ನವದೆಹಲಿ, ಆಗಸ್ಟ್ 30: ಈ ಬಾರಿಯ ಐಪಿಎಲ್ ಆವೃತ್ತಿಯ ಉಳಿದ ಪಂದ್ಯಗಳ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಹುತೇಕ ತಂಡಗಳು ದುಬೈಗೆ ತೆರಳಿದ್ದು ಅಭ್ಯಾಸವನ್ನು ಆರಂಭಿಸಿದೆ. ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳದ ಆಟಗಾರೆ ಸ್ಥಾನಕ್ಕೆ ಬಹುತೇಕ ಆಟಗಾರರನ್ನು ಸೇರ್ಪಡೆಗೊಳಿಸುವ ಕಾರ್ಯವೂ ನಡೆದಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ವಿಚಿತ್ರ ಸನ್ನಿವೇಶವೊಂದು ಎದುರಾಗಿದೆ. ತಂಡದಲ್ಲಿ ನಾಯಕನಾಗಿ ಯಾರನ್ನು ಮುಂದುವರಿಸಬೇಕು ಎಂಬ ಪ್ರಶ್ನೆಗೆ ಇನ್ನೂ ಕೂಡ ಸ್ಪಷ್ಟನೆಗಳು ಸಿಕ್ಕಿಲ್ಲ. ಈ ಬಗ್ಗೆ ಡೆಲ್ಲಿ ಮ್ಯಾನೇಜ್ಮೆಂಟ್ ಕೂಡ ಸಾಕಷ್ಟು ಚರ್ಚೆಯನ್ನು ನಡೆಸುತ್ತಿದ್ದು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಖಾಯಂ ನಾಯಕ ಶ್ರೇಯಸ್ ಐಯ್ಯರ್ ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭಕ್ಕೂ ಕೆಲವೇ ದಿನಗಳ ಮುನ್ನ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಐಪಿಎಲ್ಗೆ ಮುನ್ನ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಸೀಮಿತ ಓವರ್ಗಳ ಸರಣಿಯಲ್ಲಿ ಶ್ರೇಯಸ್ ಐಯ್ಯರ್ ಫೀಲ್ಡಿಂಗ್ ವೇಳೆ ಭುಜದ ನೋವಿಗೆ ಒಳಗಾಗಿದ್ದರು. ಬಳಿಕ ಸ್ಕ್ಯಾನಿಂಗ್ಗೆ ಒಳಗಾದ ಐಯ್ಯರ್ ಭುಜದ ಮೂಳೆಯಲ್ಲಿ ಸ್ಥಳಾಂತರವಾಗಿರುವುದು ಕಂಡುಬಂದಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆ ಹಾಗೂ ಮೂರು ತಿಂಗಳ ವಿಶ್ರಾಂತಿಯನ್ನು ಐಯ್ಯರ್ಗೆ ಸೂಚಿಸಲಾಗಿತ್ತು. ಐಪಿಎಲ್ ಆರಂಭವಾಗುತ್ತಿದ್ದಂತೆಯೇ ಶ್ರೇಯಸ್ ಐಯ್ಯರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಶಕೀಬ್ ಅಲ್ ಹಸನ್ ಹೆಸರಿಸಿದ ಸಾರ್ವಕಾಲಿಕ ಶ್ರೇಷ್ಠ ಏಕದಿನ ತಂಡಕ್ಕೆ ಭಾರತೀಯನೇ ನಾಯಕ
ಮುಂದೂಡಲ್ಪಟ್ಟಿತು ಐಪಿಎಲ್: ಈ ಮಧ್ಯೆ ಕೊರೊನಾವೈರಸ್ನ ನಡುವೆಯೂ ಕಠಿಣ ಬಯೋಬಬಲ್ನಲ್ಲಿ ಐಪಿಎಲ್ ಯಾವುದೇ ಆತಂಕಗಳಿಲ್ಲದೆ ಸಾಗುತ್ತಿತ್ತು. ಆದರೆ ಸರಿಯಾಗಿ ಟೂರ್ನಿ ಅರ್ಧಭಾಗವನ್ನು ತಲುಪುತ್ತಿದ್ದಂತೆಯೇ ಬಯೋಬಬಲ್ನ ಒಳಗೆ ಕೊರೊನಾವೈರಸ್ ಆಘಾತವನ್ನು ನೀಡಲು ಆರಂಭಿಸಿತ್ತು. ಹೀಗಾಗಿ ಹೆಚ್ಚು ಸಮಯಾವಕಾಶ ತೆಗೆದುಕೊಳ್ಳದೆ ಬಿಸಿಸಿಐ ತಕ್ಷಣವೇ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿತ್ತು.
ಯುಎಇನಲ್ಲಿ ಐಪಿಎಲ್ ಆಯೋಜನೆ: ಕೊರೊನಾವೈರಸ್ನಿಂದ ಐಪಿಎಲ್ ಮುಂದೂಡಲ್ಪಟ್ಟ ಕಾರಣದಿಂದಾಗಿ ಉಳಿದ ಪಂದ್ಯಗಳ ಆಯೋಜನೆ ಬಿಸಿಸಿಐಗೆ ಸವಾಲಾಗುತ್ತು. ಬಳಿಕ ವಿಶ್ವಕಪ್ಗೂ ಮುನ್ನ ಸೆಪ್ಟೆಂಬರ್ ಅವಧಿಯಲ್ಲಿ ಐಪಿಎಲ್ನ ಉಳಿದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿತು. ಅದಾದ ಬಳಿಕ ವಿಶ್ವಕಪ್ ಕೂಡ ಯುಎಇನಲ್ಲಿಯೇ ಆಯೋಜಿಸುವ ಯೋಜನೆಯನ್ನು ಮಾಡಿಕೊಂಡ ಕಾರಣದಿಂದಾಗಿ ಬಿಸಿಸಿಐ ಅಂದಿಕೊಂಡಂತೆಯೇ ಎಲ್ಲವೂ ನಡೆಯಿತು.
ಗಾಯದಿಂದ ಗುಣಮುಖವಾದ ಶ್ರೇಯಸ್ ಐಯ್ಯರ್: ಈ ಮಧ್ಯೆ ಶ್ರೇಯಸ್ ಐಯ್ಯರ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಐಪಿಎಲ್ನಲ್ಲಿ ಆಡಲು ಸಜ್ಜಾಗಿದ್ದಾರೆ. ಈಗಾಗಲೇ ಎನ್ಸಿಎನಿಂದಲೂ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ ಐಯ್ಯರ್ ಐಪಿಎಲ್ಗಾಗಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮತ್ತಷ್ಟು ಶಕ್ತಿಯನ್ನು ನೀಡಲಿದ್ದಾರೆ ಶ್ರೇಯಸ್ ಐಯ್ಯರ್. ಆದರೆ ಶ್ರೇಯಸ್ ಐಯ್ಯರ್ ಸೇರ್ಪಡೆಯಿಂದ ನಾಯಕತ್ವದ ಗೊಂದಲ ಶುರುವಾಗಿದೆ. ಮೊದಲಾರ್ಧದಲ್ಲಿ ರಿಷಭ್ ಪಂತ್ ಅದ್ಭುತವಾಗಿ ನಾಯಕತ್ವ ನಿಭಾಯಿಸಿ ತಂಡವನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಆದರೆ ಖಾಯಂ ನಾಯಕನ ಸೇರ್ಪಡೆಯಿಂದಾಗಿ ನಾಯಕತ್ವದ ಜವಾಬ್ಧಾರು ಯಾರಿಗೆ ನೀಡುವುದು ಸೂಕ್ತ ಎಂಬ ಗೊಂದಲ ತಂಡದಲ್ಲಿದೆ.
ರಿಷಭ್ ಪಂತ್ ನಾಯಕನಾಗಿ ಮುಂದುವರಿಯಲಿದ್ದಾರೆ: ಈ ಮಧ್ಯೆ ಐಪಿಎಲ್ನ ಆರಂಭಕ್ಕೆ ದಿನಗಣನೆ ಶುರುವಾಗುತ್ತಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ನ ಮ್ಯಾನೇಜ್ಮೆಂಟ್ನ ಹೆಸರು ಹೇಳಲಿಚ್ಚಿಸದ ಮೂಲಗಳು ಈ ಬಗ್ಗೆ ಸುಳಿವನ್ನು ನೀಡಿದೆ. ಈ ಬಾರಿಯ ಐಪಿಎಲ್ ಆವೃತ್ತಿಯ ಅಂತ್ಯದವರೆಗೆ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದೆ. ಆದರೆ ಇದು ಕೇವಲ ಈ ಆವೃತ್ತಿಗೆ ಮಾತ್ರವೇ ಸೀಮಿತವಾಗಿರಲಿದೆ ಎಂದು ಈ ಮೂಲಗಳು ಮಾಹಿತಿ ನೀಡಿದೆ.
ಈ ಬಾರಿಯ ಐಪಿಎಲ್ಗಾಗಿ ಈಗ ಶ್ರೇಯಸ್ ಐಯ್ಯರ್ ಸಂಪೂರ್ಣವಾಗಿ ಸಿದ್ಧವಾಗಿದ್ದಾರೆ. ಸೆಪ್ಟೆಂಬರ್ 19ರಿಂದ ಐಪಿಎಲ್ನ ಉಳಿದ ಪಂದ್ಯಗಳು ಯುಎಇನಲ್ಲಿ ಆರಂಭವಾಗಲಿದೆ. ಈ ಬಾರಿಯ ಆವೃತ್ತಿಯ ಮೊದಲ ಚರಣದ ಪಂದ್ಯಗಳಲ್ಲಿ ಶ್ರೇಯಸ್ ಐಯ್ಯರ್ ಗಾಯಗೊಂಡಿದ್ದ ಕಾರಣದಿಂದಾಗಿ ರಿಷಭ್ ಪಂತ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ನೀಡಲಾಗಿತ್ತು. ಪಂತ್ ನಾಯಕತ್ವದಲ್ಲಿ ಡೆಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಈಗ ಶ್ರೇಯಸ್ ಐಯ್ಯರ್ ಕೂಡ ಐಪಿಎಲ್ನ ಉಳಿದ ಪಂದ್ಯಗಳಿಗೆ ಲಭ್ಯವಾಗಿದ್ದು ನಾಯಕತ್ವದ ಜವಾಬ್ಧಾರಿಯನ್ನು ಯಾರು ಹೊತ್ತುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಬಗ್ಗೆ ಅಧಿಕಥರ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಅದ್ಭುತ ಪ್ರದರ್ಶನ ನೀಡಿರುವ ಡೆಲ್ಲಿ: ಇನ್ನು ರಿಷಭ್ ಪಂತ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಅದ್ಭುತ ಪ್ರದರ್ಶನವನ್ನು ಈ ಬಾರಿಯ ಆವೃತ್ತಿಯಲ್ಲಿಯೂ ಮುಂದುವರಿಸಿದೆ. 2020ರ ಆವೃತ್ತಿಯ ರನ್ನರ್ಅಪ್ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಟ್ರೋಫಿಯನ್ನು ಎತ್ತಿಹಿಡಿಯುವ ಉತ್ಸಾಹವನ್ನು ವ್ಯಕ್ತಪಡಿಸುತ್ತಿದೆ. ಅಂಕಪಟ್ಟಿಯಲ್ಲಿ ಪಂತ್ ಪಡೆ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಈ ಮೂಲಕ ಎದುರಾಳಿಗಳಿಗೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಈಗ ಶ್ರೇಯಸ್ ಐಯ್ಯರ್ ಕೂಡ ತಂಡವನ್ನು ಸೇರಿಕೊಳ್ಳುತ್ತಿರುವುದು ತಂಡದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಉಳಿದ ಪಂದ್ಯಗಳು ಯುಎಇನಲ್ಲಿ ನಡೆಯುತ್ತಿದ್ದು ಯುಎಇನಲ್ಲಿ ಕೂಡ ಡೆಲ್ಲಿ ತಂಡ ಉತ್ತಮ ದಾಖಲೆಯನ್ನು ಹೊಂದಿದೆ. ಹೀಗಾಗಿ ಈ ಬಾರಿ ಕೂಡ ಟ್ರೋಫಿ ಮೇಲೆ ತಂಡ ಕಣ್ಣಿಟ್ಟಿದ್ದು ಈವರೆಗೆ ಸಾಧಿಸಲು ಅಸಾಧ್ಯವಾಗಿರುವ ಸಾಧನೆಯನ್ನು ಮಾಡುವ ಹುಮ್ಮಸ್ಸಿನಲ್ಲಿದೆ.