Rahul Dravid son Anvay Dravid : ಕರ್ನಾಟಕ U-14 ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಕಿರಿಯ ಪುತ್ರ ನಾಯಕನಾಗಿ ನೇಮಕ

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಭಾರತ ತಂಡದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕೂಡ ತಮ್ಮ ತಂದೆಯ ಹಾದಿಯನ್ನು ಅನುಸರಿಸುತ್ತಿದ್ದಾರೆ. ವಲಯ ಪಂದ್ಯಾವಳಿಯಲ್ಲಿ ಕರ್ನಾಟಕ ಅಂಡರ್-14 ತಂಡದ ನಾಯಕರಾಗಿ ಆಯ್ಕೆಯಾಗಿದ್ದು ವಿಶೇಷವಾಗಿದೆ.
ಅನ್ವಯ್ ದ್ರಾವಿಡ್ ತಮ್ಮ ವಯಸ್ಸಿಗೆ ತಕ್ಕಂತೆ ಉತ್ತಮ ಬ್ಯಾಟ್ಸ್ಮನ್ ಆಗಿದ್ದಾರೆ ಮತ್ತು ಕಠಿಣ ಪರಿಶ್ರಮದ ಬ್ಯಾಟಿಂಗ್ ಪ್ರದರ್ಶನದಿಂದ ನಾಯಕತ್ವದ ಜವಾಬ್ದಾರಿ ಪಡೆದಿದ್ದಾರೆ. ಇದೀಗ ಅನ್ವಯ್ ಕರ್ನಾಟಕ ತಂಡದ ಜೂನಿಯರ್ ಕ್ರಿಕೆಟ್ ಆಡುತ್ತಿದ್ದಾರೆ. ಮುಂದೆ ಕರ್ನಾಟಕ ಹಿರಿಯರ ತಂಡ ಹಾಗೂ ಭಾರತ ತಂಡವನ್ನು ಪ್ರತಿನಿಧಿಸಲು ತಮ್ಮ ಸಾಮರ್ಥ್ಯ ತೋರ್ಪಡಿಸಬೇಕಿದೆ.
ಕುತೂಹಲಕಾರಿ ಸಂಗತಿಯೆಂದರೆ, ತಂದೆ ರಾಹುಲ್ ದ್ರಾವಿಡ್ ಅವರಂತೆಯೇ ಅನ್ವಯ್ ಕೂಡ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ಆಗಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್ ಕ್ರಿಕೆಟ್ ಆಡುತ್ತಿದ್ದಾಗ ಒಂದು ನಿರ್ದಿಷ್ಟ ಅವಧಿಯವರೆಗೆ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪೂರ್ಣ ಸಮಯದ ವಿಕೆಟ್ಕೀಪರ್ ಆಗಿದ್ದರು.

ಸಮಿತ್ ದ್ರಾವಿಡ್ ಕೂಡ ಉತ್ತಮ ಕ್ರಿಕೆಟಿಗ
ಗುಣಮಟ್ಟದ ವಿಕೆಟ್ ಕೀಪರ್ನನ್ನು ಹುಡುಕಲು ಭಾರತ ತಂಡ ಹೆಣಗಾಡುತ್ತಿರುವಾಗ ರಾಹುಲ್ ದ್ರಾವಿಡ್ ಕೀಪಿಂಗ್ ಗ್ಲೌಸ್ ತೊಟ್ಟಿದ್ದರು. ನಂತರ ಎಂಎಸ್ ಧೋನಿ ಭಾರತ ತಂಡಕ್ಕೆ ಆಯ್ಕೆಯಾದ ನಂತರ ರಾಹುಲ್ ದ್ರಾವಿಡ್ ಪ್ರಮುಖ ಬ್ಯಾಟ್ಸ್ಮನ್ ಆಗಿ ಮಾತ್ರ ಆಡುತ್ತಿದ್ದರು.
ಕ್ರಿಕೆಟ್ನಲ್ಲಿ ಅನ್ವಯ್ ಮಾತ್ರ ಹೆಸರು ಮಾಡುತ್ತಿಲ್ಲ. ಹಿರಿಯ ಸಹೋದರ ಸಮಿತ್ ದ್ರಾವಿಡ್ ಕೂಡ ಉತ್ತಮ ಕ್ರಿಕೆಟಿಗನಾಗಿದ್ದಾರೆ. ಇತ್ತೀಚೆಗೆ ಸಮಿತ್ ದ್ರಾವಿಡ್ 2019/20 ಋತುವಿನಲ್ಲಿ ಅಂಡರ್-14 ಮಟ್ಟದಲ್ಲಿ ಎರಡು ದ್ವಿಶತಕ ಬಾರಿಸಿ ಹೆಸರು ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಜಯದ ಉತ್ಸಾಹದಲ್ಲಿ ದ್ರಾವಿಡ್ ಪಡೆ
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಸದ್ಯ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆಡುತ್ತಿದ್ದು, ಈಗಾಗಲೇ ಮೊದಲ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಶುಭ್ಮನ್ ಗಿಲ್ ಅವರ ಅಮೋಘ ದ್ವಿಶತಕ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಉತ್ತಮ ಬೌಲಿಂಗ್ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ ತಂಡ 12 ರನ್ಗಳಿಂದ ರೋಚಕವಾಗಿ ಗೆದ್ದಿತು.

ನ್ಯೂಜಿಲೆಂಡ್ ಪರ ಮೈಕೆಲ್ ಬ್ರೇಸ್ವೆಲ್ ಶತಕ
ಭಾರತ ನೀಡಿದ್ದ 350 ರನ್ಗಳ ಚೇಸಿಂಗ್ನಲ್ಲಿ ನ್ಯೂಜಿಲೆಂಡ್ ಪರ ಮೈಕೆಲ್ ಬ್ರೇಸ್ವೆಲ್ ಶತಕ ಬಾರಿಸುವ ಮೂಲಕ ಪಂದ್ಯವನ್ನು ಗೆಲುವಿನ ಗಡಿ ಸಮೀಪ ಕೊಂಡೊಯ್ದಿದ್ದರು. ಆದರೆ ಕೊನೆಯ ಹಂತದಲ್ಲಿ ವಿಕೆಟ್ ಕಳೆದುಕೊಂಡಿದ್ದರಿಂದ ನ್ಯೂಜಿಲೆಂಡ್ ಪಂದ್ಯವನ್ನು ಸೋತಿತು.
ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯವನ್ನು ಶನಿವಾರ, ಜನವರಿ 21ರಂದು ರಾಯ್ಪುರದಲ್ಲಿ ಸೆಣಸಲಿದೆ. ಮೊದಲ ಪಂದ್ಯದಲ್ಲಿ 300ಕ್ಕಿಂತ ಅಧಿಕ ರನ್ ಗಳಿಸಿದ ಹೊರತಾಗಿಯೂ ಭಾರತ ತಂಡ ತಿಣುಕಾಡಿ ಗೆದ್ದಿತು. ಹೀಗಾಗಿ ಎದುರಾಳಿ ಟಾಮ್ ನಾಯಕತ್ವದ ಕಿವೀಸ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಎರಡನೇ ಪಂದ್ಯವನ್ನು ಗೆದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications