
ನವದೆಹಲಿ, ಮೇ 16: ಆರು ಪಂದ್ಯಗಳ ನಿಯಮಿತ ಓವರ್ಗಳ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಲು ಟೀಮ್ ಇಂಡಿಯಾಕ್ಕೆ ಅವಕಾಶವಿದೆ. ಆದರೆ ಇದಕ್ಕೆ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಖಜಾಂಚಿ ಅರುಣ್ ಧೃಮಾಲ್ ಹೇಳಿದ್ದಾರೆ.
'ಜುಲೈನಲ್ಲಿ 6 ಪಂದ್ಯಗಳ ಲಿಮಿಟೆಡ್ ಓವರ್ಗಳ ಸರಣಿಗಾಗಿ ಲಂಕಾಕ್ಕೆ ಹೋಗಬಹುದು. ಆದರೆ ಇದು ಸರ್ಕಾರದ ನಿರ್ಧಾರಗಳನ್ನು ಅವಲಂಭಿಸಿದೆ. ಲಾಕ್ಡೌನ್ ಬಿಡುವು ಮತ್ತು ಪ್ರಯಾಣದ ನಿರ್ಬಂಧಗಳಿಗೆ ಸಂಬಂಧಿಸಿದ ಸರ್ಕಾರದ ನಿರ್ದೇಶನಗಳಿಗೆ ಅನುಸಾರ, ನಮ್ಮ ತಂಡದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಗೆ ತೆರಳಬಹುದಾಗಿದೆ,' ಎಂದು ಧೃಮಾಲ್ ಮಾಹಿತಿ ನೀಡಿದ್ದಾರೆ.
ಬಿಸಿಸಿಐಗೆ ಪತ್ರಬರೆದಿದ್ದ ಶ್ರೀಲಂಕನ್ ಕ್ರಿಕೆಟ್ ಬೋರ್ಡ್ (ಎಸ್ಎಲ್ಸಿ), ಭಾರತ ಒಂದು ವೇಳೆ ಕ್ವಾರಂಟೈನ್ ನಿಯಮಗಳನ್ನು ಪಾಲಿಸುವುದಾಗಿದ್ದರೆ ಜುಲೈ ಅಂತ್ಯಕ್ಕೆ ಖಾಲಿ ಮೈದಾನದಲ್ಲಿ 6 ಪಂದ್ಯಗಳ ನಿಯಮಿತ ಓವರ್ಗಳ (3 ಏಕದಿನ ಪಂದ್ಯ, 3 ಟಿ20 ಪಂದ್ಯ) ಸರಣಿಗಳಿಗೆ ಟೀಮ್ ಇಂಡಿಯಾಕ್ಕೆ ಆತಿಥ್ಯ ವಹಿಸಲು ಸಿದ್ಧವಿರುವುದಾಗಿ ತಿಳಿಸಿತ್ತು.
ಕಳೆದ ಮಾರ್ಚ್ನಲ್ಲಿ ಕೊರೊನಾ ಭೀತಿಯಿಂದಾಗಿ ಕ್ರಿಕೆಟ್ ಟೂರ್ನಿಗಳು ರದ್ದಾಗಿದ್ದರಿಂದ ಭಾರತ ಆವತ್ತಿನಿಂದ ಯಾವುದೇ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಶ್ರೀಲಂಕಾ ಕ್ರಿಕೆಟ್ನಿಂದ ಇಂಥದ್ದೊಂದು ಆಫರ್ ಬಂದಿರುವುದರಿಂದ ಮತ್ತೆ ಮೈದಾನಕ್ಕಿಳಿಯಬೇಕೆನ್ನುವ ಕೊಹ್ಲಿ ಪಡೆಯ ಆಸೆಗೆ ಮತ್ತಷ್ಟು ಬಲ ಲಭಿಸಿದಂತಾಗಿದೆ.