
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದು, ದೀಪಕ್ ಹೂಡಾ ಕೂಡ ಇಡೀ ಸರಣಿಗೆ ಅಲಭ್ಯರಾಗಿದ್ದಾರೆ.
ಸೆಪ್ಟೆಂಬರ್ 28ರಂದು ಪ್ರಾರಂಭಗೊಳ್ಳಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಈ ಇಬ್ಬರು ಸ್ಫೋಟಕ ಬ್ಯಾಟರ್ಗಳು ಲಭ್ಯವಿಲ್ಲ. ಹಾರ್ದಿಕ್ ಪಾಂಡ್ಯಗೆ ಟಿ20 ವಿಶ್ವಕಪ್ ದೃಷ್ಟಿಯಿಂದ ವಿಶ್ರಾಂತಿ ನೀಡಿದ್ರೆ, ದೀಪಕ್ ಹೂಡಾ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು ಎನ್ಸಿಎಗೆ ತೆರಳಲಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯ ಬದಲು ಆರ್ಸಿಬಿಯ ಆಲ್ರೌಂಡರ್ ಶಹಬಾಜ್ ಅಹಮದ್ಗೆ ಸ್ಥಾನ ನೀಡಲಾಗಿದ್ದು, ದೀಪಕ್ ಹೂಡಾ ಬದಲು ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಸ್ಕ್ವಾಡ್ ಸೇರಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನ 2-1 ಅಂತರದಲ್ಲಿ ರೋಹಿತ್ ಪಡೆ ವಶಪಡಿಸಿಕೊಂಡಿದ್ದು, ಕ್ಯಾಲೆಂಡರ್ ವರ್ಷದಲ್ಲಿ 21ನೇ ಗೆಲುವು ದಾಖಲಿಸಿದೆ. ಮುಂದಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆಲುವನ್ನ ಸಾಧಿಸಲು ಭಾರತ ಪಣತೊಟ್ಟಿದ್ದು, ಹೇಗಾದರೂ ಮಾಡಿ ಹರಿಣಗಳನ್ನ ಸೋಲಿಸಲು ಯೋಜನೆ ರೂಪಿಸಿದೆ.
ವಿಶ್ವದ ಪ್ರಮುಖ ರಾಷ್ಟ್ರಗಳ ವಿರುದ್ಧ ಚುಟುಕು ಸರಣಿಯನ್ನು ಗೆದ್ದು ಬೀಗಿರುವ ಭಾರತ, ಹರಿಣಗಳ ವಿರುದ್ಧ ಟಿ20 ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಆದ್ರೀಗ ಟಿ20 ವಿಶ್ವಕಪ್ಗೂ ಮುನ್ನ ನಡೆಯುತ್ತಿರುವ ಕೊನೆಯ ಟಿ20 ಸರಣಿಯನ್ನ ಬ್ಲ್ಯೂ ಬಾಯ್ಸ್ ತನ್ನದಾಗಿಸಿಕೊಳ್ಳಾರ ಎಂಬುದನ್ನ ಕಾದುನೋಡಬೇಕಿದೆ.
ತಿರುವನಂತಪುರಂನ ಕರಿಯಾವಟ್ಟಂನಲ್ಲಿ ಬುಧವಾರ ಮೊದಲ ಟಿ20 ಪಂದ್ಯ ನಡೆಯಲಿದ್ದು, ಎರಡನೇ ಪಂದ್ಯ ಗುವಾಹಟಿಯಲ್ಲಿ ಅಕ್ಟೋಬರ್ 2 ರಂದು ಮತ್ತು ಮೂರನೇ ಪಂದ್ಯ ಇಂದೋರ್ನಲ್ಲಿ ಅಕ್ಟೋಬರ್ 4 ರಂದು ನಡೆಯಲಿದೆ. ಇದಾದ ಬಳಿಕ ಉಭಯ ತಂಡಗಳು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ.
ದಕ್ಷಿಣ ಆಫ್ರಿಕಾ ತಂಡ ಇದೇ ವರ್ಷ ಭಾರತ ಪ್ರವಾಸ ಕೈಗೊಂಡಿತ್ತು. ರಿಷಬ್ ಪಂತ್ ನಾಯಕತ್ವದಲ್ಲಿ ಭಾರತ 5 ಪಂದ್ಯಗಳ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್ ಈ ಕೆಳಗಿದೆ.
ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶಬಾಜ್ ಅಹಮದ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜವೇಂದ್ರ ಚಹಾಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