Ind vs SL 3rd T20I: ಸರಣಿ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದ ಆಡುವ ಬಳಗ, ಪಿಚ್ ವರದಿ

ಶ್ರೀಲಂಕಾ ವಿರುದ್ಧದ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯವನ್ನಾಡಲು ಹಾರ್ದಿಕ್ ಪಂಡ್ಯ ನೇತೃತ್ವದ ಟೀಂ ಇಂಡಿಯಾ ರಾಜ್ಕೋಟ್ ತಲುಪಿದೆ. ಜನವರಿ 7ರಂದು ಶನಿವಾರ 7 ಗಂಟೆಗೆ ರಾಜ್ಕೋಟ್ನ ಎಸ್ಸಿಎ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಸರಣಿ ಗೆಲುವಿಗಾಗಿ ಹೋರಾಟ ನಡೆಸಲಿವೆ.
ಮೊದಲನೇ ಪಂದ್ಯದಲ್ಲಿ 2 ರನ್ಗಳ ರೋಚಕ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಪುಣೆಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ 16 ರನ್ಗಳ ಸೋಲನುಭವಿಸಿತ್ತು. ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲವಾಗಿದ್ದು, ಮೂರನೇ ಪಂದ್ಯ ನಿರ್ಣಾಯಕವಾಗಲಿದೆ.
ಶುಕ್ರವಾರ ತಂಡದ ಆಟಗಾರರು ವಿಶ್ರಾಂತಿ ಪಡೆಯಲಿದ್ದು, ಶನಿವಾರ ಪಂದ್ಯಕ್ಕೆ ಮುನ್ನ ಅಭ್ಯಾಸ ಮಾಡಲಿದ್ದಾರೆ. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕೋಚ್ ರಾಹುಲ್ ದ್ರಾವಿಡ್ ಆಡುವ ತಂಡದಲ್ಲಿ ಬದಲಾವಣೆ ಮಾಡಲು ಅಥವಾ ಪುಣೆಯಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಿದ್ದಾರೆ.
ಎರಡನೇ ಪಂದ್ಯದಲ್ಲಿ ಬೌಲಿಂಗ್ ವಿಭಾಗ ಕಳಪೆಯಾಗಿದ್ದ ಕಾರಣ ಬದಲಾವಣ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಬ್ಯಾಟಿಂಗ್ನಲ್ಲಿ ಕೂಡ ತಂಡದಲ್ಲಿ ಬದಲಾವಣೆ ಮಾಡಿದರೂ ಅಚ್ಚರಿಯಿಲ್ಲ.

ರುತುರಾಜ್ ಗಾಯಕ್ವಾಡ್ಗೆ ಅವಕಾಶ?
ಶುಭಮನ್ ಗಿಲ್ ಮೊದಲ ಎರಡೂ ಪಂದ್ಯಗಳಲ್ಲಿ ಅವಕಾಶ ಪಡೆದರು ಕೂಡ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಸರಣಿಯ ಕೊನೆಯ ಪಂದ್ಯದಲ್ಲಿ ಗಿಲ್ರನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಒಂದು ವೇಳೆ ಗಿಲ್ ಆಡುವ ಬಳಗದಿಂದ ಹೊರಗುಳಿದರೆ, ರುತುರಾಜ್ ಗಾಯಕ್ವಾಡ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ದೇಶೀಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಗಾಯಕ್ವಾಡ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
Rishabh Pant: 2023ರಲ್ಲಿ ರಿಷಬ್ ಪಂತ್ ಕ್ರಿಕೆಟ್ ಆಡೋದೆ ಅನುಮಾನ! ಆಸ್ಪತ್ರೆ ಕೊಟ್ಟ ಮಾಹಿತಿ ಏನು?

