ಟಿ20 ವಿಶ್ವಕಪ್: ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭುವಿ ಬದಲಿಗೆ ಶಾರ್ದೂಲ್ ಆಡಲಿ: ಅಜಿತ್ ಅಗರ್ಕರ್

ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಕ್ರಿಕೆಟ್ ಅಭಿಮಾನಿಗಳ ಉತ್ಸಾಹ ಹೆಚ್ಚಾಗುತ್ತಿದೆ. ಈ ಪಂದ್ಯದ ಆಡುವ ಬಳಗದಲ್ಲಿ ಯಾರು ಇರಬೇಕು ಯಾರು ಬೇಡ ಎಂಬ ಬಗ್ಗೆ ಚರ್ಚೆಗಳು ಅಭಿಮಾನಿಗಳ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಈ ವಿಚಾರವಾಗಿ ಕ್ರಿಕೆಟ್ ಪಂಡಿತರು ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಟೀಮ್ ಇಂಡಿಯಾದ ಮಾಜಿ ಬೌಲರ್ ಅಜಿತ್ ಅಗರ್ಕರ್ ಟಿ20 ವಿಶ್ವಕಪ್ನ ಪಾಕಿಸ್ತಾನ ವಿರುದ್ಧದ ಪಂದ್ಯದ ವಿಚಾರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಆಡುವುದು ಬೇಡ ಎಂಬ ಅಭಿಪ್ರಾಯವನ್ನು ವ್ಯಕ್ತಪೊಡಿಸಿದ್ದಾರೆ ಅಜಿತ್ ಅಗರ್ಕರ್. ಈ ಮಹತ್ವದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಬದಲಿಗೆ ಶಾರ್ದೂಲ್ ಠಾಕೂರ್ ಆಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.
"ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆರು ಬೌಲರ್ಗಳೊಂದಿಗೆ ಆಡುವುದಕ್ಕೂ ಸಿದ್ದವಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಪಿಚ್ ಗಮನದಲ್ಲಿಟ್ಟುಕೊಂಡು ಬೌಲರ್ಗಳನ್ನು ಕಣಕ್ಕಿಳಿಸುವುದನ್ನು ನಿರ್ಧರಿಸಲಿದ್ದಾರೆ. ಫ್ಲ್ಯಾಟ್ ಪಿಚ್ ಆಗಿದ್ದರೆ ಮೂವರು ವೇಗಿಗಳು ಸಹಿತ ಆರು ಮಂದಿ ಬೌಲಿಂಗ್ ಆಯ್ಕೆಯೊಂದಿಗೆ ವಿರಾಟ್ ಕೊಹ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ" ಎಂದು ಅಜಿತ್ ಅಗರ್ಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಂದರ್ಭದಲಲ್ಇ ಆರು ಮಂದಿ ಬೌಲರ್ಗಳೊಂದಿಗೆ ಕಣಕ್ಕಿಳಿಯಬೇಕಾದರೆ ಯಾರೆಲ್ಲಾ ಆಡುವ ಬಳಗದಲ್ಲಿ ಸ್ಥಾನ ಪಡೆಯಬೇಕು ಎಂಬುದನ್ನು ಕೂಡ ಅಜಿತ್ ಅಗರ್ಕರ್ ವಿವರಿಸಿದ್ದಾರೆ. "ಜಡೇಜಾ ಒರ್ವ ಆಲ್ರೌಂಡರ್ ಆಗಿದ್ದು ಅವರ ಬ್ಯಾಟಿಂಗ್ ಅದ್ಭುತವಾಗಿದೆ. ಹಾಗಾಗಿ ಅವರನ್ನು ಬ್ಯಾಟರ್ ಆಗಿಯೂ ಪರಿಗಣಿಸಬಹುದಾಗಿದೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದಿದ್ದರೆ ನನ್ನ ಆರು ಬೌಲರ್ಗಳ ಆಯ್ಕೆ ಹೀಗಿದೆ- ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಹರ್" ಎಂದಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಿಂದ ಭುವನೇಶ್ವರ್ ಕುಮಾರ್ ಅವರನ್ನು ಅಜಿತ್ ಅಗರ್ಕರ್ ಹೊರಗಿಡಲು ಬಯಸಿದ್ದಾರೆ. ಭುವನೇಶ್ವರ್ ಕುಮಾರ್ ಇತ್ತೀಚೆಗೆ ತಮ್ಮ ಬೌಲಿಂಗ್ ಲಯವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಅದರಲ್ಲೂ ಕಳೆದ ಇಂಗ್ಲೆಂಡ್ ವಿರುದ್ಧಧ ಅಭ್ಯಾಸ ಪಂದ್ಯದಲ್ಲಿ ಭುವಿ ದುಬಾರಿ ಬೌಲರ್ ಎನಿಸಿದ್ದರು. ನಾಲ್ಕು ಓವರ್ಗಳ ಬೌಲಿಂಗ್ ಕೊಟಾದಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಪಡೆಯದೆ 54 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಹೀಗಾಗಿ ಭುವಿಯನ್ನು ಆಡುವ ಬಳಗದಿಂದ ಹೊರಗಿಡುವುದು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಭುವಿ ಬೆನ್ನಿಗೆ ನಿಂತ ನಾಯಕ ಕೊಹ್ಲಿ: ಇನ್ನು ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ದುಬಾರಿ ಬೌಲರ್ ಎನಿಸಿದ ಭುವನೇಶ್ವರ್ ಕುಮಾರ್ ಬೆಂಬಲಕ್ಕೆ ನಾಯಕ ವಿರಾಟ್ ಕೊಹ್ಲಿ ನಿಂತಿದ್ದಾರೆ. "ಭುವನೇಶ್ವರ್ ಕುಮಾರ್ ಫಾರ್ಮ್ ಬಗ್ಗೆ ನಾವು ಯಾವುದೇ ಕಾರಣಕ್ಕೂ ಕಳವಳ ಹೊಂದಿಲ್ಲ. ಆತನ ಬೌಲಿಂಗ್ ಎಕಾನಮಿ ರೇಟ್ ಇನ್ನು ಕೂಡ ಅದ್ಭುತವಾಗಿದೆ. ಒತ್ತಡದ ಸಂದರ್ಭದಲ್ಲಿ ಆತನ ಅನುಭವ ಬಹಗಳಷ್ಟು ಪ್ರಮುಖವಾಗಿದೆ" ಎಂದಿದ್ದಾರೆ ನಾಯಕ ವಿರಾಟ್ ಕೊಹ್ಲಿ.
ಭಾರತ ತಂಡ ಸಂಪೂರ್ಣ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ರಾಹುಲ್ ಚಾಹರ್, ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಾಹರ್, ಅಕ್ಷರ್ ಪಟೇಲ್ ; ಮಾರ್ಗದರ್ಶಕ: ಎಂಎಸ್ ಧೋನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications