IND vs SL: ದಸುನ್ ಶನಕ ರನೌಟ್ ಮನವಿ ಹಿಂಪಡೆದ ರೋಹಿತ್ ಶರ್ಮಾ ಬಗ್ಗೆ ಜಯಸೂರ್ಯ ಮೆಚ್ಚುಗೆ

ಮಂಗಳವಾರ, ಜನವರಿ 10ರಂದು ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ತಮ್ಮ 73ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದರು.
ಇನ್ನು ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 67 ರನ್ಗಳ ಅಮೋಘ ಗೆಲುವು ದಾಖಲಿಸಿತು ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿತು.
ಇದೇ ವೇಳೆ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಅವರ ಮಂಕಡಿಂಗ್ ರನೌಟ್ ಮನವಿ ಹಿಂಪಡೆದಿದ್ದಕ್ಕಾಗಿ ಶ್ರೀಲಂಕಾ ಮಾಜಿ ಶ್ರೇಷ್ಠ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ದಸುನ್ ಶನಕ ಅವರು ಇಲ್ಲದ ರನ್ ಕದಿಯಲು ಕ್ರೀಸ್ನಿಂದ ದೂರ ಹೋಗಿದ್ದಾಗ ಭಾರತದ ವೇಗಿ ಮೊಹಮ್ಮದ್ ಶಮಿ ಮಂಕಡಿಂಗ್ ಮೂಲಕ ಔಟ್ ಮಾಡಿ ಅಂಪೈರ್ಗೆ ಮನವಿ ಮಾಡಿದರು. ನಂತರ, ನಾಯಕ ರೋಹಿತ್ ಶರ್ಮಾ ಅವರು ಈ ಮನವಿಯನ್ನು ಹಿಂಪಡೆದು ದಸುನ್ ಶನಕ ಶತಕ ಬಾರಿಸಲು ಅವಕಾಶ ಮಾಡಿಕೊಟ್ಟು ಕ್ರೀಡಾಸ್ಫೂರ್ತಿ ಮೆರೆದರು.

ಈ ರೀತಿ ರನೌಟ್ ಮಾಡುತ್ತಾರೆಂದು ನನಗೆ ತಿಳಿದಿರಲಿಲ್ಲ
ಪಂದ್ಯದ ನಂತರ ಈ ಘಟನೆ ಕುರಿತು ಮಾತನಾಡಿದ ರೋಹಿತ್ ಶರ್ಮಾ, ಈ ರೀತಿಯಾಗಿ ದಸುನ್ ಶನಕರನ್ನು ಔಟ್ ಮಾಡುವುದು ನಮ್ಮ ಯೋಜನೆಯಾಗಿರಲಿಲ್ಲ. 98 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಮೊಹಮ್ಮದ್ ಶಮಿ ಈ ರೀತಿ ರನೌಟ್ ಮಾಡುತ್ತಾರೆಂದು ನನಗೆ ತಿಳಿದಿರಲಿಲ್ಲ ಎಂದರು.
"ದಸುನ್ ಶನಕ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಹಾಗಾಗಿ ನಾವು ಶನಕರನ್ನು ಈ ರೀತಿ ಔಟ್ ಮಾಡಲು ಸಾಧ್ಯವಿಲ್ಲ. ಅವರು ನಿಜವಾಗಿಯೂ ಉತ್ತಮವಾಗಿ ಆಡಿದರು," ಎಂದು ರೋಹಿತ್ ಶರ್ಮಾ ಪಂದ್ಯದ ನಂತರ ಹೇಳಿದರು.
ರೋಹಿತ್ ಶರ್ಮಾ ಈ ನಿರ್ಧಾರ ಮತ್ತು ಹೇಳಿಕೆಯನ್ನು ಶ್ರೀಲಂಕಾ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಸ್ವಾಗತಿಸಿದ್ದಾರೆ. 'ಮಂಕಡಿಂಗ್' ಸುತ್ತ ಇನ್ನೂ ಚರ್ಚೆ ಮುಂದುವರೆದಿದೆ. ಅನೇಕ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಬ್ಯಾಟರ್ನನ್ನು ಔಟ್ ಮಾಡಲು ಇದು ಸರಿಯಾದ ಮಾರ್ಗವಲ್ಲ ಎಂದು ಭಾವಿಸಿದ್ದಾರೆ.

