
ಆಗಸ್ಟ್ 19, ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಮತ್ತು ಘಟನೆಗಳು ನಡೆದಿವೆ. ಒಂದೆಡೆ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ನಿಕ್ ಕಾಂಪ್ಟನ್ ವಿರಾಟ್ ಕೊಹ್ಲಿ ಮೈದಾನದಲ್ಲಿ ಸರಿಯಾಗಿ ನಡೆದುಕೊಳ್ಳುವುದಿಲ್ಲ ಎಂದು ಆರೋಪವನ್ನು ಮಾಡಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಮಾಜಿ ಆಟಗಾರ ದಾನಿಶ್ ಕನೇರಿಯಾ ಮೈದಾನದಲ್ಲಿ ವಿರಾಟ್ ಕೊಹ್ಲಿ ನಡೆದುಕೊಳ್ಳುವ ರೀತಿಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀಗೆ ಆಗಸ್ಟ್ 19ರಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ಪ್ರಮುಖ ಘಟನೆಗಳ ಕಿರು ನೋಟ ಇಲ್ಲಿದೆ ನೋಡಿ..
* ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ 15 ಆಟಗಾರರ ತಂಡವನ್ನು ಪ್ರಕಟಿಸಿದ್ದು ಆ್ಯರನ್ ಫಿಂಚ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದು ಪ್ಯಾಟ್ ಕಮಿನ್ಸ್ ಉಪನಾಯಕನಾಗಿ ಕಣಕ್ಕಿಳಿಯಲಿದ್ದಾರೆ.
* ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಪಡೆದು ಮಿಂಚಿದ ಮೊಹಮ್ಮದ್ ಸಿರಾಜ್ ಬೌಲಿಂಗ್ ಪ್ರದರ್ಶನಕ್ಕೆ ಪಾಕಿಸ್ತಾನದ ಕ್ರೀಡಾ ಪತ್ರಕರ್ತೆ ಝಬೈನಾ ಅಬ್ಬಾಸ್ ಮನಸೋತಿದ್ದಾರೆ.
* ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳ ಆಟಗಾರರ ನಡುವೆ ಆಗಿಂದಾಗ್ಗೆ ಮಾತಿನ ಚಕಮಕಿಗಳು ನಡೆಯುತ್ತಿದ್ದವು. ಬುಮ್ರಾ ಮತ್ತು ಆ್ಯಂಡರ್ಸನ್ ನಡುವೆ ಶುರುವಾದ ಈ ಮಾತಿನ ಚಕಮಕಿ ಹಲವಾರು ಆಟಗಾರರ ನಡುವೆ ನಡೆಯಿತು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡದ ಆಟಗಾರರಾದ ಜೇಮ್ಸ್ ಆಂಡರ್ಸನ್ ಮತ್ತು ರಾಬಿನ್ಸನ್ ಜೊತೆ ಕೂಡಾ ಮಾತಿನ ಚಕಮಕಿಗಳನ್ನು ನಡೆಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ. 'ವಿರಾಟ್ ಕೊಹ್ಲಿ ಓರ್ವ ಹೊಲಸು ಬಾಯಿಯ ವ್ಯಕ್ತಿಯಲ್ಲವೇ? 2012ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ನನ್ನ ವಿರುದ್ಧ ಬಳಸಿದ ಅವಾಚ್ಯ ಶಬ್ದಗಳನ್ನು ಕೇಳಿ ದಿಗ್ಭ್ರಮೆಗೊಂಡಿದ್ದೆ ಹಾಗೂ ಅದನ್ನು ನನ್ನ ಜೀವನಪೂರ್ತಿ ಮರೆಯುವುದಿಲ್ಲ. ಆದರೆ ಜೋ ರೂಟ್, ಕೇನ್ ವಿಲಿಯಮ್ಸನ್ ಮತ್ತು ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ರೀತಿಯಲ್ಲ ಅವರೆಲ್ಲರೂ ಶಾಂತ ಸ್ವಭಾವದವರು' ಎಂದು ವಿರಾಟ್ ಕೊಹ್ಲಿ ವಿರುದ್ಧ ನಿಕ್ ಕಾಂಪ್ಟನ್ ಕಿಡಿಕಾರಿದ್ದರು.
* ಮೈದಾನದಲ್ಲಿ ವಿರಾಟ್ ಕೊಹ್ಲಿ ಇತರ ಆಟಗಾರರ ಜತೆ ಮಾತಿನ ಚಕಮಕಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ಪಾಕಿಸ್ತಾನದ ಮಾಜಿ ಆಟಗಾರ ದಾನೀಶ್ ಕನೇರಿಯಾ ಪ್ರಶಂಸಿಸಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿಯನ್ನು ಹೊಲಸು ಬಾಯಿಯ ಕ್ರಿಕೆಟಿಗ ಎಂದು ಜರಿದಿದ್ದ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ನಿಕ್ ಕಾಂಪ್ಟನ್ ವಿರುದ್ಧ ಹರಿಹಾಯ್ದಿರುವ ದಾನಿಶ್ ಕನೇರಿಯಾ 'ಕೊಹ್ಲಿ ಮೈದಾನದಲ್ಲಿ ಕಿರುಚಾಡಿದರೆ ಅದು ತಪ್ಪು, ಅದೇ ಕೆಲಸವನ್ನು ಇಂಗ್ಲೆಂಡ್ ಆಟಗಾರರು ಮಾಡಿದರೆ ಅದು ತಪ್ಪಲ್ಲ ಎಂದು ಹೇಳುತ್ತೀರಾ. ಯಾವಾಗಲೂ ಇಂಗ್ಲೆಂಡ್ನವರೇ ಅಧಿಕಾರ ಚಲಾಯಿಸಬೇಕಾ? ನಿಮ್ಮನ್ನು ಸದೆಬಡಿಯುವ ದೊಡ್ಡ ತಂಡ ಅಧಿಕಾರ ಚಲಾಯಿಸಿದಾಗ ಸ್ವೀಕರಿಸಿ' ಎಂದು ದಾನಿಶ್ ಕನೇರಿಯಾ ಹೇಳಿದ್ದಾರೆ.
* ಲಾರ್ಡ್ಸ್ ಟೆಸ್ಟ್ ಕುರಿತು ಮಾತನಾಡಿದ ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಊಟದ ವಿರಾಮದ ನಂತರ ಡಿಕ್ಲೇರ್ ಕೊಡುವ ಬದಲು ಊಟದ ವಿರಾಮಕ್ಕೂ ಮುನ್ನವೇ ಡಿಕ್ಲೇರ್ ಘೋಷಿಸಬೇಕಿತ್ತು ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.