
ಕಳೆದೊಂದು ತಿಂಗಳಿನಿಂದ ಯುಎಇಯಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನವೆಂಬರ್ 14ರಂದು ನಡೆದ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಂಡಿದೆ. ಈ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಟವನ್ನು ನಡೆಸಿದವು. ಆರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಆರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರೆ, ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ರನ್ನರ್ ಅಪ್ ಆಗಿ ತೃಪ್ತಿಪಟ್ಟಿಕೊಂಡಿತು. ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿನ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು ಸೋಲಿಲ್ಲದ ಸರದಾರನಂತೆ ಸೆಮಿಫೈನಲ್ ಪ್ರವೇಶಿಸಿದ್ದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ಸೆಮಿಫೈನಲ್ ಹಂತದಲ್ಲಿ ಆಸ್ಟ್ರೇಲಿಯಾದ ವಿರುದ್ಧ ರೋಚಕ ಪಂದ್ಯದಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿತ್ತು. ಹೀಗೆ ಟೂರ್ನಿಯ ಲೀಗ್ ಹಂತದಲ್ಲಿನ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಪಾಕಿಸ್ತಾನ ಸೆಮಿಫೈನಲ್ ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದರೆ, ಲೀಗ್ ಹಂತದಲ್ಲಿನ ತನ್ನ ಎಲ್ಲಾ ಪಂದ್ಯಗಳನ್ನು ಸೋತು ಮುಖಭಂಗ ಅನುಭವಿಸಿದ್ದ ಬಾಂಗ್ಲಾ ದೇಶ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿತ್ತು.
ಹೀಗೆ ಸೆಮಿಫೈನಲ್ ಹಂತದಲ್ಲಿ ಸೋಲುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ಪಾಕಿಸ್ತಾನ ತಂಡ ಇದೀಗ ಬಾಂಗ್ಲಾದೇಶ ಪ್ರವಾಸವನ್ನು ಕೈಗೊಂಡಿದ್ದು 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯನ್ನಾಡಲು ಮೀರ್ ಪುರ್ ನಗರದಲ್ಲಿರುವ ಶೇರ್ ಎ ಬಾಂಗ್ಲಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡದ ಆಟಗಾರರು ನವೆಂಬರ್ 15ರಂದು ಅಭ್ಯಾಸ ನಡೆಸಿದ್ದರು. ಹೀಗೆ ಪಾಕಿಸ್ತಾನ ಅಭ್ಯಾಸ ನಡೆಸುವ ವೇಳೆ ತನ್ನ ದೇಶದ ಬಾವುಟವನ್ನು ಕ್ರೀಡಾಂಗಣದಲ್ಲಿ ನೆಟ್ಟು ತಾಲೀಮು ನಡೆಸಿದೆ. ಇದನ್ನು ಕಂಡ ಬಾಂಗ್ಲಾ ಜನತೆ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡದ ಅಭಿಮಾನಿಗಳು ಪಾಕಿಸ್ತಾನ ಆಟಗಾರರ ನಡೆಯ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡುವುದರ ಮೂಲಕ ಬಾಂಗ್ಲಾದೇಶ ಕ್ರಿಕೆಟ್ ತಂಡದ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದುವರೆಗೂ ಬಾಂಗ್ಲಾದೇಶಕ್ಕೆ ಕ್ರಿಕೆಟ್ ಆಡಲು ವಿವಿಧ ದೇಶಗಳ ತಂಡಗಳು ಹಲವಾರು ಬಾರಿ ಬಂದು ಹೋಗಿವೆ, ಆದರೆ ಯಾವುದೇ ತಂಡದ ಆಟಗಾರರು ಕೂಡ ತಮ್ಮ ದೇಶದ ಬಾವುಟವನ್ನು ತಂದು ಕ್ರೀಡಾಂಗಣದಲ್ಲಿ ನೆಟ್ಟಿರಲಿಲ್ಲ ಎಂದು ನೆಟ್ಟಿಗನೋರ್ವ ಪಾಕಿಸ್ತಾನ ತಂಡದ ಆಟಗಾರರ ನಡೆಯ ವಿರುದ್ಧ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾನೆ.
ಅಷ್ಟೇ ಅಲ್ಲದೆ ಬಾಂಗ್ಲಾದೇಶದ ಮಂತ್ರಿ ಮುರಾದ್ ಹಸನ್ ಎಂಬುವವರು ಪಾಕಿಸ್ತಾನ ತಂಡದ ಆಟಗಾರರ ಈ ನಡೆಯ ವಿರುದ್ಧ ಕಿಡಿಕಾರಿದ್ದು ಪಾಕಿಸ್ತಾನ ತಂಡದ ಆಟಗಾರರು ಕ್ರೀಡಾಂಗಣದಲ್ಲಿ ತಮ್ಮ ದೇಶದ ಬಾವುಟವನ್ನು ನೆಟ್ಟು ಅಭ್ಯಾಸ ನಡೆಸಿರುವುದಕ್ಕೆ ನನ್ನ ವಿರೋಧವಿದೆ. ಅದರಲ್ಲಿಯೂ ಬಾಂಗ್ಲಾದೇಶದಲ್ಲಿ ಬಾಂಗ್ಲಾದೇಶದ ರಾಷ್ಟ್ರಪಿತ ಶೇಖ್ ಮುಜಿಬುರ್ ರಹಮಾನ್ ಅವರ ಜಯಂತಿ ಆಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ಆಟಗಾರರು ತಮ್ಮ ದೇಶದ ಬಾವುಟವನ್ನು ಬಾಂಗ್ಲಾ ನೆಲದಲ್ಲಿ ಹಾರಿಸಿದ್ದು ತಪ್ಪು. ಹೀಗಾಗಿ ಕೂಡಲೇ ಪಾಕಿಸ್ತಾನ ತಂಡದ ಆಟಗಾರರು ತಮ್ಮ ದೇಶಕ್ಕೆ ಹಿಂತಿರುಗಬೇಕೆಂದು ಮುರಾದ್ ಹಸನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.