ಪ್ರತಿರೋಧ ತೋರಿದ ನಬಿ, ಜನತ್
ಅಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ ಹಾಗೂ ಕರೀಮ್ ಜನತ್ ಭಾರತೀಯ ಬೌಲರ್ಗಳನ್ನು ಒಂದಷ್ಟು ದಂಡಿಸಿದರು. ಅದರಲ್ಲೂ ಜನತ್ 22 ಎಸೆತಗಳಲ್ಲಿ 42 ರನ್ ಬಾರಿಸಿ ಗಮನಸೆಳೆದರು. ಆದರೆ ಈ ಹೋರಾಟ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ಲಾಭವೇನೂ ಮಾಡಲಿಲ್ಲ. ಆದರೆ ಸೋಲಿನ ಅಂತರವನ್ನು ಮಾತ್ರ ಕಡಿಮೆಗೊಳಿಸಿದೆ. ಅಂತಿಮವಾಗಿ ಅಫ್ಘಾನಿಸ್ತಾನ 144 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ತನ್ನ ಹೋರಾಟವನ್ನು ಅಂತ್ಯಗೊಳಿಸಿತು. ಈ ಮೂಲಕ ಭಾರತ 66 ರನ್ಗಳ ಜಯಭೇರಿ ಬಾರಿಸಿದೆ.
ಅಬ್ಬರಿಸಿದ ಭಾರತದ ಬ್ಯಾಟಿಂಗ್ ಪಡೆ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ಆರಂಭದಿಂದಲೇ ಅದ್ಭುತ ಆಟವನ್ನು ಪ್ರದರ್ಶಿಸಿತು. ಟೀಮ್ ಇಂಡಿಯಾದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅಫ್ಘಾನಿಸ್ತಾನದ ಬೌಲರ್ಗಳ ಮೇಲೆ ಅಬ್ಬರಿಸಲು ಆರಂಬಿಸಿದ್ದರು. ಈ ಜೋಡಿ ಮೊದಲ ವಿಕೆಟ್ಗೆ ಭರ್ಜರಿ 140 ರನ್ಗಳ ಜೊತೆಯಾಟ ನಿಡಿದ ಬಳಿಕ ಬೇರ್ಪಟ್ಟಿತು. 47 ಎಸೆತಗಳಲ್ಲಿ 74 ರನ್ ಸಿಡಿಸಿದ ರೋಹಿತ್ ಶರ್ಮಾ ಕರಿಮ್ ಜನತ್ಗೆ ವಿಕೆಟ್ ಒಪ್ಪಿಸಿದ್ದಾರೆ. ನಂತರ ಕೆಎಲ್ ರಾಹುಲ್ 69 ರನ್ಗಳಿಸಿ ಔಟಾಗಿ ಫೆವಿಲಿಯನ್ ಸೇರಿದರು.
ಸ್ಪೋಟಕ ಆಟ ಪ್ರದರ್ಶಿಸಿದ ಪಂತ್, ಪಾಂಡ್ಯ
ಅದಾದ ಬಳಿಕ ಜೊತೆಯಾಗಿದ್ದು ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ರನ್ ವೇಗ ಮತ್ತಷ್ಟು ಹೆಚ್ಚಿಸುವ ಸಲುವಾಗಿ ನಾಯಕ ವಿರಾಟ್ ಕೊಹ್ಲಿ ಈ ಇಬ್ಬರು ಸ್ಪೋಟಕ ಆಟಗಾರರನ್ನು ಬೇಗನೆ ಕಣಕ್ಕಿಳಿಸಿದ್ದರು. ನಾಯಕನ ಈ ನಿರ್ಧಾರವನ್ನು ಇಬ್ಬರು ದಾಂಡಿಗರು ಕೂಡ ಸಮರ್ಥಿಸುವಂತೆ ಆಡಿದರು. ರಿಷಭ್ ಪಂತ್ 13 ಎಸೆತಗಳಲ್ಲಿ 27 ರನ್ ಸಿಡಿಸಿದರು. ಇದರಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿ ಒಂಗೊಂಡಿತ್ತು. ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 35 ರನ್ ಸಿಡಿಸಿದರು. ಪಾಂಡ್ಯ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಮಿಂಚಿದರು. ಈ ಮೂಲಕ ನಿಗದಿತ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಭಾರತ 210 ರನ್ ಗಳಿಸಿದೆ.
ಸೆಮಿಫೈನಲ್ ಕನಸು ಜೀವಂತ
ಇನ್ನು ಈ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ಸೆಮಿಫೈನಲ್ ಕನಸನ್ನು ಜೀವಂತವಾಗಿಸಿಕೊಂಡಿದೆ. ಆಡಿದ ಮೂರನೇ ಪಂದ್ಯದಲ್ಲಿ ಭಾರತ ಮೊದಲ ಗೆಲುವು ದಾಖಲಸಿದ್ದು ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಭಾರತದ ಖಾತೆಯಲ್ಲೀಗ 2 ಅಂಕವಿದ್ದು ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ. ಆದರೆ ಸೆಮಿಫೈನಲ್ಗೇರುವ ಮತ್ತೊಂದು ಅವಕಾಶಕ್ಕೆ ಈಗ ಮೂರು ತಂಡಗಳು ಪೈಪೋಟಿ ನಡೆಸುತ್ತಿದೆ. ನ್ಯೂಜಿಲೆಂಡ್ ತಂಡ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಸೋತರೆ ಮಾತ್ರವೇ ಭಾರತದ ಸೆಮಿಫೈನಲ್ ಆಸೆ ಜೀವಂತವಾಗಿರಲು ಸಾಧ್ಯ. ಅಲ್ಲದೆ ಅಂಥಾ ಸಂದರ್ಭದಲ್ಲಿ ಭಾರತ, ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳ ನೆಟ್ ರನ್ರೇಟ್ ಕೂಡ ನಿರ್ಣಾಯಕ ಪಾತ್ರವಹಿಸಲಿದೆ.