
ರೋಹಿತ್ ಶರ್ಮಾ ಮತ್ತು ಪ್ರತಿಭಾವಂತ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಸಮಿತಿಯು ಪರಿಗಣಿಸಿಲ್ಲ. ಈಗಾಗಲೇ ಮೂರು ಫಾರ್ಮೆಟ್ಗೆ ತಂಡವನ್ನು ಪ್ರಕಟಿಸಲಾಗಿದ್ದು, ರೋಹಿತ್ ಬದಲು ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಉಪನಾಯಕ ಸ್ಥಾನ ನೀಡಲಾಗಿದೆ.
ಸೂರ್ಯಕುಮಾರ್ ಕಳೆದ ಕೆಲವು ಐಪಿಎಲ್ ಸೀಸನ್ಗಳಲ್ಲಿ, ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರು ಆಯ್ಕೆ ಸಮಿತಿಯು ಯಾದವ್ರನ್ನ ಪರಿಗಣಿಸದೇ ಇರುವುದು ಟೀಕೆಗೆ ಕಾರಣವಾಗಿದೆ.
12 ಪಂದ್ಯಗಳ 11 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು, ಮೂರು ಅರ್ಧಶತಕ ಸಹಿತ 362 ರನ್ ಗಳಿಸಿದ್ದಾರೆ. ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಯಾದವ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಹಿರಿಯ ಕ್ರಿಕೆಟಿಗರಾದ ಮನೋಜ್ ತಿವಾರಿ, ಹರ್ಭಜನ್ ಸಿಂಗ್ ಅವರು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ. ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್ಸರ್ಕರ್ ಅವರೂ ಕೂಡ ಆಯ್ಕೆ ಸಮಿತಿ ಕಡೆ ಬೆಟ್ಟು ಮಾಡಿ ತೋರಿಸಿದ್ದಾರೆ.
ಸೂರ್ಯಕುಮಾರ್ನಂತಹ ಪ್ರತಿಭಾವಂತ ಕ್ರಿಕೆಟಿಗನನ್ನು ಆಯ್ಕೆ ಸಮಿತಿ ಏಕೆ ಪರಿಗಣಿಸಿಲ್ಲ ಎಂಬುದನ್ನು ಸೌರವ್ ಗಂಗೂಲಿ ಪ್ರಶ್ನಿಸಲಿ ಎಂದಿದ್ದಾರೆ. ಈಗಾಗಲೇ ಸೂರ್ಯಕುಮಾರ್ ಆಸೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗದೇ ಇರುವುದರ ಕುರಿತು ಬೇಸರಗೊಂಡಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಹಂಗಾಮಿ ನಾಯಕ ಕಿರಾನ್ ಪೊಲಾರ್ಡ್ ಹೇಳಿದ್ದಾರೆ.
ಇದರ ನಡುವೆ ವೆಂಗಸರ್ಕಾರ್ ಸೂರ್ಯಕುಮಾರ್ ಪ್ರದರ್ಶನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಸದ್ಯ ಭಾರತ ತಂಡದ ಅತ್ಯುತ್ತಮ ಆಟಗಾರರೊಂದಿಗೆ ಸೂರ್ಯಕುಮಾರ್ನನ್ನು ಹೋಲಿಕೆ ಮಾಡಬಲ್ಲೆ. ಅವರು ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಭಾರತ ತಂಡದಲ್ಲಿ ಸ್ಥಾನ ಗಳಿಸಲು ಇನ್ನೂ ಏನು ಮಾಡಬೇಕು ಎಂಬುದು ನನಗೆ ತಿಳಿಯುತ್ತಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಒಬ್ಬ ಬ್ಯಾಟ್ಸ್ಮನ್ ತನ್ನ 26 ರಿಂದ 34 ವರ್ಷಗಳವರೆಗೆ ಉತ್ತುಂಗದಲ್ಲಿರುತ್ತಾರೆ. ಸೂರ್ಯ (30) ಈಗ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಫಾರ್ಮ್ ಮತ್ತು ಫಿಟ್ನೆಸ್ ಮಾನದಂಡವಲ್ಲದಿದ್ದರೆ, ಮತ್ತೇನು? ಯಾರಾದರೂ ವಿವರಿಸುವಿರಾ?' ಎಂದು ಪ್ರಶ್ನಿಸಿದ್ದಾರೆ.
ಇನ್ನು ಮಾತು ಮುಂದುವರಿಸಿ 'ರೋಹಿತ್ (ಶರ್ಮಾ) ಗಾಯದಿಂದಾಗಿ ತಂಡದಿಂದ ಹೊರಗಿರುವುದರಿಂದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಸೂರ್ಯ ಇರಬೇಕಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಸೂರ್ಯರನ್ನು ಕೈಬಿಟ್ಟಿದ್ದರ ಹಿಂದಿನ ಕಾರಣದ ಬಗ್ಗೆ ಆಯ್ಕೆ ಸಮಿತಿಯನ್ನು ಪ್ರಶ್ನಿಸಬೇಕು' ಎಂದು ಆಗ್ರಹಿಸಿದ್ದಾರೆ.