ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಗಾಯಗೊಂಡಿದ್ದ ಟೀಮ್ ಇಂಡಿಯಾ ಆಟಗಾರ ಏಕದಿನ ಸರಣಿಯಲ್ಲಿ ಆಡಲು ಫಿಟ್ ಆಗಿದ್ದಾರೆ ಎಂದು ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಮಾಹಿತಿ ನೀಡಿದ್ದಾರೆ. ಬೂಮ್ರಾ ಹೀಗೆ ಮಾಹಿತಿ ನೀಡಿದ್ದು ಭಾರತೀಯ ತಂಡದ ಬೌಲಿಂಗ್ ಅಸ್ತ್ರ ಮೊಹಮ್ಮದ್ ಸಿರಾಜ್ ಬಗ್ಗೆ. ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಸಿರಾಜ್ ಗಾಯಗೊಂಡು ಬೌಲಿಂಗ್ ನಡೆಸಲು ಸಾಧ್ಯವಾಗಿರಲಿಲ್ಲ. ಬಳಿಕ ಅಂತಿಮ ಪಂದ್ಯದಿಂದಲೂ ಸಿರಾಜ್ ಸಂಪೂರ್ಣವಾಗಿ ಹೊರಗುಳಿದಿದ್ದರು. ಸಿರಾಜ್ ಸ್ಥಾನದಲ್ಲಿ ಅನುಭವಿ ಉಮೇಶ್ ಯಾದವ್ ಕಣಕ್ಕಿಳಿದಿದ್ದರು.
ದಕ್ಷಿಣ ಆಪ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತೀಯ ತಂಡದ ನೇತೃತ್ವವನ್ನು ಕೆಎಲ್ ರಾಹುಲ್ ವಹಿಸಿಕೊಂಡಿದ್ದರೆ ಉಪ ನಾಯಕನ ಹೊಣೆಗಾರಿಗೆ ಜಸ್ಪ್ರೀತ್ ಬೂಮ್ರಾ ಹೆಗಲೇರಿದೆ. ಹೀಗಾಗಿ ಮಾಧ್ಯಮಗಳ ಜೊತೆಗಿನ ಸಂವಾದದಲ್ಲಿ ಬೂಮ್ರಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತೊರೆದ ವಿಚಾರವಾಗಿಯೇ ಮಾಧ್ಯಮಗಳಿಂದ ಸಾಕಷ್ಟು ಪ್ರಶ್ನೆಗಳು ಬಂದಿತ್ತು. ಈ ಸಂದರ್ಭದಲ್ಲಿ ಬೂಮ್ರಾ ಮೊಹಮ್ಮದ್ ಸಿರಾಜ್ ಅವರ ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೊಹ್ಲಿಯದ್ದು ವೈಯಕ್ತಿಕ ನಿರ್ಧಾರ: ನಾಯಕತ್ವ ತೊರೆದ ವಿರಾಟ್ ಬಗ್ಗೆ ಗಂಗೂಲಿ ಮೊದಲ ಪ್ರತಿಕ್ರಿಯೆ
ಮೂರನೇ ಟೆಸ್ಟ್ ಪಂದ್ಯದಿಂದ ಸಿರಾಜ್ ಸಂಪೂರ್ಣವಾಗಿ ಹೊರಗುಳಿದಿದ್ದು ಏಕದಿನ ಸರಣಿಗೆ ಸಿದ್ಧವಾಗುವ ಗುರಿ ಹೊಂದಿದ್ದರು. ಸೋಮವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಬೂಮ್ರಾ ಸಿರಾಜ್ ಚೇತರಿಸಿಕೊಂಡಿದ್ದು ತಂಡದ ಜೊತೆಗೆ ಅಭ್ಯಾಸದಲ್ಲಿ ತೊಡಗಿದ್ದಾರೆ ಎಂಬುದಾಗಿಯೂ ತಿಳಿಸಿದರು. "ಸಿರಾಜ್ ಚೇತರಿಕೆಯನ್ನು ಕಂಡಿದ್ದಾರೆ. ಆತ ನಮ್ಮೊಂದಿಗೆ ಅಭ್ಯಾಸ ಕೂಡ ಮಾಡುತ್ತಿದ್ದಾರೆ. ಅವರು ಸಮರ್ಥರಾಗಿರುವಂತೆ ಕಾಣಿಸುತ್ತಾರೆ" ಎಂದಿ ಬೂಮ್ರಾ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ ವಿರಾಟ್ ಕೊಹ್ಲಿ ಬಗ್ಗೆಯೂ ಬೂಮ್ರಾ ಮಾತನಾಡಿದ್ದಾರೆ. "ಇದು ಅವರ ವೈಯಕ್ತಿಕ ನಿರ್ಧಾರ, ನಾವು ಅದನ್ನು ಗೌರವಿಸುತ್ತೇವೆ. ಅವರ ನಾಯಕತ್ವದಲ್ಲಿ ನಾನು ಟೆಸ್ಟ್ಗೆ ಪದಾರ್ಪಣೆ ಮಾಡಿದ್ದೇನೆ. ಅವರು ನಾಯಕನಾಗಿ ಮುಂದುವರಿಯದಿದ್ದರೂ ತಮ್ಮ ಕೊಡುಗೆಯನ್ನು ನೀಡುತ್ತಲೇ ಇರುತ್ತಾರೆ. ಈ ನಿರ್ಧಾರವನ್ನು ಬಹಿರಂಗವಾಗಿ ಘೋಷಿಸುವ ಮುನ್ನ ಖಂಡಿತಾ ಅವರು ತಂಡದ ಸಭೆಯಲ್ಲಿ ನಮಗೆ ತಮ್ಮ ನಿರ್ಧಾರವನ್ನು ತಿಳಿಸಿದ್ದರು" ಎಂದು ಜಸ್ಪ್ರೀತ್ ಬೂಮ್ರಾ ಮಾಹಿತಿ ನೀಡಿದ್ದಾರೆ.
ಆಶಸ್ ಸರಣಿ: ಅಂತಿಮ ಪಂದ್ಯವನ್ನೂ ಗೆದ್ದು ಬೀಗಿದ ಆಸ್ಟ್ರೇಲಿಯಾ: 4-0 ಅಂತರದಿಂದ ಸರಣಿ ವಶಕ್ಕೆ
ಇನ್ನು ಇದೇ ಸಂದರ್ಭದಲ್ಲಿ ಜಸ್ಪ್ರಿತ್ ಬೂಮ್ರಾಗೆ ನಾಯಕತ್ವದ ಹೊಣೆಗಾರಿಗೆ ನಿಡಿದರೆ ನಿರ್ವಹಿಸುತ್ತೀರಾ ಎಂಬ ಪ್ರಶ್ನೆ ಕೂಡ ಎದುರಾಯಿತು. ಅದಕ್ಕೆ ಬೂಮ್ರಾ ಸಕಾರಾತ್ಮಕವಾಗಿಯೇ ಉತ್ತರಿಸಿದ್ದಾರೆ. ನನಗೆ ಆ ಜವಾಬ್ಧಾರಿಯನ್ನು ನೀಡಿದರೆ ನಾನು ಅದನ್ನು ನಿರ್ವಹಿಸುತ್ತೇನೆ. ಆದರೆ ಅದು ಬೆನ್ನಟ್ಟಿಕೊಂಡು ಹೋಗುವಂತದ್ದಲ್ಲ ಎಂದಿದ್ದಾರೆ ಜಸ್ಪ್ರೀತ್ ಬೂಮ್ರಾ.