ನಮ್ಮೂರ ಪ್ರತಿಭೆ: ಏಷ್ಯನ್ ಚಾಂಪಿಯನ್ಶಿಪ್ ಚಿನ್ನ ಗೆದ್ದ ಕುಸ್ತಿ ಪೈಲ್ವಾನ್ ಮುಧೋಳದ ನಿಂಗಪ್ಪ

ಭಾರತ ಕುಸ್ತಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಕೆಲವು ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದಲ್ಲಿ ಹೆಸರಾದ ಕುಸ್ತಿಪಟುಗಳು ಈಗಾಗಲೇ ವಿಶ್ವಮಟ್ಟದಲ್ಲಿ ಮಿಂಚಿದ್ದಾರೆ. ಆದರೆ ಕರ್ನಾಟಕದಿಂದ ದೇಶದ ಮಟ್ಟಿಗೆ ಹೆಸರುವಾಸಿಯಾದ ಕುಸ್ತಿಪಟುಗಳ ಸಂಖ್ಯೆ ಬೆರಳಣಿಕೆಯಷ್ಟು ಜನ ಮಾತ್ರ. ಇದೀಗ 17 ವರ್ಷದ ಕುಸ್ತಿಪಟು ನಿಂಗಪ್ಪ ಗೆನೆಣ್ಣವರ ಕರ್ನಾಟಕದ ಕುಸ್ತಿ ಕೇಂದ್ರ ಮುಧೋಳದ ಹೆಸರನ್ನು ಇಡೀ ದೇಶಕ್ಕೆ ಪರಿಚಯಿಸಿದ್ದಾನೆ.
ಕಳೆದ ಗುರುವಾರ ನಿಂಗಪ್ಪ, ಕಿರ್ಗಿಸ್ತಾನದ ಬಿಷ್ಕೆಕ್ನಲ್ಲಿ ನಡೆದ ಅಂಡರ್ 17 ಕುಸ್ತಿ ಚಾಂಪಿಯನ್ಶಿಪ್ನಲ್ಲಿ ತನ್ನ ಬಲಿಷ್ಠ ಡಿಫೆನ್ಸ್ ಮತ್ತು ಅದ್ಭುತ ಲೆಗ್ ಅಟಾಕ್ಸ್ ಮೂಲಕ ಇರಾನ್ನ ಅಮಿರ್ ಮೊಹಮ್ಮದ್ ಸಲೆಯನ್ನು 45 ಕೆಜಿ ವಿಭಾಗದ ಫ್ರೀಸ್ಟೈಲ್ನಲ್ಲಿ ಬಗ್ಗುಬಡಿದು ಸ್ವರ್ಣ ಗೆದ್ದರು. ಇವರ ಪದಕದ ನೆರವಿನಿಂದ ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಚಾಂಪಿಯನ್ ಆಗಿ ದೇಶಕ್ಕೆ ಕೀರ್ತಿ ತಂದ ನಿಂಗಪ್ಪ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶಕ್ಕೆ ಸೀಮಿತವಾಗಿ ಉಳಿದಿರುವ ಕುಸ್ತಿಯನ್ನು ಕರ್ನಾಟಕದ ಕಡೆಗೆ ತಿರುಗಿಸಿದ್ದಾರೆ.
ಕುಸ್ತಿ ಕರ್ನಾಟಕ್ಕೆ ಹೊಸದೇನಲ್ಲ. ಉತ್ತರ ಕರ್ನಾಟಕದಲ್ಲಿ ಇಂದಿಗೂ ಕುಸ್ತಿ ಆಟ ಚಾಲ್ತಿಯಲ್ಲಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಕರ್ನಾಟಕದ ಕುಸ್ತಿ ಕೇಂದ್ರವಾಗಿದೆ. ರಾಜಾ ಮಾಲೋಜಿರಾವ್ ಘೋರ್ಪಡೆ ಕಾಲದಿಂದಲೂ ಮುಧೋಳ ಭಾಗದಲ್ಲಿ ಕುಸ್ತಿ ಪ್ರಸಿದ್ಧವಾಗಿದೆ. ಘೋರ್ಪಡೆ ಮಹಾರಾಜರು ತಮ್ಮ ಅವಧಿಯಲ್ಲಿ ಕುಸ್ತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿದ ಪರಿಣಾಮ ಮುಧೋಳ ಭಾಗದಲ್ಲಿ ಹೆಚ್ಚು ಕಡಿಮೆ ಮನೆ ಮನೆಗೊಬ್ಬ ಕುಸ್ತಿಪಟು ಹುಟ್ಟಿಕೊಂಡಿದ್ದಾರೆ. ಪ್ರಸ್ತುತ ಅಲ್ಲಿ ಕುಸ್ತಿ ಗರಡಿ ಮನೆ, ವ್ಯಾಯಾಮ ಶಾಲೆಗಳ ಮೂಲಕ ಕುಸ್ತಿ ತರಬೇತಿ ನೀಡಲಾಗುತ್ತಿದೆ.

ವಿದೇಶದಲ್ಲಿ ತೊಡೆ ತಟ್ಟಿ ತ್ರಿವರ್ಣ ಧ್ವಜ ಹಾರಿಸಿದ
ಸುನಿಲ್ ಪಡತಾರೆ, ಅನಿಲ್ ಘೋರ್ಪಡೆ ಅಂತಹ ಕುಸ್ತಿಪಟುಗಳು ಅಂತಾರಾಷ್ಟ್ರೀಯ, ರಾಷ್ಟ್ರಮಟ್ಟದಲ್ಲಿ ಮಿಂಚಿರುವುದೇ ಮುಧೋಳ ಕುಸ್ತಿ ಕ್ರೀಡೆಗೆ ಪ್ರಸಿದ್ಧಿ ಪಡೆದಿರುವುದಕ್ಕೆ ಸಾಕ್ಷಿಯಾಗಿದೆ. ಇದೀಗ ಮುಧೋಳ ನಗರದ ನಿಂಗಪ್ಪ ವಿದೇಶದಲ್ಲಿ ತೊಡೆ ತಟ್ಟಿ ತ್ರಿವರ್ಣ ಧ್ವಜ ಹಾರಿಸಿ ಬಂದಿದ್ದಾನೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಜೈ ಹನುಮಾನ್ ವ್ಯಾಯಾಮ ಶಾಲೆ ಕುಸ್ತಿ ವಿದ್ಯಾರ್ಥಿ ನಿಂಗಪ್ಪ.

ಜೈ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ಏಳು ವರ್ಷಗಳ ತರಬೇತಿ
ನಿಂಗಪ್ಪ ಗೆನೆಣ್ಣವರ ಕಡುಬಡತನದಲ್ಲಿ ಬೆಳೆದ ಕುಸ್ತಿಪಟು. ತಂದೆ-ತಾಯಿ ಈಗಲೂ ಬೇರೊಬ್ಬರ ಜಮೀನಿನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಹಳಿಂಗಳಿ ಗ್ರಾಮದವರಾದ ನಿಂಗಪ್ಪ ಅವರ ತಂದೆ-ತಾಯಿ ಅವರು ಹೊಟ್ಟೆಪಾಡಿಗಾಗಿ ಮುಧೋಳ ನಗರಕ್ಕೆ ಬಂದು ನೆಲೆಸಿದ್ದಾರೆ. ಬೇರೊಬ್ಬರ ಜಮೀನಿನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಮಗನ ಕುಸ್ತಿ ಮೇಲಿನ ಪ್ರೀತಿ ಕಂಡು ತಮ್ಮ ಕಷ್ಟವನ್ನು ಲೆಕ್ಕಿಸದೇ ಪ್ರೋತ್ಸಾಹ ನೀಡುತ್ತಿದ್ದಾರೆ. ನಿಂಗಪ್ಪ ಗೆನೆಣ್ಣವರ ಮುಧೋಳ ನಗರದ ಜೈ ಹನುಮಾನ್ ವ್ಯಾಯಾಮ ಶಾಲೆಯಲ್ಲಿ ಏಳು ವರ್ಷಗಳ ಕಾಲ ಕುಸ್ತಿ ತರಬೇತಿ ಪಡೆದಿದ್ದಾರೆ.

