ತಂಡಕ್ಕೆ ಬೇಕಾದ ಆಟಗಾರರು ಆಯ್ಕೆಗೆ ಲಭ್ಯವಿರಲಿಲ್ಲ ಎಂದ ರಾಹುಲ್ ದ್ರಾವಿಡ್
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡದೇ ಇರುವುದರ ಕುರಿತು ಮಾತನಾಡಿರುವ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಸಮತೋಲನವಾಗಿರಲಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ತಂಡದ ಆಯ್ಕೆ ನಡೆಯುವಾಗ ಆರನೇ, ಏಳನೇ ಹಾಗೂ ಎಂಟನೇ ಕ್ರಮಾಂಕದಲ್ಲಿ ಕಣಕ್ಕಿಳಿದು ತಂಡದಲ್ಲಿ ಸಮತೋಲನ ಉಂಟು ಮಾಡಬಲ್ಲಂತಹ ಆಲ್ ರೌಂಡರ್ ಆಟಗಾರರು ಲಭ್ಯವಿರಲಿಲ್ಲ ಹೀಗಾಗಿ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಆ ಆಟಗಾರರು ಮತ್ತೆ ತಂಡ ಸೇರಿದರೆ ತಂಡ ಸಮತೋಲನವಾಗಲಿದೆ
ರಾಹುಲ್ ದ್ರಾವಿಡ್ ಅವರು ಹೇಳಿದ ಪ್ರಕಾರ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿದ್ದ ಆಟಗಾರರೆಂದರೆ ಅದು ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ. ಹೌದು, ಈ ಇಬ್ಬರೂ ಸಹ ಗಾಯದ ಸಮಸ್ಯೆಗೊಳಗಾಗಿರುವ ಕಾರಣ ತಂಡದ ಆಯ್ಕೆಗೆ ಲಭ್ಯವಿರಲಿಲ್ಲ, ಈ ಇಬ್ಬರ ಕುರಿತಾಗಿಯೇ ರಾಹುಲ್ ದ್ರಾವಿಡ್ ಹೇಳಿಕೆಯನ್ನು ನೀಡಿದ್ದಾರೆ. ಹಾಗೂ ಇನ್ನೂ ಮುಂದುವರಿದು ಮಾತನಾಡಿದ ಅವರು ಈ ಆಟಗಾರರು ಮತ್ತೆ ತಂಡವನ್ನು ಸೇರಿಕೊಂಡರೆ ತಂಡ ಸಮತೋಲನವಾಗಿರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮಧ್ಯಮ ಓವರ್ಗಳಲ್ಲಿ ಬ್ಯಾಟಿಂಗ್ ಸುಧಾರಿಸಿಕೊಳ್ಳಬೇಕು ಎಂದ ದ್ರಾವಿಡ್
ಇನ್ನು ತಂಡದಲ್ಲಿ ಆಗಬೇಕಿರುವ ಮತ್ತೊಂದು ಬದಲಾವಣೆ ಕುರಿತು ಮಾತನಾಡಿದ ರಾಹುಲ್ ದ್ರಾವಿಡ್ ಪಂದ್ಯದ ಮಧ್ಯಮ ಓವರ್ಗಳಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಸುಧಾರಿಸಿಕೊಳ್ಳಬೇಕು ಎಂದಿದ್ದಾರೆ. ಮಧ್ಯಮ ಓವರ್ಗಳಲ್ಲಿ ಉತ್ತಮ ಹೊಡೆತಗಳನ್ನು ಬಾರಿಸಿ ರನ್ ಗಳಿಸಿದ್ದರೆ ದಕ್ಷಿಣ ಆಫ್ರಿಕಾ ನೀಡಿದ್ದ ಗುರಿಯನ್ನು ಮುಟ್ಟಬಹುದಿತ್ತು ಆದರೆ ನಿರ್ಣಾಯಕ ಹಂತಗಳಲ್ಲಿ ಬ್ಯಾಟಿಂಗ್ ವಿಫಲತೆ ಕಂಡ ಕಾರಣ ಗೆಲ್ಲಲಾಗಲಿಲ್ಲ ಎಂದು ದ್ರಾವಿಡ್ ತಿಳಿಸಿದ್ದಾರೆ.