ತೃತೀಯ ಪಂದ್ಯದಲ್ಲಿ ತಂಡ ಬದಲಾಯಿಸಿರಲಿಲ್ಲ
ದ್ವಿತೀಯ ಪಂದ್ಯದಲ್ಲಿ ಸೋಲಲಿದ್ದ ಪಂದ್ಯವನ್ನು ಟೀಮ್ ಇಂಡಿಯಾ ರೋಚಕ ರೀತಿಯಲ್ಲಿ ಗೆದ್ದಿತ್ತು. ಬ್ಯಾಟ್ಸ್ಮನ್ಗಳೆಲ್ಲ ಕಡಿಮೆ ರನ್ಗೆ ಕೈಚೆಲ್ಲಿದ್ದಾಗ ಬೌಲರ್ಗಳಾದ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬೂಮ್ರಾ ಅದ್ಭುತ ಬ್ಯಾಟಿಂಗ್ ನಡೆಸಿದ್ದರು. ಇಬ್ಬರೂ 90 ರನ್ ಜೊತೆಯಾಟ ನೀಡಿದ್ದರು. ಈ 90 ರನ್ ಕೊಡುಗೆ ತಂಡಕ್ಕೆ ಅನಿರೀಕ್ಷಿತವಾಗಿ ಸಿಕ್ಕಿದ್ದು. ಸುಲಭವಾಗಿ ರನ್ ಗುರಿ ಬೆನ್ನಟ್ಟಬಹುದು ಎಂದುಕೊಂಡಿದ್ದ ಜೋ ರೂಟ್ ಪಡೆ ಶಮಿ ಮತ್ತು ಬೂಮ್ರಾ ಆಟ ನೋಡಿ ತಲೆಕೆಡಿಸಿಕೊಂಡಿತ್ತು. ಇದೇ ಕಾರಣಕ್ಕೆ ಇಂಗ್ಲೆಂಡ್ನ ಆತ್ಮವಿಶ್ವಾಸ ಕುಗ್ಗಿ ಇಂಗ್ಲೆಂಡ್ ಬೇಗನೆ ಔಟ್ ಆಗಿತ್ತು. ದ್ವಿತೀಯ ಟೆಸ್ಟ್ನಲ್ಲಿ ಇಂಗ್ಲೆಂಡ್ ಗೆಲ್ಲಲು ದ್ವಿತೀಯ ಇನ್ನಿಂಗ್ಸ್ನಲ್ಲಿ 272 ರನ್ ಬಾರಿಸಬೇಕಿತ್ತು. ಆದರೆ ಇಂಗ್ಲೆಂಡ್ 120 ರನ್ ಬಾರಿಸಿ 151 ರನ್ನಿಂದ ಶರಣಾಯ್ತು. ಪಂದ್ಯ ಗೆದ್ದ ಖುಷಿಯಲ್ಲಿದ್ದ ಭಾರತ ತೃತೀಯ ಪಂದ್ಯಕ್ಕೂ ತಂಡದಲ್ಲಿ ಒಂದೂ ಬದಲಾವಣೆ ಮಾಡದೆ ಅದೇ ತಂಡವನ್ನು ಕಣಕ್ಕಿಳಿಸಿತ್ತು. ಪರಿಣಾಮ ಭಾರತ ಇನ್ನಿಂಗ್ಸ್ ಸಹಿತ ಹೀನಾಯ ಸೋಲು ಕಂಡಿದೆ.
ತಂಡದಲ್ಲಿ ಬದಲಾವಣೆ ಮಾಡುವ ಮುನ್ಸೂಚನೆಯಿತ್ತ ಕೊಹ್ಲಿ
ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿತ್ತು. ಆದರೆ ಮಾಡದೆ ಪಂದ್ಯ ಸೋತಿರುವುದರಿಂದ ಮುಂದಿನ ಪಂದ್ಯಕ್ಕಾದರೂ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ನಾಯಕ ವಿರಾಟ್ ಕೊಹ್ಲಿ ಯೋಚಿಸಿದ್ದಾರೆ. ತನ್ನ ಆಲೋಚನೆಯನ್ನು ಕೊಹ್ಲಿ ತೃತೀಯ ಟೆಸ್ಟ್ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದರು. "ನಾವು ಮುಂದಿನ ಪಂದ್ಯಕ್ಕೆ ರೊಟೇಶನ್ನಂತೆ ಆಟಗಾರರನ್ನು ಬದಲಾಯಿಸಿಕೊಂಡು ಆಡುವ ಬಗ್ಗೆ ತಂಡ ನಿರ್ವಹಣಾ ಸಮಿತಿ ಜೊತೆ ಮಾತನಾಡಿದ್ದೇವೆ. ಒಂದು ಸುದೀರ್ಘ ಪ್ರವಾಸ ಸರಣಿ ಆಡುತ್ತಿದ್ದಾಗ ಎಲ್ಲಾ ಆಟಗಾರರೂ ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡುವುದನ್ನು ನಾವು ನಿರೀಕ್ಷಿಸಲು ಸಾಧ್ಯವಿಲ್ಲ," ಎಂದು ಕೊಹ್ಲಿ ವಿವರಿಸಿದ್ದಾರೆ. ಕೊಹ್ಲಿ ಹೇಳುವ ಪ್ರಕಾರ ಮುಂದಿನ ಪಂದ್ಯದಲ್ಲಿ ತಂಡದಲ್ಲಿ ಒಂದಿಷ್ಟು ಬದಲಾವಣೆಗಳಾದರೆ ಅಚ್ಚರಿಯಿಲ್ಲ. ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಪ್ರಮುಖ ಕೆಲವು ಬ್ಯಾಟ್ಸ್ಮನ್ಗಳು ವಿಶ್ರಾಂತಿ ಪಡೆದುಕೊಂಡು ಐದನೇ ಟೆಸ್ಟ್ನಲ್ಲಿ ಕಣಕ್ಕಿಳಿಯಬಹುದು.
ಯಾರ ಬದಲಾವಣೆಯಾಗುವ ನಿರೀಕ್ಷೆ?
ಲಂಡನ್ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ತಂಡದಲ್ಲಿ ಏನು ಬದಲಾವಣೆಯಾಗುತ್ತದೆ ಅನ್ನೋದನ್ನು ಕರಾರುವಾಕ್ ಆಗಿ ಹೇಳಲಾಗದು. ಆದರೆ ಕೆಲವೊಂದು ಆಟಗಾರರನ್ನು ಬದಲಾಯಿಸುವುದನ್ನು ನಿರೀಕ್ಷಿಸಬಹುದು. ತೃತೀಯ ಟೆಸ್ಟ್ ವೇಳೆ ಭಾರತದ ಬೆಂಚ್ನಲ್ಲಿ ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಹಾ ಇದ್ದರು. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕೆಎಲ್ ರಾಹುಲ್ ಬದಲು ಪೃಥ್ವಿ ಶಾ ಬರಬಹುದು. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಬದಲು ವೃದ್ಧಿಮಾನ್ ಸಾಹ ಅಥವಾ ಹನುಮ ವಿಹಾರಿ ಕಾಣಿಸಿಕೊಳ್ಳಬಹುದು. ಬೌಲರ್ಗಳಲ್ಲಿ ರವೀಂದ್ರ ಜಡೇಜಾ ಬದಲು ಆರ್ ಅಶ್ವಿನ್ ಕಣಕ್ಕಿಳಿಯಬಹುದು. ಯಾವುದಕ್ಕೂ ಸೆಪ್ಟೆಂಬರ್ 2ರಂದು ನಡೆಯುವ ನಾಲ್ಕನೇ ಟೆಸ್ಟ್ ಪಂದ್ಯದ ವರೆಗೆ ಕಾದು ನೋಡಬೇಕಷ್ಟೇ.