IND vs SA: ದ.ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣರಾದ ಇಬ್ಬರು ಯಾರೆಂದು ಬಿಚ್ಚಿಟ್ಟ ಪಂತ್!

ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವಿನ ಮೊದಲ 2 ಟಿ ಟ್ವೆಂಟಿ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಎರಡೂ ಪಂದ್ಯಗಳಲ್ಲಿಯೂ ಪ್ರವಾಸಿ ದಕ್ಷಿಣ ಆಫ್ರಿಕಾ ಆತಿಥೇಯ ಭಾರತ ತಂಡಕ್ಕೆ ಸೋಲುಣಿಸಿ ಸರಣಿಯಲ್ಲಿ 2-0 ಅಂತರದ ಮುನ್ನಡೆಯನ್ನು ಸಾಧಿಸಿದೆ.
ಹೌದು, ಇತ್ತಂಡಗಳ ನಡುವೆ ಮೊದಲಿಗೆ ಜೂನ್ 9ರಂದು ನಡೆದ ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ್ದ 212 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಜಯ ಸಾಧಿಸಿತ್ತು ಹಾಗೂ ಕಟಕ್ ನಗರದ ಬಾರಾಬತಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ( ಜೂನ್ 12 ) ನಡೆದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿಯೂ ಕೂಡ ಟೀಮ್ ಇಂಡಿಯಾ ನೀಡಿದ್ದ 149 ರನ್ಗಳ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಸತತ 2 ಗೆಲುವು ಕಂಡಿದ್ದು, ಸರಣಿಯನ್ನು ಕೈವಶಪಡಿಸಿಕೊಳ್ಳಲು ಇನ್ನೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸಾಕಾಗಿದೆ.
ಕ್ವಿಂಟನ್ ಡಿಕಾಕ್ ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದ ಕಾರಣ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿದ ಹೆನ್ರಿಚ್ ಕ್ಲಾಸೆನ್ ದಕ್ಷಿಣ ಆಫ್ರಿಕಾ ಅಲ್ಪ ಮೊತ್ತಕ್ಕೆ ಮೊದಲ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕಣಕ್ಕಿಳಿದು 46 ಎಸೆತಗಳಲ್ಲಿ ಬರೋಬ್ಬರಿ 81 ರನ್ ಚಚ್ಚಿ ತಂಡದ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಹೀಗೆ ದಕ್ಷಿಣ ಆಫ್ರಿಕಾ ಆಟಗಾರರು ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆದ್ದಿದ್ದರೆ, ಪಂದ್ಯ ಮುಕ್ತಾಯವಾದ ನಂತರ ಮಾತನಾಡಿದ ಟೀಮ್ ಇಂಡಿಯಾ ನಾಯಕ ರಿಷಭ್ ಪಂತ್ ಪಂದ್ಯ ಸೋತದ್ದರ ಹಿಂದಿನ ಕಾರಣವನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಈ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಿದೆ
ದ್ವಿತೀಯ ಪಂದ್ಯ ಮುಕ್ತಾಯವಾದ ನಂತರ ಮಾತನಾಡಿದ ರಿಷಭ್ ಪಂತ್ ಸ್ಪಿನ್ ಬೌಲರ್ಗಳು ಉತ್ತಮ ಪ್ರದರ್ಶನ ನೀಡಬೇಕಿದೆ ಎಂಬ ಒಂದೇ ವಾಕ್ಯದ ಉತ್ತರವನ್ನು ನೀಡಿ ಸ್ಪಿನ್ ಬೌಲರ್ಗಳ ಪ್ರದರ್ಶನದ ಕುರಿತ ತಮ್ಮ ಅಭಿಪ್ರಾಯವನ್ನು ಮುಗಿಸಿಬಿಟ್ಟರು. ಹೀಗೆ ಸ್ಪಿನ್ನರ್ಸ್ ಕುರಿತು ಹೆಚ್ಚಿಗೆ ಮಾತನಾಡದ ರಿಷಭ್ ಪಂತ್ ಸ್ಪಿನ್ ಬೌಲರ್ಗಳ ಕಳಪೆ ಪ್ರದರ್ಶನದಿಂದ ಅಸಮಾಧಾನಗೊಂಡಿರುವುದು ಬಹಿರಂಗವಾಗಿದೆ.

