ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಿರುವುದು ದೊಡ್ಡ ಚಿಂತೆಯನ್ನು ಕಡಿಮೆಗೊಳಿಸಿದೆ. ಫ್ರಾಂಚೈಸಿ ರೋಹಿತ್ ಶರ್ಮಾ ಸುತ್ತವೇ ತಂಡವನ್ನು ಕಟ್ಟಲು ನೋಡಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಇನ್ನು ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರನ್ನು ಹರಾಜಿನಲ್ಲಿ ಮರಳಿ ಸೇರ್ಪಡೆಗೊಳಿಸುವ ಪ್ರಯತ್ನವನ್ನು ನಡೆಸಲಿದೆ. ಯಾಕೆಂದರೆ ದಕ್ಷಿಣ ಆಫ್ರಿಕಾದ ಈ ಆಟಗಾರ ಆರಂಭಿಕನಾಗಿ ಮತ್ತು ವಿಕೆಟ್ಕೀಪರ್ ಆಗಿದ್ದು ತಂಡಕ್ಕೆ ಅದ್ಭುತವಾಗಿ ಹೊಂದಿಕೊಳ್ಳುತ್ತಾರೆ.
ತಂಡಕ್ಕಿರುವ ದೊಡ್ಡ ಅವಶ್ಯಕತೆ: ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದ ಹಾರ್ದಿಕ್ ಪಾಂಡ್ಯ ರೀಟೈನ್ ಆಗದೆ ಬಿಡುಗಡೆಯಾದ ನಂತರ ಐಪಿಎಲ್ 2022 ಕ್ಕೆ ಅಹಮದಾಬಾದ್ ಫ್ರಾಂಚೈಸಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ನಾಯಕತ್ವದ ಹೊಣೆಗಾರಿಕೆ ನೀಡಿದೆ. ಹೀಗಾಗಿ ಈ ಸ್ಥಾನವನ್ನು ತುಂಬಲು ಸಮರ್ಥ ಆಲ್ರೌಂಡರ್ನ ಅವಶ್ಯಕತೆಯಿದೆ ಮುಂಬೈ ಇಂಡಿಯನ್ಸ್ ತಂಡಕ್ಕೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರ್ಸಿಬಿ ತಂಡ ಈ ಹರಾಜಿನಲ್ಲಿ ತಳಮಟ್ಟದಿಂದಲೇ ಬಲಿಷ್ಠಗೊಳ್ಳಬೇಕಿದೆ. ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ವೆಲ್ ಅವರಂತಾ ಅನುಭವಿ ಆಟಗಾರರು ತಂಡದಲ್ಲಿದ್ದು ಈ ಬಾರಿಯ ಹರಾಜಿನಲ್ಲಿ ಯುವ ಹಾಗೂ ಅನುಭವಿಗಳ ಅತ್ಯುತ್ತಮ ಸಂಯೋಜನೆಯ ತಂಡವನ್ನು ಫ್ರಾಂಚೈಸಿ ಆಯ್ಕೆ ಮಾಡುವ ಅಗತ್ಯವಿದೆ.
ಫ್ರಾಂಚೈಸಿಯ ಅವಶ್ಯಕತೆ: 2021ರ ಐಪಿಎಲ್ ಆವೃತ್ತಿಯ ಬಳಿಕ ಕೊಹ್ಲಿ ನಾಯಕತ್ವದ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾರಣ ಆರ್ಸಿಬಿ ತಂಡವನ್ನು ಮುನ್ನಡೆಸುವ ಆಟಗಾರನನ್ನು ಆಯ್ಕೆ ಮಾಡಬೇಕಿದೆ. ಇಲ್ಲವಾದಲ್ಲಿ ಮ್ಯಾಕ್ಸ್ವೆಲ್ ಅವರನ್ನು ನಾಯಕತ್ವಕ್ಕೆ ಪರಿಗಣಿಸಬಹುದು. ಆದರೆ ಬೆಂಗಳೂರು ತಂಡಕ್ಕೆ ಬ್ಯಾಕ್-ಅಪ್ ಆಯ್ಕೆಯ ಅಗತ್ಯವಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಸೇರ್ಪಡೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಎಬಿ ಡಿವಿಲಿಯರ್ಸ್ ನಿವೃತ್ತಿಯ ನಂತರ ಆರ್ಸಿಬಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕೊರತೆ ಕಾಡಲಿದ್ದು ಆ ಸ್ಥಾನವನ್ನು ಸಮರ್ಥ ಆಟಗಾರ ತುಂಬುವ ಅಗತ್ಯವಿದೆ.
ಸನ್ರೈಸರ್ಸ್ ಹೈದರಾಬಾದ್
ಸನ್ರೈಸರ್ಸ್ ಹೈದರಾಬಾದ್ ತಂಡ ರೀಟೆನ್ಶನ್ನಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ಉಳಿಸಿಕೊಂಡಿರುವುದರಿಂದ ತಮಡದ ನಾಯಕತ್ವ ಕೇನ್ ಹೆಗಲಿಗೇರುವುದು ಖಚಿತ. ಆದರೆ ಗಾಯದ ಕಾರಣದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಕೇನ್ ಹೊರಗುಳಿದಿರುವ ಕಾರಣ ಅವರ ಫಿಟ್ನೆಸ್ ಮೇಲೆ ಫ್ರಾಂಚೈಸಿ ನಿಗಾ ವಹಿಸಲಿದೆ.
ಫ್ರಾಂಚೈಸಿಯ ದೊಡ್ಡ ಅವಶ್ಯಕತೆ: ಡೇವಿಡ್ ವಾರ್ನರ್ ಮತ್ತು ರಶೀದ್ ಖಾನ್ ಅವರನ್ನು ಹೈದರಾಬಾದ್ ಫ್ರಾಂಚೈಸಿ ಬಿಡುಗಡೆ ಮಾಡಿದ ನಂತರ ಗುಣಮಟ್ಟದ ಆರಂಭಿಕ ಆಟಗಾರ ಮತ್ತು ರಶೀದ್ ಖಾನ್ಗೆ ಸರಿಸಾಟಿಯಾಗಬಲ್ಲ ಸ್ಪಿನ್ನರ್ ಅನ್ನು ಸೇರ್ಪಡೆಗೊಳಿಸಲು ಉತ್ಸುಕವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಸೂಪರ್ ಕಿಂಗ್ಸ್
ಸಿಎಸ್ಕೆ ತಂಡ ದೀರ್ಘಾವಧಿಯ ಆಯ್ಕೆಯತ್ತ ಈ ಬಾರಿಯ ಮೆಗಾ ಹರಾಜಿನಲ್ಲಿ ಚಿತ್ತ ಹರಿಸುವುದು ಸ್ಪಷ್ಟ. ಯಾಕೆಂದರೆ ಎಂಎಸ್ ಧೋನಿ ಈ ಋತುವಿನ ನಂತರ ಆಟಗಾರ/ನಾಯಕನಾಗಿ ಮುಂದುವರಿಯುವುದು ಬಹುತೇಕ ಅನುಮಾನ. ಹೀಗಾಗಿ ಫ್ರಾಂಚೈಸಿ ಅನುಭವಿ ಹಾಗೂ ಯುವ ಆಟಗಾರರ ಸಮತೋಲಿತ ತಂಡವನ್ನು ಕಟ್ಟುವುದು ಅನಿವಾರ್ಯವಾಗಿದೆ.
ಫ್ರಾಂಚೈಸಿಯ ದೊಡ್ಡ ಅವಶ್ಯಕತೆ: ಐಪಿಎಲ್ನಲ್ಲಿಯೂ ಧೋನಿ ನಿವೃತ್ತಿಯ ಅಂಚಿನಲ್ಲಿರುವ ಕಾರಣ ಮುಂಬರುವ ಟೂರ್ನಿಯಲ್ಲಿ ತಂಡವನ್ನು ಸುದೀರ್ಘ ಕಾಲ ಮುನ್ನಡೆಸಬಹುದಾದ ಆಟಗಾರನ ಮೇಲೆ ಸಿಎಸ್ಕೆ ಚಿತ್ತ ನೆಡುವ ಸಾಧ್ಯತೆಯಿದೆ. ಹೀಗಾಗಿ ಆರ್ಸಿಬಿ ರೀತಿಯಲ್ಲಿಯೇ ಶ್ರೇಯಸ್ ಐಯ್ಯರ್ ಮೇಲೆ ಅಥವಾ ಡೇವಿಡ್ ವಾರ್ನರ್ರನ್ನು ಗುರಿಯಾಗಿಸಿಕೊಂಡಿರುವ ಸಾಧ್ಯತೆಯಿದೆ.
ಕೋಲ್ಕತ್ತಾ ನೈಟ್ ರೈಡರ್ಸ್
ಐಪಿಎಲ್ 2021ರ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಇಯಾನ್ ಮಾರ್ಗನ್ ನೇತೃತ್ವದಲ್ಲಿ ಫೈನಲ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿತ್ತು. ಈ ಹಂತಕ್ಕೇರಲು ಕೆಕೆಆರ್ ಸಾಕಷ್ಟು ಅದೃಷ್ಟವನ್ನು ಕೂಡ ಹೊಂದಿತ್ತು ಎಂದರೆ ತಪ್ಪಾಗಲಾರದು. ಆದರೆ ಫ್ರಾಂಚೈಸಿ ನಾಯಕ ಇಯಾನ್ ಮೋರ್ಗನ್ ಅವರನ್ನು ಬಿಡುಗಡೆ ಮಾಡಿದೆ. ಹೀಗಾಗಿ ಕೆಕೆಆರ್ ಕೂಡ ನಾಯಕನ ಹುಡುಕಾಟದಲ್ಲಿದೆ. ಕೆಕೆಆರ್ ಕೂಡ ಶ್ರೇಯಸ್ ಐಯ್ಯರ್ ಮೇಲೆಯೆ ಚಿತ್ತ ನೆಡಲಿದೆಯೇ ಅಥವಾ ಬೆರೆ ಯಾರನ್ನಾದರೂ ಗುರಿ ಮಾಡಿಕೊಂಡಿದೆಯೇ ಎಮಬುದು ಕುತೂಹಲವಾಗಿದೆ.
ಫ್ರಾಂಚೈಸಿಯ ಅವಶ್ಯಕತೆ: ನಾಯಕನನ್ನು ಹೊರತುಪಡಿಸಿ ಮುಂದಿನ ಆವೃತ್ತಿಗಾಗಿ ಕೆಕೆಆರ್ ಪ್ರಾಂಚೈಸಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ನ ಮೇಲೆಯೂ ಚಿತ್ತ ನೆಡಬೇಕಿದೆ. ಅಲ್ಲದೆ ಪ್ಯಾಟ್ ಕಮ್ಮಿನ್ಸ್ ಅವರನ್ನು ಹರಾಜಿಗೆ ಬಿಡುಗಡೆಗೊಳಿಸಿರುವ ಕಾರಣ ಗುಣಮಟ್ಟದಲ್ಲಿ ವೇಗಿ ಅಗತ್ಯವಿದೆ.
ಡೆಲ್ಲಿ ಕ್ಯಾಪಿಟಲ್ಸ್
ಐಪಿಎಲ್ 2020 ಮತ್ತು 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತವಾದ ಪ್ರದರ್ಶನ ನಿಡುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ 2022ರ ಐಪಿಎಲ್ ಆವೃತ್ತಿಯಲ್ಲಿಯೂ ರಿಷಬ್ ಪಂತ್ ನೇತೃತ್ವದಲ್ಲಿ ಅದೇ ರೀತಿಯ ಪ್ರದರ್ಶನ ಮುಂದುವರಿಸುವ ವಿಶ್ವಾಸವನ್ನು ಹೊಂದಿದೆ. ಈ ಮೂಲಕ ಐಪಿಎಲ್ನಲ್ಲಿ ಈವರೆಗೂ ಗೆಲ್ಲಲು ಅಸಾಧ್ಯವಾಗಿರುವ ಟ್ರೋಫಿಯನ್ನು ಎತ್ತಿ ಹಿಡಿಯುವತ್ತ ಕ್ಯಾಪಿಟಲ್ಸ್ ಚಿತ್ತ ನೆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕತ್ವದ ಬಗ್ಗೆ ಚಿಂತೆಯಿಲ್ಲದಿರುವ ಕಾರಣ ರಿಷಭ್ ಪಂತ್ ಸುತ್ತ ತಂಡವನ್ನು ಕಟ್ಟಲಿದೆ ಡೆಲ್ಲಿ ಕ್ಯಾಪಿಟಲ್ಸ್
ಫ್ರಾಂಚೈಸಿಯ ಅವಶ್ಯಕತೆ: ಶಿಖರ್ ಧವನ್ ಅವರನ್ನು ಫ್ರಾಂಚೈಸಿ ಹರಾಜಿಗೆ ಬಿಟ್ಟಿರುವ ಕಾರಣ ಸಮರ್ಥ ಆರಂಭಿಕ ಆಟಗಾರನನ್ನು ತಂಡ ಹುಡುಕಬೇಕಿದೆ. ಅಥವಾ ಅವರನ್ನೇ ಹರಾಜಿನಲ್ಲಿ ಮರಳಿ ಪಡೆಯಲು ಪ್ರಯತ್ನಿಸಬಹುದು. ಅನ್ರಿಚ್ ನಾರ್ಕಿಯಾ ಅವರನ್ನು ರೀಟೈನ್ ಮಾಡಿಕೊಂಡಿರುವ ಡಿಸಿ ಅವರಿಗೆ ಸಮರ್ಥ ಜೊತೆಗಾರನ್ನನು ಕೂಡ ಹುಡುಕಬೇಕಾಗಿದೆ.
ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ತಂಡ ಈ ಬಾರಿಯ ಹರಾಜಿನಲ್ಲಿ ಸಂಜು ಸ್ಯಾಮ್ಸನ್ ಮತ್ತು ಜೋಸ್ ಬಟ್ಲರ್ ಅವರನ್ನು ಉಳಿಸಿಕೊಂಡಿದೆ. ಹೀಗಾಗಿ ಒಂದು ಹಂತದಲ್ಲಿ ಫ್ರಾಂಚೈಸಿ ನಾಯಕ, ಆರಂಭಿಕ ಆಟಗಾರ ಮತ್ತು ವಿಕೆಟ್ ಕೀಪರ್ ಹೊಂದುವ ಒತ್ತಡವನ್ನು ಕಳೆದುಕೊಂಡಿದೆ. ಈಗ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಹರಾಜಿನಲ್ಲಿ ತಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ತಂಡವನ್ನು ನಿರ್ಮಿಸುವತ್ತ ಸಂಪೂರ್ಣ ಚಿತ್ತ ನೆಡಬಹುದಾಗಿದೆ.
ಫ್ರಾಂಚೈಸಿಯ ದೊಡ್ಡ ಅವಶ್ಯಕತೆ: ರಾಯಲ್ಸ್ ಯಾವಾಗಲೂ ದುರ್ಬಲ ಬೌಲಿಂಗ್ ವಿಭಾಗವನ್ನು ಹೊಂದಿದೆ. ಜೋಫ್ರಾ ಆರ್ಚರ್ ಇನ್ನು ಕೂಡ ಲಭ್ಯವಿಲ್ಲ. ಹೀಗಾಗಿ ಆರ್ಆರ್ ಈ ಬಾರಿಯ ಹರಾಜಿನಲ್ಲಿ ಕೆಲ ಪ್ರಮುಖ ಬೌಲರ್ಗಳನ್ನು ತಂಡಕ್ಕೆ ಸೇರ್ಪಡೆಗೊಳಿಸುವತ್ತ ಚಿತ್ತ ನೆಡಬಹುದು.
ಪಂಜಾಬ್ ಕಿಂಗ್ಸ್
ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಈ ಬಾರಿಯ ಹರಾಜಿಗೂ ಮುನ್ನ ತಂಡದಿಂದ ಹೊರಗುಳಿಯಲು ನಿರ್ಧಾರವನ್ನು ತೆಗೆದುಕೊಂಡಿದ್ದರು. ಮಯಾಂಕ್ ಅಗರ್ವಾಲ್ ಅವರನ್ನು ಫ್ರಾಂಚೈಸಿ ಉಳಿಸಿಕೊಂಡಿದ್ದು ಅವರನ್ನು ನಾಯಕನಾಗಿ ನೇಮಿಸುವ ಸಾಧ್ಯತೆ ಹೆಚ್ಚಿದ್ದರೂ ಬ್ಯಾಕಪ್ ಆಯ್ಕೆಯನ್ನು ಹೊಂದಲು ಬಯಸಿದ್ದರೆ ಅಚ್ಚರಿಯಿಲ್ಲ.
ಫ್ರಾಂಚೈಸಿಯ ದೊಡ್ಡ ಅವಶ್ಯಕತೆ: ರಾಜಸ್ಥಾನ್ ರಾಯಲ್ಸ್ನಂತೆಯೇ ಕಿಂಗ್ಸ್ ಕೂಡ ಹೆಚ್ಚಾಗಿ ಅಸಮತೋಲಿತ ತಂಡವನ್ನು ಹೊಂದಿದೆ. ಈ ಬಾರಿಯ ಹರಾಜಿನಲ್ಲಿ ಅದನ್ನು ನಿಭಾಯಿಸಲು ಪಂಜಾಬ್ ಕಿಂಗ್ಸ್ ಸಜ್ಜಾಗಿದ್ದು ಸಾಕಷ್ಟು ರಣತಂತ್ರದೊಂದಿಗೆ ಹರಾಜಿಗೆ ಸಜ್ಜಾಗುತ್ತಿದೆ.
ಅಹಮದಾಬಾದ್ ಹಾಗೂ ಲಕ್ನೋ ಸೂಪರ್ಜೈಂಟ್ಸ್
ಮುಂಬರುವ ಐಪಿಎಲ್ ಆವೃತ್ತಿಗಾಗಿ ಹೊಸದಾಗಿ ಸೇರ್ಪಡೆಯಾಗಿರುವ ಎರಡು ಫ್ರಾಂಚೈಸಿಗಳಾದ ಅಹಮದಾಬಾದ್ ಹಾಗೂ ಲಕ್ನೋ ಫ್ರಾಂಚೈಸಿಗಳು ಈಗಾಗಲೇ ತಲಾ ಮೂವರು ಆಟಗಾರರನ್ನು ಸೇರ್ಪಡೆಗೊಳಿಸಿದೆ. ಹರಾಜಿಗಾಗಿ ಬಿಡುಗಡೆಯಾಗಿರುವ ಆಟಗಾರರ ಪಟ್ಟಿಯಲ್ಲಿ ಈ ಆಯ್ಕೆಯನ್ನು ಮಾಡಲು ಅವಕಾಶವನ್ನು ನೀಡಲಾಗಿತ್ತು. ಇದರಲ್ಲಿ ಲಕ್ನೋ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದು ಅಹಮದಾಬಾದ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ.