ಹೆಚ್ಚು ದಿನ ತಂಡದಲ್ಲಿ ಉಳಿಯಲು ಹೀಗೆ ಮಾಡು ಎಂದು ಧೋನಿ ಈ ಹಿಂದೆ ನೀಡಿದ್ದ ಸಲಹೆ ಬಿಚ್ಚಿಟ್ಟ ಕೊಹ್ಲಿ!

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದೆ. ಇತ್ತಂಡಗಳ ನಡುವಿನ ಈ ಟೆಸ್ಟ್ ಸರಣಿ ಪೈಕಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವನ್ನು ಸಾಧಿಸಿತು. ಹೀಗೆ ಇತ್ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸದ್ಯ ಎರಡೂ ತಂಡಗಳು 1 - 1 ಗೆಲುವಿನ ಸಮಬಲವನ್ನು ಸಾಧಿಸಿವೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿದ್ದ ವಿರಾಟ್ ಕೊಹ್ಲಿ ಇದೀಗ ಚೇತರಿಸಿಕೊಂಡಿದ್ದು ಜನವರಿ 11ರಿಂದ ಕೇಪ್ ಟೌನ್ ಕ್ರೀಡಾಂಗಣದಲ್ಲಿ ನಡೆಯಲಿರುವ ತೃತೀಯ ಟೆಸ್ಟ್ ಪಂದ್ಯಕ್ಕೆ ಮರಳಲಿದ್ದಾರೆ. ಈ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ತಾನು ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಮೊಹಮ್ಮದ್ ಸಿರಾಜ್ ಅಲಭ್ಯರಾಗಲಿದ್ದಾರೆ ಎಂಬ ವಿಷಯವನ್ನು ತಿಳಿಸಿದರು.
ಇದಾದ ಬೆನ್ನಲ್ಲೇ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ವಿಕೆಟ್ ಒಪ್ಪಿಸಿದ ರೀತಿಯ ಕುರಿತು ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ ಓರ್ವ ಬ್ಯಾಟ್ಸ್ಮನ್ಗೆ ತಾನು ಎದುರಿಸಲಿರುವ ಎಸೆತಕ್ಕೆ ಔಟ್ ಆಗಲಿದ್ದೇನಾ ಅಥವಾ ಇಲ್ಲವಾ ಎಂಬುದು ಇತರರಿಗಿಂತ ಮೊದಲೇ ತಿಳಿದಿರುತ್ತದೆ, ಹೀಗಾಗಿ ನಾವು ಆ ಆಟಗಾರನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಲ್ಲರೂ ತಪ್ಪು ಮಾಡುವುದು ಸಹಜ ಎಂದು ಹೇಳಿಕೆ ನೀಡಿದ್ದಾರೆ. ಹೀಗೆ ರಿಷಭ್ ಪಂತ್ ಮಾಡಿದ ತಪ್ಪಿನ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ಈ ಹಿಂದೆ ತನಗೆ ಎಂಎಸ್ ಧೋನಿ ನೀಡಿದ ಮಹತ್ವದ ಸಲಹೆಯೊಂದರ ಕುರಿತು ಹಂಚಿಕೊಂಡಿದ್ದು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಕೊಹ್ಲಿಗೆ ಧೋನಿ ನೀಡಿದ್ರು ಈ ಮಹತ್ವದ ಸಲಹೆ
ಆಟಗಾರನೋರ್ವ ಮಾಡುವ ತಪ್ಪುಗಳ ಕುರಿತು ಮಾತನಾಡಿರುವ ವಿರಾಟ್ ಕೊಹ್ಲಿ ಈ ಹಿಂದೆ ಈ ವಿಷಯದ ಕುರಿತಾಗಿ ಎಂಎಸ್ ಧೋನಿ ತಮಗೆ ನೀಡಿದ್ದ ಸಲಹೆಯೊಂದನ್ನು ಬಿಚ್ಚಿಟ್ಟಿದ್ದಾರೆ. "ಎಂಎಸ್ ಧೋನಿ ಈ ಹಿಂದೆ ಒಮ್ಮೆ ಆಟಗಾರನೋರ್ವ ಈ ಹಿಂದೆ ತಾನು ಮಾಡಿದ್ದ ತಪ್ಪೊಂದನ್ನು ಪುನಃ ಮಾಡಬೇಕೆಂದರೆ 7ರಿಂದ 8 ತಿಂಗಳ ಅಂತರವಾದರೂ ಇರಬೇಕು ಎಂದು ಹೇಳಿದ್ದರು. ಹೀಗೆ ತಪ್ಪುಗಳ ನಡುವೆ ಅಂತರವನ್ನು ಕಾಯ್ದುಕೊಂಡರೆ ಮಾತ್ರ ನೀನು ಹೆಚ್ಚು ದಿನ ಕ್ರಿಕೆಟ್ ಆಡಬಹುದು ಎಂದಿದ್ದರು. ಹಾಗೂ ಧೋನಿ ನೀಡಿದ ಈ ಸಲಹೆ ನನ್ನ ಕ್ರಿಕೆಟ್ ಜೀವನದುದ್ದಕ್ಕೂ ಅಂಟಿಕೊಂಡಿದೆ" ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ರಿಷಭ್ ಪಂತ್ ಔಟ್ ಆದ ರೀತಿ ಭಾರೀ ಚರ್ಚೆಗೆ ಕಾರಣವಾಗಿತ್ತು
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಜೋಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಮೂರನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಕಗಿಸೋ ರಬಾಡ ಎಸೆದ ಶಾರ್ಟ್ ಡಿಲೆವರಿಗೆ ಮುನ್ನುಗ್ಗಿ ಹೊಡೆತವನ್ನು ಬಾರಿಸಲು ಯತ್ನಿಸಿದ ರಿಷಭ್ ಪಂತ್ ವಿಫಲವಾದ ತರುವಾಯ ಚೆಂಡು ಎಡ್ಜ್ ಆಗಿ ವಿಕೆಟ್ ಕೀಪರ್ ಕೈ ಸೇರಿತ್ತು. ಹೀಗೆ ರಿಷಭ್ ಪಂತ್ ಬೇಡದ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹಾಗೂ ಟೀಕೆಗಳು ನಡೆದಿದ್ದವು.

ಭಾರತ ಮತ್ತು ದಕ್ಷಿಣ ಆಫ್ರಿಕಾ ತೃತೀಯ ಟೆಸ್ಟ್ ಪಂದ್ಯ ಯಾವಾಗ?
ಸದ್ಯ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸರಣಿಯಲ್ಲಿ ಸಮಬಲ ಸಾಧಿಸಿರುವ ಕಾರಣದಿಂದ ಇತ್ತಂಡಗಳ ನಡುವೆ ನಡೆಯಲಿರುವ ತೃತೀಯ ಟೆಸ್ಟ್ ಪಂದ್ಯ ಸರಣಿಯಲ್ಲಿ ಯಾರು ವಿಜೇತರು ಎಂಬುದನ್ನು ತೀರ್ಮಾನಿಸಲಿದೆ. ಹೀಗಾಗಿ ಇತ್ತಂಡಗಳ ನಡುವೆ ನಡೆಯಲಿರುವ ತೃತೀಯ ಟೆಸ್ಟ್ ಪಂದ್ಯ ದೊಡ್ಡ ಮಟ್ಟದ ಕುತೂಹಲಕ್ಕೆ ಕಾರಣವಾಗಿದ್ದು ಕೇಪ್ ಟೌನ್ ನಗರದ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಜನವರಿ 11ರ ಮಂಗಳವಾರದಂದು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications