
ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ನಡೆಸುವ ಸಲುವಾಗಿ ಪಾಕಿಸ್ತಾನ ಮತ್ತು ಭಾರತ ಒಟ್ಟಾಗಿ ಹೋರಾಟವನ್ನು ನಡೆಸಬೇಕು ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಹಣ ಸಂಗ್ರಹಣೆಗಾಗಿ ಭಾರತ ಪಾಕಿಸ್ತಾನದ ಸರಣಿಯ ಆಯೋಜಿಸುವ ಸಲಹೆಯನ್ನು ಅಖ್ತರ್ ಸೂಚಿಸಿದ್ದರು. ಈ ಸಲಹೆಯನ್ನು ಭಾರತದ ಮಾಜಿ ನಾಯಕ ಕಪಿಲ್ ದೇವ್ ನೇರವಾಗಿ ತಿರಸ್ಕರಿಸಿದ್ದರು.
ಕಪಿಲ್ ದೇವ್ ಅವರ ಪ್ರತಿಕ್ರಿಯೆಯ ಬಳಿಕ ಇದೇ ವಿಚಾರವಾಗಿ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿಕೆಯನ್ನು ನೀಡಿದ್ದಾರೆ. ತನ್ನ ವಿಚಾರವೇನು ಅನ್ನುವುದನ್ನು ಕಪಿಲ್ ಭಾಯ್ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಅಖ್ತರ್ ಎಂದಿದ್ದಾರೆ.
ಕ್ರಿಕೆಟ್ ಸರಣಿಯ ಮೂಲಕ ಹಣ ಸಂಗ್ರಹ ಮಾಡಬಹುದು ಎಂಬ ಸಲಹೆಯನ್ನು ಅಖ್ತರ್ ನೀಡಿದ್ದಕ್ಕೆ ಕಪಿಲ್ ದೇವ್, ಭಾರತಕ್ಕೆ ಕ್ರಿಕೆಟ್ ಮೂಲಕ ಹಣ ಸಂಗ್ರಹಿಸುವ ಅಗತ್ಯವಿಲ್ಲ. ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಾಕಾಗುವಷ್ಟು ಆರ್ಥಿಕವಾಗಿ ಭಾರತ ಬಲಿಷ್ಠವಾಗಿದೆ ಎಂದಿದ್ದರು.
ಇದಕ್ಕೆ ಶೋಯೆ್ ಅಖ್ತರ್ ಭಾರತದಿಂದ ತನಗೆ ಸಾಕಷ್ಟು ಪ್ರೀತಿ ದೊರೆತಿದೆ ಮತ್ತು ಉಭಯ ದೇಶಗಳ ನಡುವೆ ಉತ್ತಮ ಸಂಬಂಧವನ್ನು ಬಯಸುತ್ತೇನೆ, ಎಲ್ಲರೂ ಕೈಜೋಡಿಸಬೇಕಾದ ಸಮಯ ಇದು ಎಂದು ಅಖ್ತರ್ ಹೇಳಿದ್ದಾರೆ. "ಪಾಕಿಸ್ತಾನದ ನಂತರ, ನಾನು ಭಾರತದಿಂದ ಗರಿಷ್ಠ ಪ್ರೀತಿಯನ್ನು ಪಡೆದುಕೊಂಡಿದ್ದೇನೆ. ಭಾರತದ ಜನರಿಂದ ನಾನು ಪಡೆದ ಪ್ರೀತಿಗಾಗಿ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ. ನಾನು ಭಾರತದಾದ್ಯಂತ ಪ್ರವಾಸ ಮಾಡಿದ್ದೇನೆ. ಹಿಮಾಚಲ ಪ್ರದೇಶದಿಂದ ಕೇರಳದವರೆಗೂ ಸಂಚರಿಸಿರುವುದಾಗಿ ಅಖ್ತರ್ ಹೇಳಿದ್ದಾರೆ.
ನಿಧಿ ಸಂಗ್ರಹಣೆಯ ಜೊತೆಗೆ ತಾನು ಈ ವಿಚಾರವನ್ನು ವಿಶಾಲ ದೃಷ್ಟಿಕೋನದಿಂದ ಹೇಳುತ್ತಿದ್ದೇನೆ, ಕ್ರಿಕೆಟ್ನ ಮೇಲೆಯೆ ಜೀವನವನ್ನು ಅವಲಂಬಿಸಿರುವವರ ಪರಿಸ್ಥಿತಿ ಏನಾಗಬಹುದು? ಇದೆಲ್ಲದ ಪರಿಹಾರ ನಿಧಿಸಂಗ್ರಹಣೆ ಪಂದ್ಯ ಎಂದು ಅಖ್ತರ್ ಹೇಳಿದ್ದಾರೆ. ಮುಂದೆ ನನ್ನ ಆಲೋಚನೆಯನ್ನು ಮುಂದೆ ನೀವು ಅರ್ಥಮಾಡಿಕೊಳ್ಳುವಿರಿ. ಅದು ಎರಡೂ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುತ್ತದೆ ಎಂದಿದ್ದಾರೆ