ಗುಜರಾತ್ ಟೈಟನ್ಸ್ ತಂಡದ ಈ ಇಬ್ಬರು ಟೀಮ್ ಇಂಡಿಯಾದಲ್ಲಿ ಇರಬೇಕು
ಹೀಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ ಟ್ವೆಂಟಿ ಸರಣಿಯ ಕುರಿತು ಮಾತನಾಡಿರುವ ಡೇವಿಡ್ ಮಿಲ್ಲರ್ ಟೀಮ್ ಇಂಡಿಯಾದಲ್ಲಿ ಗುಜರಾತ್ ಟೈಟನ್ಸ್ ಪರ ಮಿಂಚಿರುವ ರಾಹುಲ್ ತೆವಾಟಿಯಾ ಮತ್ತು ಶುಬ್ಮನ್ ಗಿಲ್ ಇರಬೇಕು ಎಂದಿದ್ದಾರೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಹುಲ್ ತೆವಾಟಿಯಾ 11 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದು 215 ರನ್ ಬಾರಿಸಿದ್ದಾರೆ ಹಾಗೂ ಅಜೇಯ 43 ರನ್ ಟೂರ್ನಿಯಲ್ಲಿ ತೆವಾಟಿಯಾ ಕಲೆಹಾಕಿರುವ ಗರಿಷ್ಟ ರನ್ ಆಗಿದೆ. ಅತ್ತ ಶುಬ್ಮನ್ ಗಿಲ್ 13 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 402 ರನ್ ಬಾರಿಸಿದ್ದಾರೆ, 96 ರನ್ ಗಿಲ್ ಟೂರ್ನಿಯಲ್ಲಿ ಬಾರಿಸಿರುವ ಗರಿಷ್ಟ ರನ್ ಆಗಿದೆ.
ಹಾರ್ದಿಕ್ ಪಾಂಡ್ಯ ಹೆಸರು ಕೈಬಿಟ್ಟ ಮಿಲ್ಲರ್
ಹೀಗೆ ಗುಜರಾತ್ ಟೈಟನ್ಸ್ ತಂಡದಲ್ಲಿ ತಮ್ಮ ಸಹ ಆಟಗಾರರಾದ ರಾಹುಲ್ ತೆವಾಟಿಯಾ ಮತ್ತು ಶುಬ್ಮನ್ ಗಿಲ್ ಭಾರತ ಟಿ ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕು ಎಂದಿರುವ ಡೇವಿಡ್ ಮಿಲ್ಲರ್ ತಮ್ಮ ತಂಡದ ನಾಯಕನಾದ ಹಾರ್ದಿಕ್ ಪಾಂಡ್ಯ ಹೆಸರನ್ನೇ ಕೈಗೆತ್ತಿಕೊಂಡಿಲ್ಲ. ಫಿಟ್ನೆಸ್ ಸಮಸ್ಯೆಯಿಂದ ಟೀಮ್ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ ಇದೀಗ ಫಿಟ್ ಆಗಿದ್ದು, ನಾಯಕತ್ವವನ್ನೂ ಸಹ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹೀಗಿದ್ದರೂ ಪಾಂಡ್ಯ ಹೆಸರನ್ನು ಮಿಲ್ಲರ್ ಯಾಕೆ ತೆಗೆದುಕೊಂಡಿಲ್ಲ ಎಂಬುದು ಪ್ರಶ್ನೆ ಮೂಡಿಸಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ಸರಣಿ ಯಾವಾಗ?
ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡ ನಂತರ ಟೀಮ್ ಇಂಡಿಯಾ ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕೆ ಇಳಿಯಲಿದ್ದು, 5 ಪಂದ್ಯಗಳ ಟಿ ಟ್ವೆಂಟಿ ಸರಣಿ ಇದಾಗಿರಲಿದೆ. ಈ ಸರಣಿಯ ಪ್ರಥಮ ಪಂದ್ಯ ಜೂನ್ 9ರಂದು ದೆಹಲಿಯಲ್ಲಿ ನಡೆಯಲಿದ್ದು, ದ್ವಿತೀಯ ಪಂದ್ಯ ಜೂನ್ 12ರಂದು ಕಟಕ್ನಲ್ಲಿ, ಮೂರನೇ ಪಂದ್ಯ ಜೂನ್ 14ರಂದು ವಿಶಾಖಪಟ್ಟಣಂನಲ್ಲಿ, ನಾಲ್ಕನೇ ಟಿ ಟ್ವೆಂಟಿ ಪಂದ್ಯ ಜೂನ್ 17ರಂದು ರಾಜ್ಕೋಟ್ನಲ್ಲಿ ಮತ್ತು ಸರಣಿಯ ಅಂತಿಮ ಪಂದ್ಯ ಜೂನ್ 19ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿವೆ.