ಮಹಾರಾಜ ಟ್ರೋಫಿ: ಅಬ್ಬರಿಸಿದ ಮಯಾಂಕ್; ಬೆಂಗಳೂರು ವಿರುದ್ಧ ಸೋತ ಮನೀಶ್ ನೇತೃತ್ವದ ಗುಲ್ಬರ್ಗಾ ಮಿಸ್ಟಿಕ್ಸ್

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ನೂತನವಾಗಿ ಟಿ ಟ್ವೆಂಟಿ ಕ್ರಿಕೆಟ್ ಲೀಗ್ ಒಂದನ್ನು ಆರಂಭಿಸಿದ್ದು, ಇದಕ್ಕೆ ಮಹಾರಾಜ ಕ್ರಿಕೆಟ್ ಟೂರ್ನಮೆಂಟ್ ಎಂದು ಹೆಸರನ್ನು ಇಟ್ಟಿದೆ. ಈ ಟಿ ಟ್ವೆಂಟಿ ಲೀಗ್ ಟೂರ್ನಿ ಈ ಹಿಂದೆ ರಾಜ್ಯ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ಇದ್ದು, ಒಟ್ಟು 6 ತಂಡಗಳು ಲೀಗ್ನಲ್ಲಿ ಭಾಗವಹಿಸಿವೆ.
ಆಗಸ್ಟ್ 7ರ ಭಾನುವಾರದಿಂದ ಈ ಮಹಾರಾಜ ಟಿ ಟ್ವೆಂಟಿ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಆರಂಭವಾಗಿದ್ದು, ಇಂದು ( ಆಗಸ್ಟ್ 8 ) ಟೂರ್ನಿಯ ಲೀಗ್ ಹಂತದ ಮೂರನೇ ಮತ್ತು ನಾಲ್ಕನೇ ಪಂದ್ಯಗಳು ಜರುಗಿವೆ. ಟೂರ್ನಿಯ ಮೂರನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡದ ನಾಯಕ ಮನೀಷ್ ಪಾಂಡೆ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೆ 190 ರನ್ಗಳ ಕಠಿಣ ಗುರಿಯನ್ನು ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಗುಲ್ಬರ್ಗಾ ಮಿಸ್ಟಿಕ್ಸ್ 19.1 ಓವರ್ಗಳಲ್ಲಿ 135 ರನ್ಗಳಿಗೆ ಆಲ್ ಔಟ್ ಆಗಿ 54 ರನ್ಗಳ ಹೀನಾಯ ಸೋಲನ್ನು ಅನುಭವಿಸಿತು. ಈ ಮೂಲಕ ಬೆಂಗಳೂರು ಬ್ಲಾಸ್ಟರ್ಸ್ ಟೂರ್ನಿಯಲ್ಲಿನ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಗೆದ್ದು ಶುಭಾರಂಭ ಮಾಡಿದರೆ, ಗುಲ್ಬರ್ಗ ಮಿಸ್ಟಿಕ್ಸ್ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಸೋತು ಮುಗ್ಗರಿಸಿದೆ.

ಬೆಂಗಳೂರು ಬ್ಲಾಸ್ಟರ್ಸ್ ಇನ್ನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪರ ಎಲ್ ಆರ್ ಚೇತನ್ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು. ಈ ಪೈಕಿ ಎಲ್ ಆರ್ ಚೇತನ್ 25 ರನ್ ಕಲೆಹಾಕಿದರೆ, ನಾಯಕ ಮಯಾಂಕ್ ಅಗರ್ವಾಲ್ 25 ಎಸೆತಗಳಲ್ಲಿ 52 ರನ್ ಚಚ್ಚಿದರು. 208 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ ಮಯಾಂಕ್ ಅಗರ್ವಾಲ್ 7 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಇನ್ನುಳಿದಂತೆ ಅನೀಶ್ ಕೆವಿ 44, ಸೂರಜ್ ಅಹುಜಾ 17, ಶಿವಕುಮಾರ್ ರಕ್ಷಿತ್ 12, ಜಗದೀಶ ಸುಚಿತ್ 6, ಕ್ರಾಂತಿ ಕುಮಾರ್ 22, ರಿಷಿ ಬೋಪಣ್ಣ 4 ಮತ್ತು ಕುಮಾರ್ ಎಲ್ ಆರ್ ಅಜೇಯ 1 ರನ್ ಕಲೆ ಹಾಕಿದರು.
ಗುಲ್ಬರ್ಗಾ ಮಿಸ್ಟಿಕ್ಸ್ ಪರ ವಿದ್ವತ್ ಕಾವೇರಪ್ಪ ಮತ್ತು ರಿತೇಶ್ ಭಟ್ಕಳ್ ತಲಾ 2 ವಿಕೆಟ್ ಪಡೆದರೆ, ಕಾರ್ತಿಕ್ ಸಿಎ ಮತ್ತು ಪ್ರಣವ್ ಭಾಟಿಯಾ ತಲಾ ಒಂದೊಂದು ವಿಕೆಟ್ ಪಡೆದರು.

ಗುಲ್ಬರ್ಗಾ ಮಿಸ್ಟಿಕ್ಸ್ ಇನ್ನಿಂಗ್ಸ್
ಬೆಂಗಳೂರು ಬ್ಲಾಸ್ಟರ್ಸ್ ನೀಡಿದ ಕಠಿಣ ಗುರಿಯನ್ನು ಬೆನ್ನತ್ತಿದ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಕಾರ್ತಿಕ್ ಸಿಎ ಗೋಲ್ಡನ್ ಡಕ್ ಔಟ್ ಆದರೆ, ದೇವದತ್ ಪಡಿಕ್ಕಲ್ 18 ರನ್ ಕಲೆ ಹಾಕಿ ಉತ್ತಮ ಆಟ ಆಡುವಲ್ಲಿ ವಿಫಲರಾದರು. ಇನ್ನುಳಿದಂತೆ ನಾಯಕ ಮನೀಷ್ ಪಾಂಡೆ 2 ರನ್, ಕೆ ಎಲ್ ಶ್ರೀಜಿತ್ 25, ಬೆಂಗಳೂರು ಮೋಹಿತ್ 10, ಕೃತಿಕ್ ಕೃಷ್ಣ 6, ಮನೋಜ್ ಭಂಡಾಗೆ 35, ರಿತೇಶ್ ಭಟ್ಕಳ್ 10, ಪ್ರಣವ್ ಭಾಟಿಯಾ 10, ಅಭಿಲಾಷ್ ಶೆಟ್ಟಿ 2 ಮತ್ತು ವಿದ್ವತ್ ಕಾವೇರಪ್ಪ ಅಜೇಯ 4 ರನ್ ಕಲೆ ಹಾಕಿದರು.
ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪರ ರೋನಿತ್ ಮೋರೆ 4 ವಿಕೆಟ್ ಪಡೆದರೆ, ಕುಮಾರ್ ಎಲ್ ಆರ್ ಮತ್ತು ರಿಷಿ ಬೋಪಣ್ಣ ತಲಾ 2 ವಿಕೆಟ್ ಹಾಗೂ ಪ್ರದೀಪ್ ಟಿ ಮತ್ತು ಜಗದೀಶ ಸುಚಿತ್ ತಲಾ ಒಂದೊಂದು ವಿಕೆಟ್ ಪಡೆದರು.

ಆಡುವ ಬಳಗಗಳು
ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಉಭಯ ತಂಡಗಳ ಆಡುವ ಬಳಗ ಕೆಳಕಂಡಂತಿದೆ.
ಬೆಂಗಳೂರು ಬ್ಲಾಸ್ಟರ್ಸ್:ಮಯಾಂಕ್ ಅಗರ್ವಾಲ್ (ನಾಯಕ), ಎಲ್ ಆರ್ ಚೇತನ್ (ವಿಕೆಟ್ ಕೀಪರ್), ಅನೀಶ್ ಕೆವಿ, ಸೂರಜ್ ಅಹುಜಾ, ಶಿವಕುಮಾರ್ ರಕ್ಷಿತ್, ಜಗದೀಶ ಸುಚಿತ್, ಕ್ರಾಂತಿ ಕುಮಾರ್, ರಿಷಿ ಬೋಪಣ್ಣ, ಕುಮಾರ್ ಎಲ್ ಆರ್, ಪ್ರದೀಪ್ ಟಿ, ರೋನಿತ್ ಮೋರೆ
ಗುಲ್ಬರ್ಗಾ ಮಿಸ್ಟಿಕ್ಸ್:ದೇವದತ್ತ್ ಪಡಿಕ್ಕಲ್, ಕೋದಂಡ ಅಜಿತ್ ಕಾರ್ತಿಕ್, ಮನೀಶ್ ಪಾಂಡೆ (ನಾಯಕ), ಕೆಎಲ್ ಶ್ರೀಜಿತ್, ಬೆಂಗಳೂರು ಮೋಹಿತ್, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ರಿತೇಶ್ ಭಟ್ಕಳ್, ಪ್ರಣವ್ ಭಾಟಿಯಾ, ಅಭಿಲಾಷ್ ಶೆಟ್ಟಿ, ವಿಧ್ವತ್ ಕಾವೇರಪ್ಪ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications