
ಅಕ್ಟೋಬರ್ 24ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಸೋಲನ್ನು ಅನುಭವಿಸಿದೆ. ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾವನ್ನು ಸೋಲಿಸುವುದರ ಮೂಲಕ ಪಾಕಿಸ್ತಾನ ಸಾಧನೆ ಮಾಡಿದೆ.
ಹೌದು, ವಿಶ್ವಕಪ್ ಟೂರ್ನಿಗಳಲ್ಲಿ ಈ ಪಂದ್ಯಕ್ಕೂ ಮುನ್ನ 12 ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಇಷ್ಟು ಮುಖಾಮುಖಿಗಳಲ್ಲಿಯೂ ಟೀಮ್ ಇಂಡಿಯಾ ಜಯವನ್ನು ಸಾಧಿಸಿತ್ತು. ಆದರೆ ಟೀಮ್ ಇಂಡಿಯಾದ ಈ ಗೆಲುವಿನ ಸರಪಳಿಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯದ ಫಲಿತಾಂಶ ಬ್ರೇಕ್ ಹಾಕಿದ್ದು ಸದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಪಂದ್ಯಗಳ ಮುಖಾಮುಖಿಯ ಫಲಿತಾಂಶ 12 - 1 ಆಗಿದೆ.
ಕೆಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ವಿರುದ್ಧ ಭಾರತ ತಂಡ ಸೋತಿದ್ದನ್ನು ಪಂದ್ಯ ಎಂದ ಮೇಲೆ ಸೋಲು ಗೆಲುವು ಇದ್ದದ್ದೇ, ಗೆದ್ದ ಭಾರತ ತಂಡದ ಜೊತೆಗಿದ್ದ ನಾವು ಸೋತ ಭಾರತ ತಂಡದ ಜತೆಗೂ ಕೂಡ ಇರೋಣ ಎಂದು ಭಾರತ ತಂಡಕ್ಕೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲ ಅಭಿಮಾನಿಗಳು ಕೊಹ್ಲಿ ಪಡೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಯಾವ ತಂಡದ ವಿರುದ್ಧವಾದರೂ ಪಂದ್ಯ ಸೋತಿದ್ದರೆ ನಮಗೆ ಬೇಸರವಾಗುತ್ತಿರಲಿಲ್ಲ ಆದರೆ ಪಾಕಿಸ್ತಾನ ವಿರುದ್ಧ ಸೋತಿದ್ದು ಅವಮಾನವನ್ನುಂಟುಮಾಡಿದೆ ಎಂದು ಭಾರತ ತಂಡದ ಕೆಲ ಕ್ರಿಕೆಟಿಗರ ವಿರುದ್ಧ ಕಿಡಿಕಾರಿದ್ದಾರೆ.
ಅದರಲ್ಲಿಯೂ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಭಾರತ ಕ್ರಿಕೆಟ್ ತಂಡದ ಕೆಲ ಅಭಿಮಾನಿಗಳು ಹೆಚ್ಚಾಗಿಯೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮೊಹಮ್ಮದ್ ಶಮಿ ಅವರನ್ನು ನಿಂದಿಸಿದ್ದಾರೆ. ಈ ಕುರಿತು ಈಗಾಗಲೇ ಹಲವಾರು ಭಾರತೀಯ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದು ಮೊಹಮ್ಮದ್ ಶಮಿ ವಿರುದ್ಧ ನಿಂದನೆಯನ್ನು ಮಾಡದೇ ಅಭಿಮಾನಿಗಳು ಆಟವನ್ನು ಆಟದ ರೀತಿ ನೋಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಇದೀಗ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಭಾರತ ತಂಡ ಮತ್ತು ಮೊಹಮ್ಮದ್ ಶಮಿ ಪರ ನಿಂತಿದ್ದಾರೆ. "ನಾವು ಭಾರತ ತಂಡವನ್ನು ಬೆಂಬಲಿಸುವಾಗ ಆ ತಂಡದ ಪ್ರತಿಯೊಬ್ಬ ಆಟಗಾರನನ್ನು ಕೂಡ ಬೆಂಬಲಿಸಬೇಕು. ಮೊಹಮ್ಮದ್ ಶಮಿ ಭಾರತ ತಂಡದ ಓರ್ವ ಪ್ರಮುಖ ಬೌಲರ್. ಕ್ರಿಕೆಟ್ ಜೀವನದಲ್ಲಿ ಪ್ರತಿಯೊಬ್ಬ ಆಟಗಾರ ಎದುರಿಸಬಹುದಾದ ಕೆಟ್ಟ ದಿನವನ್ನು ಅವರು ಕೂಡ ಎದುರಿಸಿದ್ದಾರೆ. ನಾನು ಮೊಹಮ್ಮದ್ ಶಮಿ ಮತ್ತು ಟೀಮ್ ಇಂಡಿಯಾ ಪರ ನಿಲ್ಲುತ್ತೇನೆ" ಎಂದು ಟ್ವೀಟ್ ಮಾಡುವ ಮುಖಾಂತರ ಸಚಿನ್ ತೆಂಡೂಲ್ಕರ್ ಭಾರತ ತಂಡವನ್ನು ಬೆಂಬಲಿಸುವ ಕ್ರಿಕೆಟ್ ಅಭಿಮಾನಿಗಳು ಆಟಗಾರರಿಗೂ ಗೌರವ ನೀಡಬೇಕೆಂಬುದನ್ನು ಮನದಟ್ಟು ಮಾಡಿದ್ದಾರೆ.