ರಾಜ್ಯಮಟ್ಟದ ಕುಸ್ತಿಯಲ್ಲಿ ಮೊದಲ ಸ್ಥಾನ
ಕುಸ್ತಿ ತರಬೇತಿದಾರ ಅರುಣ ಕುಮಕಾಲೆ ಅವರ ಬಳಿ ಕುಸ್ತಿ ಕಲಿತ ನಿಂಗಪ್ಪ, ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರು. ನಂತರ ರಾಜಸ್ಥಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದರು. ಇದರಿಂದ ಆತ ಹರಿಯಾಣಾದ ಇಂಡಿಯನ್ ಕ್ಯಾಂಪ್ಗೆ ಆಯ್ಕೆಯಾಗಿ ಅಲ್ಲೇ ಎರಡು ವರ್ಷದಿಂದ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ.
ಕಿರ್ಗಿಸ್ತಾನದಲ್ಲಿ ನಡೆದ ಅಂಡರ್ 17 ಏಷಿಯನ್ ಚಾಂಪಿಯನ್ಸ್ ಭಾರತದಿಂದ 35 ಕುಸ್ತಿಪಟುಗಳು ಆಯ್ಕೆಯಾಗಿದ್ದರು. ಆದರೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕುಸ್ತಿಪಟು ನಿಂಗಪ್ಪ ಮಾತ್ರ. ಕೊನೆಗೂ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶದ ಕ್ರೀಡಾಪ್ರೇಮಿಗಳಿಂದ ಮೆಚ್ಚುಗೆ ಪಡೆದಿದ್ದಾರೆ. ಜೊತೆಗೆ ಕರ್ನಾಟಕದ ಮುಧೋಳ ಪಟ್ಟಣದ ಹೆಸರನ್ನು ದೇಶಾದ್ಯಂತ ಕೇಳುವಂತೆ ಮಾಡಿದ್ದಾರೆ.

ಭಾರತ ತ್ರಿವರ್ಣ ಧ್ವಜವನ್ನು ಹಿಡಿದು ಮೈದಾನದಲ್ಲಿ ಓಡಾಡಿ ಸಂಭ್ರಮ
"ಏಷಿಯನ್ ಚಾಂಪಿಯನ್ಸ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದು ನನಗೆ ಬಹಳ ಖುಷಿ ತಂದಿದೆ. ಫೈನಲ್ನಲ್ಲಿ ಗೆದ್ದ ತಕ್ಷಣ ಭಾರತ ತ್ರಿವರ್ಣ ಧ್ವಜವನ್ನು ಹಿಡಿದು ಮೈದಾನದಲ್ಲಿ ಓಡಾಡಿ ಸಂಭ್ರಮಪಟ್ಟ ಸಂದರ್ಭವನ್ನು ನನ್ನ ಜೀವನದಲ್ಲಿ ಎಂದೂ ಮರೆಯುವುದಕ್ಕೆ ಆಗುವುದಿಲ್ಲ. ನನ್ನ ಈ ಗೆಲುವಿಗೆ ಜೈ ಹನುಮಾನ್ ವ್ಯಾಯಾಮ ಶಾಲೆಯ ಕೋಚ್ ಅರುಣ ಕುಮಕಾಲೆ, ಹರಿಯಾಣಾದ ಇಂಡಿಯನ್ ಕ್ಯಾಂಪ್ನ ತರಬೇತುದಾರರು, ನಮ್ಮ ತಂದೆತಾಯಿ, ಸ್ನೇಹಿತರು, ನಾನು ಓದುತ್ತಿರುವ ಆರ್ಎಂಜೆ ಶಾಲೆ ಸಿಬ್ಬಂದಿಯ ಪ್ರೋತ್ಸಾಹ ಕಾರಣ," ಎಂದು ಗೆಲುವಿನ ಶ್ರೇಯವನ್ನು ನಿಂಗಪ್ಪ ಅರ್ಪಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications