ಏಕದಿನ ವಿಶ್ವಕಪ್ಗೆ ಮರಳುವ ಸಾಧ್ಯತೆ
ಮುಂಬೈನಲ್ಲಿ ಡಾ. ಪಾರ್ದಿವಾಲ ನೇತೃತ್ವದಲ್ಲಿ ಪಂತ್ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಕೆಲವು ವರದಿಗಳು ಹೇಳಿವೆ. ಆದರೆ, ಅಕ್ಟೋಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲಿದ್ದು, ಆ ವೇಳೆಗೆ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ ಬಿಸಿಸಿಐ.
"ರಿಷಬ್ ಪಂತ್ಗೆ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿದ ನಂತರ, ಅವರನ್ನು ಹೆಚ್ಚಿನ ಶಸ್ತ್ರಚಿಕಿತ್ಸೆಗಾಗಿ ಲಂಡನ್ಗೆ ಕಳುಹಿಸಲಾಗುತ್ತದೆ. ಆತ ಚೇತರಿಸಿಕೊಳ್ಳಲು ಇನ್ನೂ ಎಷ್ಟು ಸಮಯ ಬೇಕು ಎಂದು ತಿಳಿದಿಲ್ಲ. ಮೊಣಕಾಲು ಮತ್ತು ಪಾದದ ಊತ ಕಡಿಮೆಯಾದ ನಂತರ ಡಾ. ಪಾರ್ದಿವಾಲಾ ಮತ್ತು ತಂಡ ಚಿಕಿತ್ಸೆಯ ಬಗ್ಗೆ ನಿರ್ಧಾರ ಮಾಡುತ್ತದೆ. ಸದ್ಯದ ಮಾಹಿತಿ ಪ್ರಕಾರ, ಆತನ ಮೊಣಕಾಲು ಮತ್ತು ಪಾದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಕನಿಷ್ಠ 9 ತಿಂಗಳು ಆತ ಕ್ರಿಕೆಟ್ ಆಡುವುದಿಲ್ಲ" ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಭಾರತ, ಪಾಕಿಸ್ತಾನ ಇವೆರಡೂ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳು ಅಲ್ಲ: ಸಂಗಕ್ಕರ ನೀಡಿದ ಸುಳಿವೇನು?
ಶಸ್ತ್ರಚಿಕಿತ್ಸೆ ನಂತರ ದೀರ್ಘಾವಧಿ ವಿಶ್ರಾಂತಿ ಅಗತ್ಯ
ಅಸ್ಥಿರಜ್ಜು ಗಾಯದ ಪ್ರಮಾಣ ಇನ್ನೂ ಸ್ಪಷ್ಟವಾಗಿಲ್ಲ. ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಮೆದುಳು ಮತ್ತು ಬೆನ್ನುಹುರಿ ಎಂಆರ್ಐ ಮಾಡಲಾಗಿತ್ತು. ಆದರೆ ಮೊಣಕಾಲು ಮತ್ತು ಪಾದದ ಊತ ಮತ್ತು ನೋವಿನಿಂದ ಎಂಆರ್ಐ ಮಾಡಲು ಸಾಧ್ಯವಾಗಿಲ್ಲ. ಊತ ಕಡಿಮೆಯಾದಾಗ ಮಾತ್ರ ಗಾಯದ ತೀವ್ರತೆ ತಿಳಿಯಲಿದೆ. ಪ್ರಾಥಮಿಕ ಪರೀಕ್ಷೆಗಳ ವರದಿಗಳ ಪ್ರಕಾರ ಪಂತ್ರ ಪಾದ ಮತ್ತು ಮೊಣಕಾಲು ಎರಡಕ್ಕೂ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಮೊಣಕಾಲಿನ ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಸಾಮಾನ್ಯವಾಗಿ 6 ತಿಂಗಳು ಬೇಕಾಗುತ್ತದೆ. ಪಂತ್ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ವೈದ್ಯರು ಗಾಯದ ಪ್ರಮಾಣ ನಿರ್ಧರಿಸಿದ ನಂತರ ಅವರು ಎಷ್ಟು ದಿನದಲ್ಲಿ ಸುಧಾರಿಸಿಕೊಳ್ಳುತ್ತಾರೆ ಎಂದು ತಿಳಿಯಲಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಅವರು 2023ರ ಏಷ್ಯಾಕಪ್ ವೇಳೆಗೆ ಫಿಟ್ ಆಗಲಿದ್ದಾರೆ.
ಪಂತ್ ಆರೋಗ್ಯದ ಬಗ್ಗೆ ಬಿಸಿಸಿಐ ಕಾಳಜಿ
"ರಿಷಬ್ ಪಂತ್ ಮತ್ತೆ ಯಾವಾಗ ಕ್ರಿಕೆಟ್ಗೆ ಮರಳಲಿದ್ದಾರೆ ಎಂದು ಯೋಚಿಸುವುದಿಲ್ಲ. ಆತ ಮೊದಲು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ. ನಂತರ ಪುನರ್ವಸತಿಗಾಗಿ ಹಿಂದಿರುಗುತ್ತಾರೆ. ಇದು ಸುದೀರ್ಘ ಪ್ರಕ್ರಿಯೆ. ಆತ ಸಂಪೂರ್ಣ ಫಿಟ್ ಆದ ನಂತರ ಕ್ರಿಕೆಟ್ಗೆ ಮರಳುವ ಬಗ್ಗೆ ಚಿಂತಿಸುತ್ತೇವೆ. ಪಂತ್ಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ಬಿಸಿಸಿಐ ನೀಡಲಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಿಷಬ್ ಪಂತ್ ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿ, ಇಂಡಿಯನ್ ಪ್ರೀಮಿಯರ್ ಲೀಗ್, ಜುಲೈನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಕಳೆದುಕೊಳ್ಳುವುದು ಖಚಿತವಾಗಿದೆ.