
ಪೋರ್ಟ್ ಆಫ್ ಸ್ಪೇನ್, ಆಗಸ್ಟ್ 14: ಭಾರತದ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಪ್ರವಾಸದಲ್ಲಿದ್ದ ಟೀಮ್ ಇಂಡಿಯಾದ ಆಡಳಿತ ವ್ಯವಸ್ಥಾಪಕರನ್ನು ಬಿಸಿಸಿಐ ಭಾರತಕ್ಕೆ ವಾಪಸ್ ಕರೆಸಿಕೊಂಡಿದೆ. ಭಾರತ ತಂಡದ ಆಡಳಿತ ವ್ಯವಸ್ಥಾಪಕ ಸುನಿಲ್ ಸುಬ್ರಮಣಿಯಂ ಪ್ರವಾಸದ ಮಧ್ಯದಲ್ಲೇ ವಾಪಸ್ಸಾಗಲಿದ್ದಾರೆ.
ವೆಸ್ಟ್ ಪ್ರವಾಸದಲ್ಲಿದ್ದು ಏಕದಿನ ಸರಣಿಯನ್ನಾಡುತ್ತಿರುವ ಭಾರತ ಕ್ರಿಕೆಟ್ ತಂಡದ ಆಡಳಿತ ವ್ಯವಸ್ಥಾಪಕ ಸುಬ್ರಮಣಿಯಂ ಸ್ವದೇಶಕ್ಕೆ ವಾಪಸ್ಸಾಗುವಂತೆ ಬಿಸಿಸಿಐಯು ಬುಧವಾರ (ಆಗಸ್ಟ್ 14) ತಿಳಿಸಿದೆ. ವಿದೇಶಿ ಪ್ರವಾಸದ ವೇಳೆ ಸುಬ್ರಮಣಿಯಂ ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಸುನಿಲ್, ಭಾರತಕ್ಕೆ ಮರಳುತ್ತಿದ್ದಾರೆ.
ಕೆರಿಬಿಯನ್ನ ಉನ್ನತ ಆಯೋಗದ ಅಧಿಕಾರಿಗಳೊಂದಿಗೆ ಸುನಿಲ್ ಸುಬ್ರಮಣಿಯಂ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಭಾರತಕ್ಕೆ ವಾಪಸ್ಸಾದ ಬಳಿಕ ಸುಬ್ರಮಣಿಯಂ ಮುಂಬೈನಲ್ಲಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರೆದುರು ಹಾಜರಾಗಲಿದ್ದಾರೆ.
'ಜಲ ಸಂರಕ್ಷಣೆ ಕುರಿತಾಗಿ ಟೀಮ್ ಇಂಡಿಯಾ ಒಂದು ವಿಡಿಯೋ ಶೂಟೌಟ್ನಲ್ಲಿ ತೊಡಗಿದೆ. ಇದನ್ನು ಸುಬ್ರಮಣಿಯಂ ನೋಡಿಕೊಳ್ಳುತ್ತಿದ್ದಾರೆ. ಶೂಟಿಂಗ್ ಮುಕ್ತಾಯಗೊಳ್ಳುತ್ತಲೇ ಆದಷ್ಟು ಶೀಘ್ರ ಲಭ್ಯವಿರುವ ವಿಮಾನ ಹತ್ತುವಂತೆ ಅವರಿಗೆ ಇಮೇಲ್ ಮೂಲಕ ತಿಳಿಸಲಾಗಿದೆ,' ಎಂದು ಬೋರ್ಡ್ನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 3 ಪಂದ್ಯಗಳ ಟಿ20 ಸರಣಿಯಲ್ಲಿ 3-0ಯ ಗೆಲುವು ದಾಖಲಿಸಿರುವ ಭಾರತ, 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ. ಮೊದಲ ಪಂದ್ಯ ಮಳೆಯ ಕಾರಣ ರದ್ದಾಗಿತ್ತು. ಬುಧವಾರ ಇತ್ತಂಡಗಳ ಮಧ್ಯೆ 3ನೇ ಏಕದಿನ ಪಂದ್ಯ ನಡೆಯಲಿದೆ.