IND vs SL: ಶ್ರೀಲಂಕಾ ವಿರುದ್ಧದ ಟಿ20, ಏಕದಿನ ಸರಣಿಗೆ ಭಾರತ ತಂಡ ಪ್ರಕಟ; ಪಾಂಡ್ಯಗೆ ಟಿ20 ನಾಯಕತ್ವ

2023ರ ಜನವರಿ 3ರಿಂದ ಮುಂಬೈನಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ ಎಂದು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ.
ಇನ್ನು ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಟಿ20 ತಂಡದ ಭಾಗವಾಗಿಲ್ಲ. ನಂತರ ಜನವರಿ 10ರಂದು ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾ ಹಿಂದಿರುಗಲಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡದ ಉಪನಾಯಕನಾಗಿದ್ದರೆ, ಹಾರ್ದಿಕ್ ಪಾಂಡ್ಯ ಏಕದಿನದಲ್ಲಿ ರೋಹಿತ್ ಶರ್ಮಾಗೆ ಉಪನಾಯಕನಾಗಿ ಬಡ್ತಿ ಪಡೆದಿದ್ದಾರೆ. ಈ ಹಿಂದೆ ಕೆಎಲ್ ರಾಹುಲ್ ಉಪನಾಯಕರಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.

ಇಶಾನ್ ಕಿಶನ್ಗೆ ಏಕದಿನ, ಟಿ20 ತಂಡಗಳಲ್ಲಿ ಸ್ಥಾನ
ರೋಹಿತ್ ಶರ್ಮಾ ಹೆಬ್ಬೆರಳಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವಾಗ, ಬಿಸಿಸಿಐ ಪತ್ರಿಕಾ ಪ್ರಕಟಣೆಯು ಹಾರ್ದಿಕ್ ಪಾಂಡ್ಯ ಟಿ20 ನಾಯಕತ್ವದ ನೇಮಕವು ಶಾಶ್ವತ ಬದಲಾವಣೆಯೇ ಅಥವಾ ಕೇವಲ ಒಂದು ಸರಣಿಗೆ ಮಾತ್ರವೇ ಎಂಬುದರ ಕುರಿತು ಸ್ಪಷ್ಟಪಡಿಸಿಲ್ಲ.
ಬಾಂಗ್ಲಾದೇಶದ ವಿರುದ್ಧ ಭಾರತದ ಇತ್ತೀಚಿನ ಟೆಸ್ಟ್ ಸರಣಿಯ ಗೆಲುವಿನ ಭಾಗವಾಗಿದ್ದ ರಿಷಭ್ ಪಂತ್ ಎರಡೂ ತಂಡಗಳಲ್ಲಿ ಕಾನಿಸಿಕೊಂಡಿಲ್ಲ. ವಿಕೆಟ್ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರನ್ನು ಏಕದಿನ ಮತ್ತು ಟಿ20 ತಂಡಗಳಲ್ಲಿ ಹೆಸರಿಸಲಾಗಿದೆ. ಟಿ20 ತಂಡದ ಭಾಗವಾಗಿಲ್ಲದ ಕೆಎಲ್ ರಾಹುಲ್ ಏಕದಿನ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಮತ್ತೊಂದು ದೊಡ್ಡ ಸಂಗತಿಯೆಂದರೆ, ಈ ಹಿಂದೆ ಭಾರತ ತಂಡವನ್ನು ಮುನ್ನಡೆಸಿದ್ದ ಶಿಖರ್ ಧವನ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದೆ.

ರೋಹಿತ್ ಶರ್ಮಾ ಬದಲಿ ನಾಯಕ ಎಂದೇ ಬಿಂಬಿತವಾಗಿರುವ ಹಾರ್ದಿಕ್
ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾಗೆ ಉಪನಾಯಕರಾಗಿ ಮತ್ತು ಟಿ20 ನಾಯಕರಾಗಿರುವ ಹಾರ್ದಿಕ್ ಪಾಂಡ್ಯಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ನಾಯಕತ್ವದ ಜವಾಬ್ದಾರಿ ವಹಿಸುವ ಸಾಧ್ಯತೆಯ ಸುಳಿವನ್ನು ನೀಡಿದೆ.
2022ರ ಐಪಿಎಲ್ ಪಂದ್ಯಾವಳಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಆಗುವತ್ತ ಮುನ್ನಡೆಸಿದ ಹಾರ್ದಿಕ್ ಪಾಂಡ್ಯ, ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸೋತ ನಂತರ ರೋಹಿತ್ ಶರ್ಮಾ ಬದಲಿ ನಾಯಕ ಎಂದೇ ಬಿಂಬಿತವಾಗಿದ್ದರು.

ಭಾರತದ ಟಿ20 ತಂಡವು ಹೊಸ ಮುಖಗಳನ್ನು ಹೊಂದಿದೆ
ಶ್ರೀಲಂಕಾ ವಿರುದ್ಧ ಭಾರತದ ಟಿ20 ತಂಡವು ಹೊಸ ಮುಖಗಳನ್ನು ಹೊಂದಿದ್ದು, ಇಬ್ಬರು ಅನ್ಕ್ಯಾಪ್ಡ್ ವೇಗಿಗಳಾದ ಶಿವಂ ಮಾವಿ ಮತ್ತು ಮುಖೇಶ್ ಕುಮಾರ್ ಅವರನ್ನು ಚುಟುಕು ಕ್ರಿಕೆಟ್ಗೆ ಸೇರಿಸಿಕೊಳ್ಳಲಾಗಿದೆ.
ಶಿವಂ ಮಾವಿ ಅವರನ್ನು ಗುಜರಾತ್ ಟೈಟನ್ಸ್ 6 ಕೋಟಿ ರೂ.ಗೆ ಖರೀದಿಸಿದರೆ, ಬಂಗಾಳದ ಮುಖೇಶ್ ಕುಮಾರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 5.50 ಕೋಟಿ ರೂ.ಗೆ ಸೇರಿಸಿಕೊಂಡಿದೆ. ಇನ್ನು ರುತುರಾಜ್ ಗಾಯಕ್ವಾಡ್ ಮತ್ತು ರಾಹುಲ್ ತ್ರಿಪಾಠಿ, ಇಬ್ಬರು ಶಕ್ತಿಶಾಲಿ ಐಪಿಎಲ್ ಪ್ರದರ್ಶನಕಾರರು ಟಿ20 ತಂಡಕ್ಕೆ ಸ್ಥಾನ ಪಡೆದಿದ್ದಾರೆ.
ಭುಜದ ಗಾಯದಿಂದ ಚೇತರಿಸಿಕೊಂಡು ಮರಳಿರುವ ಮೊಹಮ್ಮದ್ ಶಮಿಯೊಂದಿಗೆ ಭಾರತ ಏಕದಿನ ತಂಡವು ಹೆಚ್ಚು ಅನುಭವಿ ಆಟಗಾರರನ್ನು ಹೊಂದಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications