ಭಾರತ ಹಾಗೂ ಶ್ರೀಲಂಕಾ ತಂಡಗಳು ಏಕದಿನ ಸರಣಿಯಲ್ಲಿ ಎರಡನೇ ಬಾರಿಗೆ ಮಂಗಳವಾರ ಮುಖಾಮುಖಿಯಾಗುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದ ಸರ್ವಾಂಗೀಣ ಪ್ರದರ್ಶನಕ್ಕೆ ಶ್ರೀಲಂಕಾ ತಂಡ ಸಂಪೂರ್ಣವಾಗಿ ತಲೆಬಾಗಿತ್ತು. ಹೀಗಾಗಿ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಶ್ರೀಲಂಕಾ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಆದರೆ ಭಾರತದ ಯುವ ಪಡೆ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಆತ್ಮವಿಶ್ವಾಸದಲ್ಲಿದ್ದು ಎರಡನೇ ಪಂದ್ಯದಲ್ಲಿಯೂ ಈ ಪ್ರದರ್ಶನ ಮುಂದುವರಿಸುವ ಉತ್ಸಾಹದಲ್ಲಿದೆ.
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕ ಶಿಖರ್ ಧವನ್ಗೆ ಆರಂಭಿಕನಾಗಿ ಜೊತೆಯಾಗಿದ್ದ ಪೃಥ್ವಿ ಶಾ ಆರಂಭದಿಂದಲೇ ಸ್ಪೋಟಕ ಆಟವನ್ನು ಪ್ರದರ್ಶಿಸಿದರು. ಬಳಿಕ ಬಂದ ಇಶಾನ್ ಕಿಶನ್ ಕೂಡ ಅದ್ಭುತ ಆಟವನ್ನು ಪ್ರದರ್ಶಿಸಿ ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕವನ್ನು ಬಾರಿಸಿದ್ದರು. ಈ ಮೂಲಕ ಶ್ರೀಲಂಕಾ ನೀಡಿದ ಗುರಿಯನ್ನು ಸುಲಭವಾಗಿ ಸಾಧಿಸಲು ಕಾರಣರಾದರು.
ಭಾರತ vs ಶ್ರೀಲಂಕಾ: ಮೊದಲ ಪಂದ್ಯದಲ್ಲಿ ಕ್ರಿಕೆಟ್ ಲೋಕವನ್ನು ಬೆರಗುಗೊಳಿಸಿದ ಅಂಶಗಳು
ಆದರೆ ಮನೀಶ್ ಪಾಂಡೆ ನಿಧಾನಗತಿಯ ಆಟವನ್ನು ಪ್ರದರ್ಶಿಸಿದ್ದು ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. 40 ಎಸೆತಗಳನ್ನು ಎದುರಿಸಿದ ಮನೀಶ್ ಪಾಂಡೆ 26 ರನ್ಗಳಿಸಲಷ್ಟೇ ಸಾಧ್ಯವಾಗಿತ್ತು. ಆದರೆ ತಂಡ ಅದಾಗಲೇ ಸುಸ್ಥಿತಿಯಲ್ಲಿದ್ದ ಕಾರಣ ಈ ಪ್ರದರ್ಶನ ತಂಡಕ್ಕೇನೂ ಹಿನ್ನಡೆಯುಂಟು ಮಾಡಲಿಲ್ಲ. ಆದರೆ ಮನೀಶ್ ಮೇಲೆ ಈಗ ಒತ್ತಡವಂತೂ ಹೆಚ್ಚಾಗಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ಗಳು ಅದ್ಭುತ ದಾಳಿಯನ್ನು ಸಂಘಟಿಸಿ ಎದುರಾಳಿಗಳಿಗೆ ಕಠಿಣ ಸವಾಲೊಡ್ಡಿದರು. ಕುಲ್ದೀಪ್ ಯಾದವ್, ಯುಜುವೇಂದ್ರ ಚಾಹಲ್ ಮತ್ತು ವೇಗಿ ದೀಪಕ್ ಚಹರ್ ತಲಾ ಎರಡು ವಿಕೆಟ್ ಕಬಳಿಸಿದರೆ ಕೃನಾಲ್ ಪಾಂಡ್ಯ 10 ಓವರ್ಗಳನ್ನು ಎಸೆದು ಕೇವಲ 26 ರನ್ಗಳನ್ನಷ್ಟೇ ನೀಡುವ ಮೂಲಕ ಅದ್ಭುತ ನಿಯಂತ್ರಣ ಸಾಧಿಸಿದರು. ಒಂದು ವಿಕೆಟ್ ಕೂಡ ಕೃನಾಲ್ ಪಾಲಾಯಿತು. ಹಾರ್ದಿಕ್ ಪಾಂಡ್ಯ ಕೂಡ ಐದು ಓವರ್ಗಳ ದಾಳಿಯಲ್ಲಿ ಒಂದು ವಿಕೆಟ್ ಸಂಪಾದಿಸಿದರು. ಭುವನೇಶ್ವರ್ ಕುಮಾರ್ ಮಾತ್ರ ವಿಕೆಟ್ ಪಡೆಯದೆ ನಿರಾಶೆ ಅನುಭವಿಸಿದ್ದರು.
2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಂಭಾವ್ಯ ಭಾರತ ತಂಡ ಹೀಗಿದೆ:
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್