ಬೌಲಿಂಗ್ನಲ್ಲಿ ಬದಲಾವಣೆ
ಎರಡನೇ ಪಂದ್ಯದಲ್ಲಿ ಹರ್ಷಲ್ ಪಟೇಲ್ ಬದಲಿಗೆ ಸ್ಥಾನ ಪಡೆದ ಅರ್ಷದೀಪ್ ಸಿಂಗ್ ಕೆಟ್ಟ ಬೌಲಿಂಗ್ ಪ್ರದರ್ಶನ ನೀಡಿದ್ದರು. 2 ಓವರ್ ನಲ್ಲಿ 5 ನೋಬಾಲ್ ಎಸೆದ ಅರ್ಷದೀಪ್ ಸಿಂಗ್ 37 ರನ್ ಬಿಟ್ಟುಕೊಟ್ಟರು. ಸರಣಿಯ ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅನಿವಾರ್ಯತೆ ಇದ್ದು, ಹರ್ಷಲ್ ಪಟೇಲ್ ತಂಡಕ್ಕೆ ಮರಳುವ ಸಾಧ್ಯತೆ ಇದೆ.
ಹರ್ಷಲ್ ಪಟೇಲ್ ಸ್ಥಾನ ಪಡೆಯದಿದ್ದರೂ, ಅರ್ಷದೀಪ್ ಸಿಂಗ್ ಬದಲಾಗಿ ವಾಷಿಂಗ್ಟನ್ ಸುಂದರ್ ಕೂಡ ಅವಕಾಶ ಪಡೆಯುವ ಸಾಧ್ಯತೆ. ರಾಜ್ಕೋಟ್ ಪಿಚ್ ಸ್ಪಿನ್ನರ್ ಗೆ ಸಹಾಯಕವಾಗಿರುವುದರಿಂದ ಸುಂದರ್ ಆಯ್ಕೆಯನ್ನು ತಳ್ಳಿಹಾಕುವಂತಿಲ್ಲ. ಯುಜುವೇಂದ್ರ ಚಹಾಲ್ ಕೂಡ ಎರಡು ಪಂದ್ಯಗಳಿಂದ ಕೇವಲ 1 ವಿಕೆಟ್ ಪಡೆದಿದ್ದು, ಮುಂದಿನ ಪಂದ್ಯದಲ್ಲಿ ಅವರ ಬದಲಾಗಿ ಕುಲದೀಪ್ ಯಾದವ್ ಕೂಡ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಮತ್ತೊಂದು ಹೈ ಸ್ಕೋರ್ ಪಂದ್ಯ
ರಾಜ್ಕೋಟ್ನ ಎಸ್ಸಿಎ ಕ್ರೀಡಾಂಗಣದಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದೆ. ಪಿಚ್ ಸ್ವಲ್ಪ ಕಠಿಣವಾಗಿದ್ದರೆ ಬ್ಯಾಟರ್ ಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆ ಇದೆ. ಸಾಂಪ್ರದಾಯಿಕವಾಗಿ ಇದು ಸ್ಪಿನ್ನರ್ಗಳಿಗೆ ನೆರವು ನೀಡುತ್ತದೆ.
ಮೊದಲ ಇನ್ನಿಂಗ್ಸ್ನ ಸರಾಸರಿ ಮೊತ್ತ 179 ಆಗಿದ್ದು, 2ನೇ ಇನ್ನಿಂಗ್ಸ್ನಲ್ಲಿ 149 ಸರಾಸರಿ ಸ್ಕೋರ್ ಆಗಿದೆ. ಮತ್ತೊಂದು ಹೆಚ್ಚಿನ ಸ್ಕೋರ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ರಾಜ್ಕೋಟ್ನಲ್ಲಿ ಇದುವರೆಗೂ 4 ಪಂದ್ಯಗಳು ನಡೆದಿದ್ದು, ಎರಡು ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದ್ದು, 2 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ.
ಭಾರತ ತಂಡದ ಸಂಭಾವ್ಯ ಆಡುವ ಬಳಗ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ / ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್ / ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ , ಶಿವಂ ಮಾವಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications