ಭಾರತ ಕ್ರಿಕೆಟ್ ತಂಡದ ಆಟಗಾರರು ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಶನಿವಾರದಂದು ಕೇರಳದ ತಿರುವನಂತಪುರಂನಲ್ಲಿರುವ ಪ್ರಸಿದ್ಧ ಅನಂತ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದರು.
ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಅವರು ಕೇರಳದ ಪವಿತ್ರ ದೇವಾಲಯದ ಮುಂದೆ ಫೋಟೋ ತೆಗೆಸಿಕೊಂಡರು.
IND vs SL: ಭಾರತ vs ಶ್ರೀಲಂಕಾ 3ನೇ ಏಕದಿನ ಪಂದ್ಯದ ಸಂಭಾವ್ಯ 11ರ ಬಳಗ, ಟಿವಿ & ಲೈವ್ಸ್ಟ್ರೀಮಿಂಗ್ ವಿವರ
ಭಾರತೀಯ ಆಟಗಾರರು ಸಾಂಪ್ರದಾಯಿಕ ಉಡುಗೆಯಾದ ಬಿಳಿ ಧೋತಿ ಮತ್ತು ಅಂಗವಸ್ತ್ರವನ್ನು ಧರಿಸಿ ದೇವಸ್ಥಾನದ ಸಿಬ್ಬಂದಿಗಳೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿದರು. ಕೆಎಲ್ ರಾಹುಲ್ ಈ ಹಿಂದೆ 2022ರ ಸೆಪ್ಟೆಂಬರ್ನಲ್ಲಿ ಅನಂತ ಪದ್ಮನಾಭನ ಆಶೀರ್ವಾದ ಪಡೆದಿದ್ದರು.
ಇನ್ನು ಭಾರತ ಕ್ರಿಕೆಟ್ ತಂಡ ಕೇರಳ ರಾಜಧಾನಿ ತಿರುವನಂತಪುರಂಗೆ ಆಗಮಿಸಿದಾಗ ಅವರನ್ನು ಸಾಂಪ್ರದಾಯಿಕ ಮಲಯಾಳಿ ಶೈಲಿಯಲ್ಲಿ ಕಥಕ್ಕಳಿ ನೃತ್ಯಗಾರರು ಮತ್ತು ಸಾಂಪ್ರದಾಯಿಕ ಕೇರಳ ಮುಂಡುಗಳೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಸರಣಿಯ ಮೂರನೇ ಏಕದಿನ ಪಂದ್ಯ ನಡೆಯಲಿದೆ.
ಈಗಾಗಲೇ ಗುವಾಹಟಿ ಮತ್ತು ಕೋಲ್ಕತ್ತಾದಲ್ಲಿ ನಡೆದ ಮೊದಲೆರಡು ಏಕದಿನ ಪಂದ್ಯಗಳನ್ನು ಕ್ರಮವಾಗಿ 67 ರನ್ ಮತ್ತು 4 ವಿಕೆಟ್ಗಳ ಅಂತರದಲ್ಲಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿದ್ದು, ಏಕದಿನ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಲು ಎದುರು ನೋಡುತ್ತಿದ್ದಾರೆ.
ಏಕದಿನ ಸರಣಿಗೂ ಮುನ್ನ ನಡೆದ ಮೂರು ಪಂದ್ಯಗಳ ಟಿ20 ಸರಣಿಯನ್ನು ಶ್ರೀಲಂಕಾ ವಿರುದ್ಧ ಭಾರತ ತಂಡ 2-1 ಅಂತರದಲ್ಲಿ ಗೆದ್ದುಕೊಂಡಿತ್ತು.
U-19 Women's T20 World Cup: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ ಭಾರತ ವನಿತೆಯರು
ಶ್ರೀಲಂಕಾ ವಿರುದ್ಧದ ಸರಣಿಯ ನಂತರ ಭಾರತ ತಂಡ ಜನವರಿ 18ರಿಂದ ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧ ವೈಟ್ಬಾಲ್ ಸರಣಿಗೆ ಸಜ್ಜಾಗಲಿದೆ. ಈ ನಡುವೆ ಕೇವಲ ಮೂರು ದಿನಗಳ ಅಂತರವಿದ್ದು, ಕಿವೀಸ್ ಪಡೆಯಿಂದ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಭಾರತ vs ಶ್ರೀಲಂಕಾ 3ನೇ ಏಕದಿನ ಪಂದ್ಯದ ಸಂಭಾವ್ಯ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ಶ್ರೀಲಂಕಾ: ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಅವಿಷ್ಕಾ ಫೆರ್ನಾಂಡೋ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ನುವಾನಿಡು ಫೆರ್ನಾಂಡೋ, ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಲಹಿರು ಕುಮಾರ, ಕಸುನ್ ರಜಿತ.