
ವಿಶಾಖಪಟ್ಟಣ, ಅಕ್ಟೋಬರ್ 4: ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳಾದ ರೋಹಿತ್ ಶರ್ಮಾ (176 ರನ್) ಮತ್ತು ಮಯಾಂಕ್ ಅಗರ್ವಾಲ್ (215) ಅದ್ಭುತ ಆಟ ಪ್ರದರ್ಶಿಸಿದ್ದರು. ಹೀಗಾಗಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 500+ ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು.
ವಿಶಾಖಪಟ್ಟಣದಲದಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರದ (ಅಕ್ಟೋಬರ್ 3) ದಿನದಾಟದ ವೇಳೆ ಭಾರತದ ಆಕರ್ಷಕ ಆಟದ ಜೊತೆಗೆ ತಮಾಷೆಯ ದೃಶ್ಯವೂ ಕಾಣಸಿಕ್ಕಿತು. ಭಾರತದ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಚೆಂಡಿಗಾಗಿ ಹುಡುಕಾಡಿ ಪ್ರೇಕ್ಷಕರ, ಕಾಮೆಂಟೇಟರರ ನಗುವಿಗೆ ಕಾರಣರಾದರು.
ಭಾರತ vs ದಕ್ಷಿಣ ಆಫ್ರಿಕಾ, 1ನೇ ಟೆಸ್ಟ್, 3ನೇ ದಿನ, Live ಸ್ಕೋರ್ಕಾರ್ಡ್
ಈ ಗಮ್ಮತ್ತಿನ ದೃಶ್ಯ ಕಾರಣಸಿಕ್ಕಿದ್ದು 128.5ನೇ ಓವರ್ನಲ್ಲಿ. ರವೀಂದ್ರ ಜಡೇಜಾ ಕ್ರೀಸ್ನಲ್ಲಿದ್ದಾಗ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಎಸೆದ ಚೆಂಡು ಫೋರ್ ಬೈಸ್ ಎನಿಸಿತ್ತು. ಹಾಗೆ ಬೌಂಡರಿ ಲೈನ್ನತ್ತ ಸಾಗಿದ ಚೆಂಡು ಬೌಂಡರಿ ಲೈನ್ನಲ್ಲಿದ್ದ ಜಾಹೀರಾತು ಫಲಕದ ಮಧ್ಯೆ ಸಿಲುಕಿಕೊಂಡಿತ್ತು.
ಜಾಹೀರಾತು ಫಲಕ ಮತ್ತು ಚೆಂಡಿನ ಬಣ್ಣ ಒಂದೇ ರೀತಿ ಇದ್ದಿದ್ದರಿಂದ ದಕ್ಷಿಣ ಆಫ್ರಿಕಾ ಆಟಗಾರರಿಗೆ ಚೆಂಡು ಕಾಣಿಸಲಿಲ್ಲ. ಅವರು ಚೆಂಡಿದ್ದ ಅದೇ ಜಾಗದಲ್ಲಿ ಅಲ್ಲಿಲ್ಲಿ ಹುಡುಕಾಡಹತ್ತಿದ್ದರು. ಇದು ಪ್ರೇಕ್ಷಕರಿಗೆ, ಕಾಮೆಂಟೇಟರ್ಗೆ ತಮಾಷೆಯಾಗಿ ಕಾಣಿಸಿತ್ತು. ಕೊನೆಗೆ ಐಡೆನ್ ಮಾರ್ಕ್ರಮ್ ಚೆಂಡನ್ನೆತ್ತಿಕೊಳ್ಳುವಾಗ ಪ್ರೇಕ್ಷಕರು, ಕಾಮೆಂಟೇಟರ್ ಗೊಳ್ಳೆಂದು ನಕ್ಕುಬಿಟ್ಟರು.