
ಚೆನ್ನೈ: ಆ್ಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗಾಗಿ ಚೆನ್ನೈಯ ಆಸ್ಪತ್ರೆಗೆ ತೆರಳಿದ್ದ ಶ್ರೀಲಂಕಾದ ಕ್ರಿಕೆಟ್ ದಂತಕತೆ ಮುತ್ತಯ್ಯ ಮುರಳೀಧರನ್ ಸೋಮವಾರ (ಏಪ್ರಿಲ್ 19) ಡಿಸ್ಚಾರ್ಜ್ ಆಗಿದ್ದಾರೆ. ಹೃದಯದ ಸಮಸ್ಯೆಯ ಕಾರಣದಿಂದಾಗಿ ಮುರಳೀಧರನ್ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು.
ಸದ್ಯ ನಡೆಯುತ್ತಿರುವ 14ನೇ ಆವೃತ್ತಿಯ ಇಂಡಿಯನ್ಸ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೆಂಬಲ ಸಿಬ್ಬಂದಿಗಳಲ್ಲಿ ಮುತ್ತಯ್ಯ ಮುರಳೀಧರನ್ ಕೂಡ ಒಬ್ಬರಾಗಿದ್ದರು. ಇದೇ ಕಾರಣಕ್ಕೆ ಮುರಳೀಧರನ್ ಭಾರತದಲ್ಲಿದ್ದರು.
'ಮುರಳೀಧರನ್ಗೆ ನೆನ್ನೆ (ಭಾನುವಾರ) ಯಶಸ್ವಿಯಾಗಿ ಕೊರೊನರಿ (ಹೃದಯನಾಳ) ಆ್ಯಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ ನಡೆದಿದೆ. ಹಿರಿಯ ಅಂತಾರಾಷ್ಟ್ರೀಯ ಕಾರ್ಡಿಯಾಲಜಿಸ್ಟ್ ಡಾ. ಜಿ ಸೆಂಗೊತ್ತುವೇಲು ಅವರು ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ,' ಎಂದು ಚೆನ್ನೈಯ ಅಪೊಲೋ ಆಸ್ಪತ್ರೆಯ ಮೂಲ ತಿಳಿಸಿದೆ.
ಹೃದಯದ ಸಮಸ್ಯೆ ಇದ್ದಿದ್ದರಿಂದ ಮುರಳೀಧರನ್ ಆಸ್ಪತ್ರೆಗೆ ದಾಖಲಾಗಿದ್ದರು. ಏಪ್ರಿಲ್ 17ರಂದಷ್ಟೇ ಮುತ್ತಯ್ಯ ಅವರು 49ನೇ ಹರೆಯಕ್ಕೆ ಕಾಲಿರಿಸಿದ್ದರು. 133 ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್, 350 ಏಕದಿನ ಪಂದ್ಯಗಳಲ್ಲಿ 534 ವಿಕೆಟ್, 12 ಟಿ20ಐ ಪಂದ್ಯಗಳಲ್ಲಿ 13 ವಿಕೆಟ್ ದಾಖಲೆ ಹೊಂದಿದ್ದಾರೆ.