'ವಿಶ್ವ'ಗೆದ್ದ ದಿನಕ್ಕೆ ದಶಕದ ಸಂಭ್ರಮ, 28 ವರ್ಷಗಳ ಸುದೀರ್ಘ ಕನಸು ನನಸಾದ ದಿನ!

ಇಂದಿಗೆ ಭರ್ತಿ ಹತ್ತು ವರ್ಷವಾಯಿತು. ಭಾರತ ಕ್ರಿಕೆಟ್ ಪ್ರೇಮಿಗಳು ಕಂಡ ಸುದೀರ್ಘ ಕಾಲದ ಕನಸೊಂದು ಅಂದು ನಿಜವಾಗಿತ್ತು. ವಿಶ್ವ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತು. ಈ ಮೂಲಕ ವಿಶ್ವ ಕ್ರಿಕೆಟ್ನಲ್ಲಿ ಭಾರತ ಬಹುದೊಡ್ಡ ಸಾಧನೆಯನ್ನು ಮಾಡಿ ಬೀಗಿತ್ತು
ಹೌದು, 2011ರ ಇದೇ ದಿ ಟೀಮ್ ಇಂಡಿಯಾ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ವಿಶ್ವಚಾಂಪಿಯನ್ ಪಟ್ಟಕ್ಕೇರಿತು. ಧೋನಿ ನಾಯಕತ್ವದ ಟೀಮ್ ಇಂಡಿಯಾ ಮುಂಬೈನ ವಾಂಖೆಡೆ ಮೈದಾನದಲ್ಲಿ ಸಾಧಿಸಿದ ದಿಗ್ವಿಜಯ ಭಾರತದ ಗಲ್ಲಿ ಗಲ್ಲಿಯಲ್ಲೂ ಸಂಭ್ರಮಕ್ಕೆ ಕಾರಣವಾಗಿತ್ತು. ವಿಶ್ವಗೆದ್ದ ದಿನದಿನದ ಮೆಲುಕು ನಿಮಗಾಗಿ..

ವಿಶ್ವಕಪ್ ಗೆಲ್ಲುವ ಫೇವರೀಟ್ ತಂಡ ಭಾರತ
ಟೀಮ್ ಇಂಡಿಯಾ 2011ರ ವಿಶ್ವಕಪ್ ಗೆಲ್ಲುವ ಫೇವರೀಟ್ ತಂಡವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಧೋನಿ ನಾಯಕತ್ವದಲ್ಲಿ ಭಾರತ ತಂಡ ಸರಣಿಗೂ ಮುನ್ನ ಅದ್ಭುತ ಫಾರ್ಮ್ನಲ್ಲಿತ್ತು. ಇದು ವಿಶ್ವಕಪ್ ಗೆಲ್ಲುವ ಭರವಸೆಯನ್ನು ಹುಟ್ಟಿಸಿತ್ತು.

ಕಠಿಣ ಸವಾಲು ಮೀರಿ ನಿಂತ ಭಾರತ
ಟೀಮ್ ಇಂಡಿಯಾಗೆ ವಿಶ್ವಕಪ್ಲ್ಲಿ ಕಠಿನ ಸವಾಲು ಎದುರಾಗಿತ್ತು. ಲೀಗ್ ಹಂತವನ್ನು ಸುಲಭವಾಗಿ ಮೀರಿ ಬಂದ ಭಾರತ ತಂಡಕ್ಕೆ ನಾಕೌಟ್ ಹಂತದಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡ ಎದುರಾಗಿತ್ತು. ಸತತ ವಿಶ್ವಕಪ್ ಗೆಲುವಿನ ರುಚಿಕಂಡಿದ್ದ ಆಸ್ಟ್ರೇಲಿಯಾ ತಂಡ ಈ ಭಾರಿ ಭಾರತವನ್ನು ಕಟ್ಟಿಹಾಕಲು ವಿಫಲವಾಯಿತು. ಆಸ್ಟ್ರೇಲಿಯಾ ವಿರುದ್ಧ ಭಾರತ 5 ವಿಕೆಟ್ಗಳ ಜಯವನ್ನು ಸಾಧಿಸಿತು. ಈ ಮೂಲಕ ವಿಶ್ವಕಪ್ನ ಸೆಮಿಫೈನಲ್ ಹಂತಕ್ಕೆ ಟಿಕೆಟ್ ಪಡೆದುಕೊಂಡಿತು.

ಸೆಮಿಫೈನಲ್ನಲ್ಲಿ ಎದುರಾಗಿದ್ದು ಬದ್ಧ ಎದುರಾಳಿ
ಟೀಮ್ ಇಂಡಿಯಾಗೆ ಸೆಮಿಫೈನಲ್ ಹಂತದಲ್ಲಿ ಎದುರಾಗಿದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ. ವಿಶ್ವಕಪ್ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ ಸಾಧನೆ ಮಾಡಿದ ಭಾರತ ತಂಡಕ್ಕೆ ಈ ಬಾರಿಯೂ ಪಾಕಿಸ್ತಾನವನ್ನು ಮಣಿಸುವ ಹುಮ್ಮಸ್ಸಿತ್ತು. ಅಂತೆಯೇ ಸೆಮಿಫೈನಲ್ನಲ್ಲಿ ಪಾಕಿಸ್ತಾನ ಭಾರತ ತಂಡದ ಎದುರು 29 ರನ್ಗಳ ಅಂತರದಿಂದ ಶರಣಾಯಿತು. ಈ ಮೂಲಕ ಭಾರತ ವಿಶ್ವಕಪ್ ಫೈನಲ್ಗೆ ಪ್ರವೇಶ ಪಡೆದುಕೊಂಡಿತು.

ಫೈನಲ್ನಲ್ಲಿ ಶ್ರೀಲಂಕಾ ಎದುರಾಳಿ
ಟೀಮ್ ಇಂಡಿಯಾಗೆ ಫೈನಲ್ನಲ್ಲಿ ಎದುರಾಗಿದ್ದು ಶ್ರೀಲಂಕಾ ತಂಡ. ಲಂಕಾ ತಂಡ ನಾಕೌಟ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ಮತ್ತು ಸೆಮಿ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿ ಫೈನಲ್ಗೆ ಪ್ರವೆಶವನ್ನು ಪಡೆದುಕೊಂಡಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಸವಾಲಿನ ಮೊತ್ತ
ಫೈನಲ್ನಲ್ಲಿ ಶ್ರೀಲಂಕಾ ಮೊದಲಿಗೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿತ್ತು. ಫೈನಲ್ನಲ್ಲಿ ಶ್ರೀಲಂಕಾ ತಂಡ ಟೀಮ್ ಇಂಡಿಯಾಗೆ ಸವಾಲಿನ ಗುರಿಯನ್ನು ನೀಡಿತ್ತು. 50 ಓವರ್ಗಳಲ್ಲಿ ಲಂಕನ್ನರು ಭಾರತಕ್ಕೆ 275 ರನ್ಗಳ ಸವಾಲಿನ ಮೊತ್ತವನ್ನು ಗುರಿಯಾಗಿ ನೀಡಿತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಮಹೇಲ ಜಯವರ್ಧನೆ ಭರ್ಜರಿ ಶತಕವನ್ನು ದಾಖಲಿಸಿ ಮಿಂಚಿದರು.

ಸೆಹ್ವಾಗ್ ವಿಫಲ, ಗಂಭೀರ್ ಬೆಂಬಲ
ಶ್ರೀಲಂಕಾ ನೀಡಿದ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಭಾರತ ತಂಡದ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ತಮ್ಮ ವಿಕೆಟ್ ಕಳೆದುಕೊಂಡರು. ಆದರೆ ಮತ್ತೊಂದು ತುದಿಯಲ್ಲಿದ್ದ ಗೌತಮ್ ಗಂಭೀರ್ ಅತ್ಯುತ್ತಮ ಪ್ರದರ್ಶನವನ್ನು ನೀಡಿದರು. ಶತಕದಂಚಿನಲ್ಲಿ ಎಡವಿದ ಗಂಭೀರ್ 97ರನ್ಗೆ ಔಟಾದರು.

ನಾಯಕನ ಆಟವಾಡಿದ ಧೋನಿ
ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲು ಗಂಭೀರ್ ಮತ್ತು ಧೋನಿ ಪ್ರದರ್ಶನ ಪ್ರಮುಖವಾಗಿತ್ತು. ಫೈನಲ್ನಲ್ಲಿ ಧೋನಿ ಅಜೇಯ 91 ರನ್ಗಳನ್ನು ದಾಖಲಿಸಿದರು. ಗೆಲ್ಲಲು ನಾಲ್ಕು ರನ್ಗಳ ಅವಶ್ಯಕತೆಯಿದ್ದಾಗ ಧೋನಿ ಭರ್ಜರಿ ಸಿಕ್ಸರ್ ಸಿಡಿಸಿ ಟೀಮ್ ಇಂಡಿಯಾದ ವಿಶ್ವಕಪ್ ಮುಡಿಗೇರಿಸಿಕೊಳ್ಳುವಂತೆ ಮಾಡಿದರು. ಇನ್ನೂ 8 ಎಸೆತ ಇರುವಂತೆಯೇ ಭಾರತ ಗೆದ್ದುಬೀಗಿತ್ತು.

ಧೋನಿ ಪಂದ್ಯಶ್ರೇಷ್ಠ, ಯುವಿ ಸರಣಿ ಶ್ರೇಷ್ಠ
ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ ನಾಯಕ ಧೋನಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಮತ್ತೊಂದೆಡೆ ಸರಣಿಯುದ್ದಕ್ಕೂ ಆಲ್ರೌಂಡರ್ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯುವರಾಜ್ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications