ರಿಷಭ್ ಪಂತ್ ದಂತಕಥೆಯಾಗುತ್ತಾರೆ
ಇದೆಲ್ಲಾ ಹಿಂದಿನ ಮಾತು. ಈಗ ಇತ್ತೀಚೆಗೆ ಭಾರತದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಅವರು ವಿಕೆಟ್ ಕೀಪರ್- ಬ್ಯಾಟ್ಸ್ಮನ್ ರಿಷಭ್ ಪಂತ್ರನ್ನು ಬೆಂಬಲಿಸಿದ್ದಾರೆ. ಭಾರತಕ್ಕಾಗಿ 100+ ಟೆಸ್ಟ್ಗಳನ್ನು ಆಡಿದರೆ ರಿಷಭ್ ಪಂತ್ ದಂತಕಥೆಯಾಗುತ್ತಾರೆ ಎಂದು ಹೇಳಿದ್ದಾರೆ. ಭಾರತದಿಂದ ಇದುವರೆಗೆ 11 ಕ್ರಿಕೆಟಿಗರು ಮಾತ್ರ ಈ ಸಾಧನೆ ಮಾಡಿದ್ದಾರೆ.
ಟೆಸ್ಟ್ ಸ್ವರೂಪವು ಕ್ರಿಕೆಟ್ ಆಟದ ಅಂತಿಮ ರೂಪವಾಗಿದೆ. ಪ್ರತಿಯೊಬ್ಬ ಕ್ರಿಕೆಟಿಗರು ಇದನ್ನು ತಿಳಿದಿದ್ದಾರೆ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಮಿಂಚಲು ಬಯಸುತ್ತಾರೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದರು. ವಿರಾಟ್ ಕೊಹ್ಲಿ ಕೂಡ ತಮ್ಮ ಸೀಮಿತ ಓವರ್ಗಳ ಯಶಸ್ಸಿನ ಹೊರತಾಗಿಯೂ, ಟೆಸ್ಟ್ ಕ್ರಿಕೆಟ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಯಾವುದೇ ಅದ್ಭುತ ಇನ್ನಿಂಗ್ಸ್ಗಳು ಬರಲಿಲ್ಲ
ರಿಷಭ್ ಪಂತ್ ಅವರ ಕಳಪೆ ಐಪಿಎಲ್ 2022ರ ನಂತರ ಅನೇಕ ಜನರು ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಐಪಿಎಲ್ನಲ್ಲಿ ಅವರಿಂದ ಯಾವುದೇ ಅದ್ಭುತ ಇನ್ನಿಂಗ್ಸ್ಗಳು ಬರಲಿಲ್ಲ ಮತ್ತು ನಾಯಕನಾಗಿಯೂ ಸಹ ನಿರ್ಣಾಯಕವಾಗಿರಲಿಲ್ಲ ಎನ್ನುತ್ತಿದ್ದಾರೆ. ಆದರೆ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಅವರು ರಿಷಭ್ ಪಂತ್ ಮೇಲೆ ನಂಬಿಕೆ ಇಟ್ಟಿದ್ದಾರೆ. ಪಂತ್ ಭಾರತಕ್ಕೆ ದೊಡ್ಡ ಟೆಸ್ಟ್ ಆಟಗಾರನಾಗುತ್ತಾರೆ. ಟೆಸ್ಟ್ಗಳಲ್ಲಿನ ಶತಕಗಳಿಂದಾಗಿಯೇ ರಿಷಭ್ ಪಂತ್ ದೊಡ್ಡ ಹೆಸರು ಪಡೆದರು ಮತ್ತು ಅದು ಅವರನ್ನು ಈಗ ಆಡುವ 11ರ ಬಳಗದಿಂದ ಕೈಬಿಡಲಾಗದಂತೆ ಮಾಡಿದೆ.
ಇತಿಹಾಸ ಪುಸ್ತಕಗಳಲ್ಲಿ ಶಾಶ್ವತವಾಗಿ ಉಳಿಯುತ್ತದೆ
"ಭವಿಷ್ಯದಲ್ಲಿ ರಿಷಭ್ ಪಂತ್ 100+ ಟೆಸ್ಟ್ಗಳನ್ನು ಆಡಿದರೆ, ಅವರ ಹೆಸರು ಇತಿಹಾಸ ಪುಸ್ತಕಗಳಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಕೇವಲ 11 ಭಾರತೀಯ ಕ್ರಿಕೆಟಿಗರು ಮಾತ್ರ ಈ ಸಾಧನೆ ಮಾಡಿದ್ದಾರೆ ಮತ್ತು ಪ್ರತಿಯೊಬ್ಬರೂ ಆ 11 ಹೆಸರುಗಳನ್ನು ನೆನಪಿಸಿಕೊಳ್ಳಬಹುದು," ಎಂದು ಸೆಹ್ವಾಗ್ ಹೋಮ್ ಆಫ್ ಹೀರೋಸ್ನ ಸ್ಪೋರ್ಟ್ಸ್18ಗೆ ಪ್ರತಿಕ್ರಿಯೆ ನೀಡಿದರು.
"ವಿರಾಟ್ ಕೊಹ್ಲಿ ಟೆಸ್ಟ್ ಆಡುವುದಕ್ಕೆ ಏಕೆ ಹೆಚ್ಚು ಒತ್ತು ನೀಡುತ್ತಾರೆ? ಅವರು 100-150 ಅಥವಾ 200 ಟೆಸ್ಟ್ ಪಂದ್ಯಗಳನ್ನು ಆಡಿದರೆ ಅವರು ದಾಖಲೆ ಪುಸ್ತಕಗಳಲ್ಲಿ ಚಿರಸ್ಥಾಯಿಯಾಗುತ್ತಾರೆ ಎಂದು ಅವರಿಗೆ ತಿಳಿದಿದೆ," ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದರು.
ಟೆಸ್ಟ್ ಕರಿಯರ್ನಲ್ಲಿ 82.23ರ ಸ್ಟ್ರೈಕ್ ರೇಟ್
ವೀರೇಂದ್ರ ಸೆಹ್ವಾಗ್ ಸ್ವತಃ ಟೆಸ್ಟ್ ಸ್ವರೂಪದಲ್ಲಿ ಭಾರತದ ಪರ ಅದ್ಭುತ ಆಟಗಾರರಾಗಿದ್ದರು. ಅವರು ಟೆಸ್ಟ್ ಕರಿಯರ್ನಲ್ಲಿ 82.23ರ ಸ್ಟ್ರೈಕ್ ರೇಟ್ನಲ್ಲಿ 49.34 ಸರಾಸರಿಯ 8586 ರನ್ಗಳನ್ನು ಮತ್ತು 1999ರಿಂದ 2013ರ ನಡುವೆ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ 251 ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯಗಳನ್ನು ಆಡಿದ್ದಾರೆ ಮತ್ತು 35ರ ಉತ್ತಮ ಬ್ಯಾಟಿಂಗ್ ಸರಾಸರಿ ಮತ್ತು 104.3 ರ ಅದ್ಭುತ ಸ್ಟ್ರೈಕ್ ರೇಟ್ನಲ್ಲಿ 8,273 ರನ್ಗಳನ್ನು ಸಿಡಿಸಿದ್ದಾರೆ. ಅಲ್ಲದೆ, ಅವರು 15 ಶತಕಗಳು ಮತ್ತು 38 ಅರ್ಧ ಶತಕಗಳನ್ನು ಸಿಡಿಸಿದ್ದಾರೆ.
ವೀರೇಂದ್ರ ಸೆಹ್ವಾಗ್ ಬಹುತೇಕ ಪಂದ್ಯಗಳಲ್ಲಿ ಮೊದಲ ಎಸೆತದಲ್ಲಿಯೇ ಚೆಂಡನ್ನು ಬೌಂಡರಿಯತ್ತ ಬಾರಿಸುವ ಯೋಚನೆಯಲ್ಲಿರುತ್ತಿದ್ದರು. ಈ ಕುರಿತು ಮಾತನಾಡಿರುವ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರು ಹೇಳಿದ್ದಾರೆ, ನಾನು ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸಲು ಯೋಜಿಸಿರುತ್ತೇನೆ ಎಂದು. ಆದ್ರೆ ನಾನು ಆ ರೀತಿಯಾಗಿ ಎಂದು ಯೋಜಿಸುತ್ತಿದ್ದಿಲ್ಲ ಎಂದು ಸೆಹ್ವಾಗ್ ಸ್ಪಷ್ಟಪಡಿಸಿದ್ದಾರೆ.