10-15 ರನ್ಗಳ ಕೊರತೆಯಾಯಿತು
ಇನ್ನೂ ಮುಂದುವರಿದು ಮಾತನಾಡಿದ ರಿಷಭ್ ತಂಡ 10-15 ರನ್ಗಳ ಕೊರತೆಯನ್ನು ಹೊಂದಿದ್ದ ಕಾರಣದಿಂದಾಗಿ ಸೋಲನ್ನು ಅನುಭವಿಸಿತು, ಇಷ್ಟು ರನ್ ಹೆಚ್ಚು ಬಾರಿಸಿದ್ದರೆ ತಂಡ ಗೆಲುವಿನ ಅವಕಾಶವನ್ನು ಹೊಂದಿರುತ್ತಿತ್ತು ಎಂದು ಹೇಳಿಕೆ ನೀಡಿದ್ದಾರೆ. ಹಾಗೂ ಇಲ್ಲಿಯೂ ಸಹ ತಂಡದ ವೇಗಿಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು ಎಂದು ಹೇಳಿಕೆ ನೀಡಿದ ರಿಷಭ್ ಪಂತ್ ಸ್ಪಿನ್ ಬೌಲರ್ಗಳ ಪ್ರದರ್ಶನದ ಕುರಿತು ಇಲ್ಲಿ ದನಿ ಎತ್ತಲಿಲ್ಲ. 10 ಓವರ್ಗಳವರೆಗೆ ಎಲ್ಲವೂ ನಮ್ಮ ನಿಯಂತ್ರಣದಲ್ಲಿಯೇ ಇತ್ತು ಆದರೆ ನಂತರದ ಓವರ್ಗಳಲ್ಲಿ ಪಂದ್ಯ ಕೈ ಜಾರಿತು ಎಂದಿರುವ ಪಂತ್ ಮುಂದಿನ 3 ಪಂದ್ಯಗಳಲ್ಲಿ ತಪ್ಪನ್ನು ತಿದ್ದಿಕೊಂಡು ಉತ್ತಮ ಪ್ರದರ್ಶನ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.

ಸರಣಿಯಲ್ಲಿ ಸ್ಪಿನ್ ಬೌಲರ್ಗಳ ಕಳಪೆ ಪ್ರದರ್ಶನ ಹೀಗಿದೆ
ಇನ್ನು ರಿಷಭ್ ಪಂತ್ ಸ್ಪಿನ್ನರ್ಸ್ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯ ನಿಜ ಕೂಡ ಎನ್ನಬಹುದು. ಏಕೆಂದರೆ ಅಕ್ಷರ್ ಪಟೇಲ್ 2 ಪಂದ್ಯಗಳಲ್ಲಿ 5 ಓವರ್ ಬೌಲಿಂಗ್ ಮಾಡಿ 59 ರನ್ ಬಿಟ್ಟುಕೊಟ್ಟಿದ್ದರೆ, ಯುಜುವೇಂದ್ರ ಚಾಹಲ್ 2 ಪಂದ್ಯಗಳಲ್ಲಿ 6 ಓವರ್ ಬೌಲಿಂಗ್ ಮಾಡಿ 75 ರನ್ ನೀಡಿ ದುಬಾರಿಯಾಗಿದ್ದಾರೆ. ಇನ್ನು ಈ ಹೇಳಿಕೆ ಮೂಲಕ ಸ್ಪಿನ್ ಬೌಲರ್ಗಳಾದ ಅಕ್ಷರ್ ಪಟೇಲ್ ಮತ್ತು ಯಜುವೇಂದ್ರ ಚಾಹಲ್ ಅವರ ಕಳಪೆ ಪ್ರದರ್ಶನದಿಂದಲೇ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿತು ಎಂಬುದನ್ನು ರಿಷಭ್ ಪಂತ್ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications