
2022ರ ಟಿ20 ವಿಶ್ವಕಪ್ನಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ, ಭಾರತ ತಂಡ ಇದೀಗ ದ್ವಿಪಕ್ಷೀಯ ಸರಣಿಗಳತ್ತ ಗಮನಹರಿಸಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರನ್ನು ಮುನ್ನೆಲೆಗೆ ತರಲು ಎದುರು ನೋಡುತ್ತಿದೆ. ಏಕೆಂದರೆ ಮುಂದಿನ ಟಿ20 ವಿಶ್ವಕಪ್ ವೇಳೆಗೆ ಯುವ ಭಾರತ ತಂಡವನ್ನು ಕಟ್ಟಲು ಎಲ್ಲೆಡೆ ಕೂಗು ಕೇಳಿಬರುತ್ತಿದೆ.
ಹೀಗಾಗಿ ಈಗಿನಿಂದಲೇ ಸಿದ್ಧತೆ ಆರಂಭಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಹಿರಿಯ ಆಟಗಾರರಿಗೆ ಕೋಕ್ ನೀಡಿ, ಯುವ ದಾಂಡಿಗರಿಗೆ ಮಣೆ ಹಾಕಿದೆ.
ನವೆಂಬರ್ 18ರಿಂದ ಆರಂಭಗೊಳ್ಳುವ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪುಟಿದೇಳಲು ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಸಜ್ಜಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿರುವುದು ಒಂದು ರೀತಿಯಲ್ಲಿ ಉತ್ತಮ ಪ್ರದರ್ಶನ ಎನ್ನಬಹುದು. ಏಕೆಂದರೆ 2021ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಲೀಗ್ನಿಂದಲೇ ಹೊರಬಿದ್ದಿದ್ದರು.
ಆದರೆ, ಕೊನೆಯ ಬಾರಿಗೆ ಟಿ20 ವಿಶ್ವಕಪ್ ಗೆದ್ದು 15 ವರ್ಷಗಳಾಗಿದ್ದರಿಂದ, ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯುತ್ತದೆ ಎಂಬ ಭಾರಿ ನಿರೀಕ್ಷೆಗಳು ಕೋಟ್ಯಂತರ ಅಭಿಮಾನಿಗಳಲ್ಲಿ ಮನೆಮಾಡಿದ್ದವು. ಆದರೆ ಇಂಗ್ಲೆಂಡ್ ವಿರುದ್ಧದ ಸೋಲು ಎಲ್ಲ ನಿರೀಕ್ಷೆಗಳನ್ನು ತಲೆಕೆಳಗಾಗಿ ಮಾಡಿದವು.

ಟಿ20 ವಿಶ್ವಕಪ್ ನಂತರ ನ್ಯೂಜಿಲೆಂಡ್ ತಂಡಕ್ಕೂ ಮೊದಲ ಸರಣಿಯಾಗಿದೆ. ಅಲ್ಲಿನ ಆಯ್ಕೆಗಾರರು ಸಹ ಯುವಕರಿಗೆ ಅವಕಾಶವನ್ನು ನೀಡಲು ಪ್ರಯತ್ನಿಸಿದೆ.
ಫೀಲ್ಡಿಂಗ್ ಕೋಚ್ ಆಗಿ ವಿವಿಧ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಹಲವು ವರ್ಷಗಳನ್ನು ಕಳೆದಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಮಾತನಾಡಿ, ಪ್ರಸ್ತುತ ಆಟಗಾರರ ಪ್ರದರ್ಶನ ಟಿ20 ಸ್ವರೂಪದಲ್ಲಿ ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದ್ದಾರೆ. ಈ ಯುವ ಆಟಗಾರರಿಗೆ ಅನುಭವ ಪಡೆಯಲು ಐಪಿಎಲ್ ಸಾಕಷ್ಟು ಸಹಾಯ ಮಾಡಿದೆ. ಇದೀಗ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಖಂಡಿತವಾಗಿಯೂ ವೇದಿಕೆ ಸಿದ್ಧವಾಗಿದೆ ಎಂದು ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ.
"ಟಿ20 ವಿಶ್ವಕಪ್ ನಂತರ ನ್ಯೂಜಿಲೆಂಡ್ ವಿರುದ್ಧ ಆಯ್ಕೆಯಾದ ಭಾರತದ ಟಿ20 ತಂಡವನ್ನು ನೀವು ನೋಡಿದರೆ, ಅದು ಆಟಗಾರರ ಸಾಮರ್ಥ್ಯದ ಬಲವಾದ ಸೂಚನೆಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಹೇಳಿದರು.
ನ್ಯೂಜಿಲೆಂಡ್ನಲ್ಲಿರುವ ಪ್ರಸ್ತುತ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಇಶಾನ್ ಕಿಶನ್, ರಾಹುಲ್ ತ್ರಿಪಾಠಿ ಮತ್ತು ಶುಭಮನ್ ಗಿಲ್ ಸೇರಿದಂತೆ ಹಲವರು ಇದ್ದಾರೆ. ಈ ಯುವ ಆಟಗಾರರ ಪ್ರದರ್ಶನ ಮುಂದಿನ ವಿಶ್ವಕಪ್ಗೆ ದಾರ ಮಾಡಿಕೊಡಲಿದೆ ಎಂದು ಅಂದಾಜಿಸಲಾಗಿದೆ.