
ರಾಜ್ಕೋಟ್, ನವೆಂಬರ್ 8: ಟೀಮ್ ಇಂಡಿಯಾದ ಎಂದಿನ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದರಿಂದ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ, ಅಂಪೈರ್ ಮೇಲೆ ಸಿಡುಕಾಡಿದ ಘಟನೆ ಬಾಂಗ್ಲಾ-ಭಾರತ ದ್ವಿತೀಯ ಟಿ20ಯಲ್ಲಿ ನಡೆದಿದೆ.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ (ನವೆಂಬರ್ 7) ನಡೆದಿದ್ದ ಪಂದ್ಯ ಬಾಂಗ್ಲಾ ಇನ್ನಿಂಗ್ಸ್ನಲ್ಲಿ ಥರ್ಡ್ ಅಂಪೈರ್ ಮಾಡಿದ ತಪ್ಪು, ರೋಹಿತ್ ಶರ್ಮ ಅವರನ್ನು ಸಿಟ್ಟಿಗೇಳಿಸಿತು. ಅಂಪೈರ್ನತ್ತ ಬೊಟ್ಟು ಮಾಡಿ ಆ ವೇಳೆ ರೋಹಿತ್ ಸಿಟ್ಟಿನಲ್ಲಿ ಏನನ್ನೋ ಗೊಣಗಿಕೊಂಡಿದ್ದರು ಕೂಡ.
ಈ ಘಟನೆ ನಡೆದಿದ್ದು 12.6ನೇ ಓವರ್ನಲ್ಲಿ. ಯುಜುವೇಂದ್ರ ಚಾಹಲ್ ಎಸೆತಕ್ಕೆ ಸ್ಟ್ರೈಕ್ನಲ್ಲಿದ್ದ ಬಾಂಗ್ಲಾ ಆಟಗಾರ ಸೌಮ್ಯ ಸರ್ಕಾರ್ ಬ್ಯಾಟ್ ಬೀಸಲು ಮುಂದಾದರು. ಆದರೆ ಚೆಂಡು ಬ್ಯಾಟ್ಗೆ ತಾಗದೆ ಕೀಪರ್ ರಿಷಬ್ ಪಂತ್ ಕೈ ಸೇರಿತ್ತು. ಪಂತ್, ಎದುರಾಳಿಯನ್ನು ಸ್ಟಂಪ್ಟ್ ಮಾಡಿದರು. ಫೀಲ್ಡ್ ಅಂಪೈರ್, ಥರ್ಡ್ ಅಂಪೈರ್ನತ್ತ ಸನ್ನೆ ಮಾಡಿದರು.
ಥರ್ಡ್ ಅಂಪೈರ್ ಸನಿಲ್ ಚೌಧರಿ ಅದನ್ನು ಔಟ್ ಎಂದೇ ಕೊಟ್ಟರೆಂದು ಕಾಣುತ್ತೆ. ಆದರೆ ಮೈದಾನದ ಬೃಹತ್ ಸ್ಕ್ರೀನ್ನಲ್ಲಿ ಅದು ನಾಟ್ ಔಟ್ ಎಂದು ಕಾಣಿಸಿತು. ಅದಾಗಿ ಮರುಕ್ಷಣವೇ ಮತ್ತೆ ಸ್ಕ್ರೀನ್ನಲ್ಲಿ ಔಟ್ ತೀರ್ಪು ಕಾಣಿಸಿತು. ಇದನ್ನು ನೋಡಿದ ರೋಹಿತ್ ಅವರ ಮಂಡೆ ಬಿಸಿಯಾಯಿತು ಅನ್ನಿಸುತ್ತೆ.
ಅಂಪೈರ್ ಎಡವಟ್ಟನ್ನು ಗಮನಿಸಿದ ರೋಹಿತ್, ಅವರತ್ತ ನೋಡಿ ಆರಂಭದಲ್ಲಿ ಎನೋ ಗುಣಗಿದರಾದರೂ ಮತ್ತೆ ಕೂಲಾಗಿ ನಗು ನಕ್ಕರು. ಅಂದ್ಹಾಗೆ ಸ್ಟಂಪ್ಟ್ ಆದ ಸೌಮ್ಯ ಸರ್ಕಾರ್ ಕೂಡ 30 ರನ್ಗೆ ಬೆಪ್ಪಾಗಿ ನಿರ್ಗಮಿಸಬೇಕಾಗಿ ಬಂತು. ಪಂದ್ಯದಲ್ಲಿ ಭಾರತ 8 ವಿಕೆಟ್ ಸುಲಭ ಗೆಲುವನ್ನಾಚರಿಸಿತು.