GT vs RCB: ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸಿರಾಜ್ರನ್ನು ಹೊರಹಾಕಿದ್ದೇಕೆ? ಕಾರಣ ಬಿಚ್ಚಿಟ್ಟ ಡು ಪ್ಲೆಸಿಸ್!

ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಸಮೀಪಿಸುತ್ತಿದ್ದು, ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಕನಸು ಕಾಣುತ್ತಿವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಸನ್ ರೈಸರ್ಸ್ ಹೈದಾರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು. ಅದರಲ್ಲಿಯೂ ಅಂಕಪಟ್ಟಿಯಲ್ಲಿ ತಲಾ 14 ಅಂಕಗಳನ್ನು ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪ್ಲೇಆಫ್ ಅರ್ಹತೆಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ ಎಂದೇ ಹೇಳಬಹುದು.
ಇನ್ನು ಈ ಎರಡೂ ತಂಡಗಳೂ ಟೂರ್ನಿಯ ಲೀಗ್ ಹಂತದಲ್ಲಿ ಇನ್ನೂ ತಲಾ ಒಂದೊಂದು ಪಂದ್ಯದಲ್ಲಿ ಆಡಲಿದ್ದು, ಎರಡೂ ಪಂದ್ಯಗಳು ಗೆಲ್ಲುವತ್ತ ಚಿತ್ತ ನೆಟ್ಟಿವೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ( ಮೇ 19 ) ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ಲೀಗ್ ಹಂತದ ತನ್ನ ಅಂತಿಮ ಪಂದ್ಯವನ್ನಾಡಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಇಂದು ( ಮೇ 19 ) ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಣಕ್ಕಿಳಿದಿದ್ದು, ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡರು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಫೀಲ್ಡಿಂಗ್ ಮಾಡಬೇಕಾಗಿ ಬಂತು. ಹೀಗೆ ಟಾಸ್ ಮುಕ್ತಾಯದ ನಂತರ ಪಂದ್ಯದ ಕುರಿತು ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ತಂಡದ ಆಡುವ ಬಳಗದಲ್ಲಿ ಒಂದು ಪ್ರಮುಖ ಬದಲಾವಣೆ ಆಗಿದೆ ಎಂಬುದನ್ನು ತಿಳಿಸಿದರು. ಹೌದು, ಆರ್ಸಿಬಿ ತಂಡದ ಪ್ರಮುಖ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಈ ಪಂದ್ಯದಿಂದ ಹೊರಹಾಕಲಾಗಿದ್ದು, ಆತನ ಬದಲು ಸಿದ್ಧಾರ್ಥ್ ಕೌಲ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ಮೊಹಮ್ಮದ್ ಸಿರಾಜ್ ಬದಲು ಸಿದ್ಧಾರ್ಥ್ ಕೌಲ್ ಕಣಕ್ಕಿಳಿದಿದ್ದೇಕೆ ಎಂಬುದನ್ನೂ ಸಹ ನಾಯಕ ಫಾಫ್ ಡು ಪ್ಲೆಸಿಸ್ ಬಿಚ್ಚಿಟ್ಟಿದ್ದು, ಈ ಕೆಳಕಂಡಂತೆ ಕಾರಣ ತಿಳಿಸಿದ್ದಾರೆ.

ಸಿರಾಜ್ ಬದಲು ಸಿದ್ಧಾರ್ಥ್ ಕಣಕ್ಕಿಳಿದದ್ದು ಈ ಕಾರಣಕ್ಕಾಗಿ
ಟಾಸ್ ಬಳಿಕ ಮಾತನಾಡಿದ ಫಾಫ್ ಡು ಪ್ಲೆಸಿಸ್ ತಂಡದ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮೊಹಮ್ಮದ್ ಸಿರಾಜ್ ಬದಲು ಸಿದ್ಧಾರ್ಥ್ ಕೌಲ್ ಕಣಕ್ಕಿಳಿಯುತ್ತಿದ್ದಾರೆ ಎಂದಿದ್ದು, ಪವರ್ಪ್ಲೇ ಓವರ್ಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಆಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಈ ಮೂಲಕ ಪವರ್ಪ್ಲೇ ಓವರ್ಗಳಲ್ಲಿ ವಿಕೆಟ್ ಕಬಳಿಸುವ ನಿಟ್ಟಿನಿಂದ ಮೊಹಮ್ಮದ್ ಸಿರಾಜ್ ಬದಲು ಸಿದ್ಧಾರ್ಥ್ ಕೌಲ್ರನ್ನು ಕಣಕ್ಕಿಳಿಸಲಾಗಿದೆ ಎಂಬುದನ್ನು ಫಾಫ್ ಬಿಚ್ಚಿಟ್ಟಿದ್ದಾರೆ.

ಡೆಲ್ಲಿ ಸೋಲಬೇಕು ಎಂದ ಫಾಫ್
ಇನ್ನೂ ಮುಂದುವರೆದು ಮಾತನಾಡಿದ ಫಾಫ್ ಡು ಪ್ಲೆಸಿಸ್ ಇಂದಿನ ಪಂದ್ಯದಲ್ಲಿ ನಾವು ಗೆಲ್ಲಬೇಕು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಮುಂದಿನ ಪಂದ್ಯದಲ್ಲಿ ಸೋಲಬೇಕು ಎಂದರು. ಹೀಗಾಗಿ ಇಂದಿನ ಪಂದ್ಯದಲ್ಲಿ ನಾವು ಹೆಚ್ಚಿನ ವಿಕೆಟ್ ಕಬಳಿಸಬೇಕಿದೆ ಎಂದೂ ಸಹ ಫಾಫ್ ಡು ಪ್ಲೆಸಿಸ್ ಹೇಳಿಕೆ ನೀಡಿದರು.

ಟೂರ್ನಿಯಲ್ಲಿ ಸಿರಾಜ್ ನೀರಸ ಪ್ರದರ್ಶನ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊಹಮ್ಮದ್ ಸಿರಾಜ್ 13 ಪಂದ್ಯಗಳನ್ನಾಡಿದ್ದು 45 ಓವರ್ ಬೌಲಿಂಗ್ ಮಾಡಿ ಕೇವಲ 8 ವಿಕೆಟ್ ಪಡೆದಿದ್ದಾರೆ. ಹೀಗೆ ಈ ಬಾರಿಯ ಟೂರ್ನಿಯಲ್ಲಿ ಸಿರಾಜ್ ಅಕ್ಷರಶಃ ಮಂಕಾಗಿದ್ದು, ತಂಡದ ಮಹತ್ವದ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಕೈತಪ್ಪಿಸಿಕೊಂಡಿದ್ದಾರೆ. ಇನ್ನು ಸಿರಾಜ್ ಈ ಬಾರಿ ಬರೋಬ್ಬರಿ 442 ರನ್ಗಳನ್ನು ನೀಡಿದ್ದು ಇದು ಈತ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯೊಂದರಲ್ಲಿ ನೀಡಿದ ಅತ್ಯಧಿಕ ರನ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications