿದೆ ಎಂದು ಗೌತಮ್ ಗಂಭಿರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.