ದೀಪ್ತಿ ಶರ್ಮಾರ ಕ್ರಮವನ್ನು ಟೀಕಿಸಿದ್ದ ಇಂಗ್ಲೆಂಡ್
ಆದರೆ, ಐಸಿಸಿ ನಿಯಮದಲ್ಲಿ ಈ ರೀತಿಯ ಔಟ್ ಕಾನೂನುಬದ್ಧವಾಗಿದೆ ಎಂದು ಹೇಳಲಾಗಿದೆ. 2019ರ ಐಪಿಎಲ್ನಲ್ಲಿ ಜೋಸ್ ಬಟ್ಲರ್ ಅವರನ್ನು ರವಿಚಂದ್ರನ್ ಅಶ್ವಿನ್ ಮಂಕಡಿಂಗ್ ಔಟ್ ಮಾಡಿದಾಗ ದೊಡ್ಡ ವಿವಾದವಾಗಿತ್ತು.
ಅದೇ ರೀತಿ, ಭಾರತೀಯ ಮಹಿಳಾ ಕ್ರಿಕೆಟರ್ ದೀಪ್ತಿ ಶರ್ಮಾ ಕಳೆದ ವರ್ಷ ಇಂಗ್ಲೆಂಡ್ ಬ್ಯಾಟರ್ ಚಾರ್ಲಿ ಡೀನ್ ಅವರನ್ನು ಮಂಕಡಿಂಗ್ ಔಟ್ ಮಾಡಿದ್ದರು. ಇದೂ ಕೂಡ ದೊಡ್ಡ ಸುದ್ದಿಯಾಗಿತ್ತು. ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ದೀಪ್ತಿ ಶರ್ಮಾರ ಕ್ರಮವನ್ನು ಟೀಕಿಸಿದ್ದರು.
ರೋಹಿತ್ ಶರ್ಮಾವರ ಕ್ರೀಡಾ ಮನೋಭಾವವೇ ನಿಜವಾದ ವಿಜೇತ
ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರು ದಸುನ್ ಶನಕರನ್ನು ಮಂಕಡಿಂಗ್ ಔಟ್ ಮನವಿ ಮಾಡಿದ ನಂತರ, ರೋಹಿತ್ ಶರ್ಮಾ ಅದನ್ನು ಹಿಂಪಡೆದಿದ್ದು, ಶ್ರೀಲಂಕಾ ಮಾಜಿ ಬ್ಯಾಟ್ಸ್ಮನ್ ಸನತ್ ಜಯಸೂರ್ಯರ ಮನಗೆದ್ದಿದೆ.
ರೋಹಿತ್ ಶರ್ಮಾ ಅವರ ನಿರ್ಧಾರವನ್ನು ನೋಡಿ ಸಂತೋಷವಾಯಿತು ಎಂದು ಹೇಳಿದ ಅವರು, "ಮಂಕಡಿಂಗ್ ರನೌಟ್ ಮನವಿ ಹಿಂಪಡೆದ ರೋಹಿತ್ ಶರ್ಮಾವರ ಕ್ರೀಡಾ ಮನೋಭಾವವೇ ನಿಜವಾದ ವಿಜೇತರು. ನಾನು ನಿಮಗೆ ಹ್ಯಾಟ್ಸ್ ಆಫ್ ಮಾಡುತ್ತೇನೆ," ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಆತಿಥೇಯ ಭಾರತ ತಂಡವು ಜನವರಿ 12ರಂದು (ಗುರುವಾರ) ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯವನ್ನು ಆಡಲಿದ್ದು, ಇನ್ನೂ ಒಂದು ಬಾಕಿ ಇರುವಂತೆಯೇ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಸರಣಿಯನ್ನು ಜೀವಂತವಾಗಿರಿಸಿಕೊಳ್ಳಲು ಶ್ರೀಲಂಕಾ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications