
ಬೆಂಗಳೂರು, ಮಾರ್ಚ್ 29: ಟೀಂ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರು ಮತ್ತೊಮ್ಮೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದವರನ್ನು ಗುರುತಿಸಿ ಬೆನ್ನುತಟ್ಟಿದ್ದಾರೆ.
ಮಳವಳ್ಳಿಯ ರೈತ, ಪರಿಸರ ಸಂರಕ್ಷಕ, ಬಸವಶ್ರೀ ಪುರಸ್ಕೃತ, 82ನೇ ವಯಸ್ಸಿನ ಕಾಮೇಗೌಡರ ಕಾರ್ಯಕ್ಕೆ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂದು ಮನಗುಳಿಯ ಮುನ್ನೇಶನ ಬಗ್ಗೆ ಬರೆದಿದ್ದಾರೆ. ಸುಮಾರು 15 ಲಕ್ಷ ರು ಖರ್ಚು ಮಾಡಿ 14 ಕೆರೆಗಳನ್ನು ನಿರ್ಮಿಸಿ ಅನೇಕ ಜೀವರಾಶಿಗಳ ಉಳಿಸಿರುವ ಕಾಮೇಗೌಡರ ಬಗ್ಗೆ ಲಕ್ಷ್ಮಣ್ ಟ್ವೀಟ್ ಮಾಡಿದ್ದರು.
ಕರ್ನಾಟಕದ ಮನಗುಳಿಯ ಆಟೋಚಾಲಕ ಮುನ್ನೇಶ ಅವರು ಗರ್ಭಿಣಿಯರಿಗೆ ಉಚಿತ ಪ್ರಯಾಣ ಸೇವೆ, ಬಾಣಂತಿಯರಿಗೆ, ದಿವ್ಯಾಂಗರಿಗೆ, ಮಾಜಿ ಯೋಧರಿಗೆ ಹಾಗೂ ಗಡಿಭಾಗದ ಅಶಕ್ತರಿಗೆ ಉಚಿತ ಆಟೋ ಸೇವೆ ನೀಡುತ್ತಿದ್ದಾರೆ. ಇವರ ನಿಃಸ್ವಾರ್ಥ ಸೇವೆಗೆ ನನ್ನ ನಮನ. ಇವರ ಫೋನ್ ನಂಬರ್ ನೋಡಿ ಎಂದು ಆಟೋರಿಕ್ಷಾ ಹಿಂದೆ ಕೈ ಕಟ್ಟಿ ನಿಂತಿರುವ ಮುನ್ನೇಶ ಅವರ ಚಿತ್ರವನ್ನು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಜುಲೈ 30ರಂದು ಕಾಮೇಗೌಡರ ಬಗ್ಗೆ ಟ್ವೀಟ್ ಮಾಡಿದ್ದರು. ಈ ಬಾರಿ ಐಪಿಎಲ್ ಸೀಸನ್ ನಲ್ಲಿ ಬೆಂಗಳೂರಿನ ಪಂದ್ಯಕ್ಕಾಗಿ ಬಂದಿದ್ದ ಲಕ್ಷ್ಮಣ್ ಅವರು ಮುನ್ನೇಶನ ಬಗ್ಗೆ ಟ್ವೀಟ್ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.
ಈ ಹಿಂದೆ ತೆಲಂಗಾಣ ರಾಜ್ಯದ ಹಸಿರು ಅಭಿಯಾನಕ್ಕೂ ವಿವಿಎಸ್ ಲಕ್ಷ್ಮಣ್ ಕೈಜೋಡಿಸಿದ್ದರು. ಸಚಿನ್ ತೆಂಡೂಲ್ಕರ್ ಸೇರಿ ಅನೇಕ ಕ್ರೀಡಾತಾರೆಯರು ಇದರಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿದ್ದರು. ನಾಲ್ಕು ವರ್ಷಗಳಲ್ಲಿ 230ಕೋಟಿ ಸಸಿ ನೆಡುವ ಬೃಹತ್ ಅಭಿಯಾನ ಇದಾಗಿದೆ.