
ಇದೇ ತಿಂಗಳ ೨೬ರಿಂದ ಶುರುವಾಗಲಿರುವ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕುತ್ತಿದ್ದು, ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಇನ್ನು ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು, ಈ ಪಂದ್ಯದಲ್ಲಿ ಕಳೆದ ಐಪಿಎಲ್ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಚೆನ್ನೈ ವಿರುದ್ಧ ಸೆಣಸಾಡಲಿದೆ. ಇನ್ನು ಈ ಬಾರಿಯ ಲೀಗ್ ಹಂತದ ಎಲ್ಲಾ ಪಂದ್ಯಗಳು ಮಹಾರಾಷ್ಟ್ರದ ಕ್ರೀಡಾಂಗಣಗಳಲ್ಲಿ ನಡೆಯಲಿದ್ದು, ಈಗಾಗಲೇ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಸೂರತ್ನಲ್ಲಿ ಅಭ್ಯಾಸವನ್ನು ಆರಂಭಿಸಿದೆ.
ಹೌದು, ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ನಂತರ ಹಲವು ಬದಲಾವಣೆಗಳಿಗೆ ಒಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಸೂರತ್ನಲ್ಲಿ ನೆಟ್ ಅಭ್ಯಾಸವನ್ನು ಆರಂಭಿಸಿದೆ. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ನೆಟ್ ಅಭ್ಯಾಸ ಆರಂಭಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೇ ವೇಳೆ ನೂತನ ಆಟಗಾರನೋರ್ವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ್ದಾರೆ. ಹೌದು, ಕ್ರಿಕೆಟ್ ಶಿಶು ಐರ್ಲೆಂಡ್ ದೇಶದ ಯುವ ಬೌಲರ್ ಜೋಶ್ ಲಿಟಲ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ನೆಟ್ ಬೌಲರ್ ಆಗಿ ಆರಿಸಿಕೊಂಡಿದ್ದು, ಈ ವಿಷಯವನ್ನು ಸ್ವತಃ ಐರ್ಲೆಂಡ್ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಅವಕಾಶವನ್ನು ಪಡೆದುಕೊಂಡಿರುವ ಜೋಶ್ ಲಿಟಲ್ಗೆ ಶುಭಾಶಯವನ್ನು ಕೋರಿರುವ ಐರ್ಲೆಂಡ್ ಕ್ರಿಕೆಟ್ ಇದೊಂದು ಉತ್ತಮ ಅನುಭವವನ್ನು ನೀಡಲಿದೆ ಎಂದು ಬರೆದುಕೊಂಡಿದೆ.
ಇನ್ನು ೨೨ ವರ್ಷದ ಜೋಶ್ ಲಿಟಲ್ ೨೦೧೬ರಲ್ಲಿ ಹಾಂಗ್ ಕಾಂಗ್ ವಿರುದ್ಧ ನಡೆದಿದ್ದ ಪಂದ್ಯದ ಮೂಲಕ ಟಿ ಟ್ವೆಂಟಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆದರೆ, ಆ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೇ ಮಂಕಾದ ಜೋಶ್ ಲಿಟಲ್ ತನ್ನ ಚೊಚ್ಚಲ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದು ೪ ವಿಕೆಟ್ ಪಡೆದು ಮಿಂಚಿದ್ದರು. ಆ ಪಂದ್ಯದಲ್ಲಿ ಒಟ್ಟು ೮ ಓವರ್ ಮಾಡಿ ೪೫ ರನ್ ನೀಡಿದ್ದ ಜೋಶ್ ಲಿಟಲ್ ೪ ವಿಕೆಟ್ ಪಡೆದಿದ್ದರು. ಇನ್ನು ೨೦೨೧ರ ಟಿ ಟ್ವೆಂಟಿ ವಿಶ್ವಕಪ್ನಲ್ಲಿಯೂ ಭಾಗವಹಿಸಿದ್ದ ಜೋಶ್ ಲಿಟಲ್ ಯುಎಇ ವಿರುದ್ಧ ನಡೆದಿದ್ದ ಕ್ವಾಲಿಫೈಯರ್ ಸುತ್ತಿನ ಪಂದ್ಯವೊಂದರಲ್ಲಿ ಒಂದು ಮೆಡನ್ ಸಹಿತ ೪ ಓವರ್ ಮಾಡಿ ೧೭ ರನ್ ನೀಡಿ ೨ ವಿಕೆಟ್ ಪಡೆದಿದ್ದರು. ಹೀಗೆ ಆಡಿರುವ ಬಹುತೇಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಜೋಶ್ ಲಿಟಲ್ ಇಲ್ಲಿಯವರೆಗೂ ಏಕದಿನ ಕ್ರಿಕೆಟ್ನಲ್ಲಿ ೩೦ ವಿಕೆಟ್ ಪಡೆದಿದ್ದು, ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಒಟ್ಟು ೩೧ ಪಂದ್ಯಗಳನ್ನಾಡಿದ್ದಾರೆ. ಹಾಗೂ ತನ್ನ ಕೊನೆಯ ೧೦ ಟಿ ಟ್ವೆಂಟಿ ಪಂದ್ಯಗಳ ಪೈಕಿ ೧೩ ವಿಕೆಟ್ಗಳನ್ನು ಪಡೆದಿರುವ ಜೋಶ್ ಲಿಟಲ್ ೨೩ ರನ್ ನೀಡಿ ೩ ವಿಕೆಟ್ ಪಡೆದಿರುವುದು ಉತ್ತಮ ಪ್ರದರ್ಶನವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ, ದೀಪಕ್ ಚಹಾರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್ಗೇಕರ್, ಸಮರ್ಜಿತ್ ಸಿಂಗ್, ದ್ವಾನೆ ಸಿಂಗ್ ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಕೆ ಭಗತ್ ವರ್ಮಾ.