ಟೀಮ್ ಇಂಡಿಯಾದ ಟೆಸ್ಟ್ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಸ್ಥಾನ ಇತ್ತೀಚೆಗೆ ಸಾಕಷ್ಟು ಅಸ್ಥಿರವಾಗಿದೆ. ಸಿಕ್ಕ ಅವಕಾಶವನ್ನು ಅಗರ್ವಾಲ್ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದರು. ಆದರೆ ಮುಂಬೈ ಟೆಸ್ಟ್ನಲ್ಲಿ ಎರಡೂ ಕೈಗಳಿಂದ ಅವಕಾಶವನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದ್ದಾರೆ. ಮೊದಲ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ.
ಮಯಾಂಕ್ ಅಗರ್ವಾಲ್ ಬರೊಬ್ಬರಿ 24 ತಿಂಗಳ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಸುದೀರ್ಘ ಕಾಲದಿಂದ ಕಾಯುತ್ತಿದ್ದ ಶತಕವನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಈ ಅದ್ಭುತ ಶತಕ ಸಿಡಿಸಿದ ನಂತರ ಮಯಾಂಕ್ ಅಗರ್ವಾಲ್ ಈ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ನ ಇಬ್ಬರು ದಿಗ್ಗಜರಿಂದ ಪಡೆದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ. ಈ ಸಲಹೆಯ ಕಾರಣದಿಂದಾಗಿ ತನ್ನಿಂದ ಇಂತಾ ಇನ್ನಿಂಗ್ಸ್ ಬರಲು ಸಾಧ್ಯವಾಯಿತು ಎಂದಿದ್ದಾರೆ.
ಜಡೇಜಾ ಸೇರಿ ಮೂವರು ಪ್ರಮುಖರು ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ನಿಂದ ಹೊರಕ್ಕೆ!
ಮಯಾಂಕ್ ಅಗರ್ವಾಲ್ಗೆ ಮುಂಬೈ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹಾಗೂ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಕೆಲ ಅಮೂಲ್ಯ ಸಲಹೆಗಳನ್ನು ನಿಡಿದ್ದರಂತೆ. ಈ ಸಲಹೆಗಳ ಕಾರಣದಿಂದಾಗಿಯೇ ತಾನು ಶತಕ ಸಿಡಿಸಲು ಸಾಧ್ಯವಾಯಿತು ಎಂದು ಸ್ವತಃ ಮಯಾಂಕ್ ಅಗರ್ವಾಲ್ ಹೇಳಿಕೊಂಡಿದ್ದಾರೆ.
"ಸನ್ನಿ ಸರ್(ಸುನಿಲ್ ಗವಾಸ್ಕರ್) ನನ್ನ ಬಳಿ ಇನ್ನಿಂಗ್ಸ್ನ ಆರಂಭದಲ್ಲಿ ಬ್ಯಾಟ್ಅನ್ನು ಸ್ವಲ್ಪ ಕೆಳಕ್ಕೆ ಹಿಡಿದುಕೊಳ್ಳುವಂತೆ ಸಲಹೆ ನೀಡಿದ್ದರು. ನಾನು ಅದನ್ನು ಸಣ್ಣ ಅವಧಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗಲಾರದು. ಆದರೆ ಅದನ್ನು ನಾನು ಖಂಡಿತಾ ಮಾಡುತ್ತೇನೆ. ನಾನು ಅವರ ಭುಜದ ಸ್ಥಾನವನ್ನು ಗಮನಿಸಿಕೊಂಡೆ. ನಾನು ಯಾವ ಕಡೆಗೆ ಹೆಚ್ಚು ವಾಲಿಕೊಂಡಿರಬೇಕು ಎಂಬುದನ್ನು ಅರ್ಥೈಸಿಕೊಂಡೆ" ಎಂದು ಮಯಾಂಕ್ ಅಗರ್ವಾಲ್ ಮೊದಲ ದಿನದಾಟದ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಭಾರತ vs ನ್ಯೂಜಿಲೆಂಡ್: ದ್ರಾವಿಡ್ ಬೌಲಿಂಗ್ಗೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರೋ ವಿಡಿಯೋ ವೈರಲ್
ಇನ್ನು ಇದೇ ಸಂದರ್ಭದಲ್ಲಿ ಮಯಾಂಕ್ ಅಗರ್ವಾಲ್ ಕೋಚ್ ರಾಹುಲ್ ದ್ರಾವಿಡ್ ಮೈದಾನದಲ್ಲಿ ಸಾಧ್ಯವಾದಷ್ಟು ಅತ್ಯುತ್ತಮ ಪ್ರದರ್ಶನ ನೀಡಲು ನೀಡಿದ ಸಲಹೆಯನ್ನು ಕೂಡ ಮಯಾಂಕ್ ಅಗರ್ವಾಲ್ ಬಹಿರಂಗೊಡಿಸಿದ್ದಾರೆ."ನನ್ನನ್ನು ಈ ಪಂದ್ಯದಲ್ಲಿ ಆಡುವ ಬಳಗಕ್ಕೆ ಸೇರಿಸಿಕೊಂಡ ನಂತರ ರಾಹುಲ್ ದ್ರಾವಿಡ್ ಅವರು ನನ್ನ ಬಳಿ ಬಂದು ಮಾತನಾಡಿದರು. ಈ ಸಂದರ್ಭದಲ್ಲಿ ನನ್ನ ಕೈಯ್ಯಲ್ಲಿರುವುದನ್ನು ನಿಯಂತ್ರಿಸಲು ಹೇಳಿದರು. ಮೈದಾನಕ್ಕೆ ಇಳಿ ಅಲ್ಲಿ ನಿನ್ನಿಂದ ಎಷ್ಟು ಉತ್ತಮ ಆಟ ಆಡಲು ಸಾಧ್ಯವಾಗುತ್ತದೋ ಅದನ್ನು ಆಡು. ನಾವು ನಿನ್ನಿಂದ ಅಷ್ಟು ಮಾತ್ರವೇ ಬಯಸುತ್ತಿದ್ದೇವೆ" ಎಂದು ರಾಹುಲ್ ದ್ರಾವಿಡ್ ಹೇಳಿದರು ಎಂಬುದನ್ನು ಮಯಾಂಕ್ ಬಹಿರಂಗಪಡಿಸಿದರು.
ಇನ್ನು ಈ ಸಂದರ್ಣದಲ್ಲಿ ಎರಡನೇ ದಿನದಾಟದ ಆರಂಭಿಕ ಸೆಶನ್ನ ಆಟ ಬಹಳ ಮುಖ್ಯ ಎಂದಿದ್ದಾರೆ ಮಯಾಂಕ್ ಅಗರ್ವಾಲ್. "ನಾನು ಮುಂಜಾನೆ ನಾವು ಯಾವ ರೀತಿಯಾಗಿ ಆರಂಭ ಮಾಡುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಮೊದಲ ಸೆಶನ್ ಬಹಳ ನಿರ್ಣಾಯಕ. ಮೊದಲ ಸೆಶನ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವತ್ತ ನನ್ನ ಗಮನವಿರುತ್ತದೆ. ಬಳಿಕ ನಾವು ಬಯಸಿದ ರನ್ಗಳನ್ನು ಗಳಿಸಲು ಸಾಧ್ಯವಿದೆ. ಸಮಯ ಕಳೆದಂತೆ ಪಿಚ್ ಬಹಳ ಕಠಿಣವಾಗುತ್ತದೆ ಸಾಗುತ್ತದೆ" ಎಂದು ಮಯಾಂಕ್ ಅಗರ್ವಾಲ್ ವಿವರಿಸಿದ್ದಾರೆ.
ಟೀಮ್ ಇಂಡಿಯಾ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಉಮೇಶ್ ಯಾದವ್, ಜಯಂತ್ ಯಾದವ್, ಮತ್ತು ಮೊಹಮ್ಮದ್ ಸಿರಾಜ್
ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ರಚಿನ್ ರವೀಂದ್ರ, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್