ಸೆಪ್ಟೆಂಬರ್ 2ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು, ಒಂದೆಡೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23,000 ಅಂತರರಾಷ್ಟ್ರೀಯ ಪೂರೈಸಿ ಹೊಸ ಮೈಲಿಗಲ್ಲನ್ನು ನೆಟ್ಟಿದ್ದರೆ ಮತ್ತೊಂದೆಡೆ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ರಾಜಸ್ಥಾನ್ ರಾಯಲ್ಸ್ ಜೆರ್ಸಿ ಕಳುಹಿಸುವುದರ ಮೂಲಕ ವಿಶೇಷವಾಗಿ ಶುಭಾಶಯವನ್ನು ಕೋರಿದೆ. ಹೀಗೆ ಸೆಪ್ಟೆಂಬರ್ 2ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿರುವ ಘಟನೆಗಳ ಕಿರು ನೋಟ ಇಲ್ಲಿದೆ ನೋಡಿ
* ನಾಲ್ಕನೇ ಟೆಸ್ಟ್ನ ಆರಂಭಕ್ಕೆ ಮುನ್ನಾದಿನ ಸಂಜೆ ಹೋಟೆಲ್ನಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಹಾಗೂ ತಂಡ ಭಾಗಿಯಾಗಿತ್ತು. ಭಾರತದ ಕೋಚ್ ರವಿ ಶಾಸ್ತ್ರಿ ಜೊತೆಗೆ ತಮ್ಮ ಒಡನಾಟ ಹಾಗೂ ಆಪ್ತತೆಯ ಬಗ್ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದರು. ಇದೇ ಸಂದರ್ಭದಲ್ಲಿ ಕೊಹ್ಲಿ ಟೀಮ್ ಇಂಡಿಯಾ ಈಗ ವಿಶ್ವ ಕ್ರಿಕೆಟ್ನಲ್ಲಿ ಬಲಿಷ್ಠ ತಂಡವಾಗಿದ್ದು ಉಳಿದ ಎಲ್ಲಾ ತಂಡಗಳು ಕೂಡ ನಮ್ಮ ವಿರುದ್ಧ ಗೆಲುವು ಸಾಧಿಸಬೇಕೆಂದುಕೊಂಡಿರುತ್ತಾರೆ. ತಂಡದ ಈ ಸ್ಥಾನಕ್ಕೆ ಕಾರಣ ಕೋಚ್ ರವಿ ಶಾಸ್ತ್ರಿ ಜೊತೆಗೆ ಹೊಂದಿರುವ ಬಾಂಧವ್ಯ ಎಂದಿದ್ದಾರೆ ವಿರಾಟ್ ಕೊಹ್ಲಿ.
* ಓವಲ್ ಮೈದಾನದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ. ಆದರೆ ಈ ಪಂದ್ಯಕ್ಕೂ ಮುನ್ನ ನಡೆದ ಮೂರನೇ ಟೆಸ್ಟ್ನಲ್ಲಿ ಭಾರತ ಆಘಾತಕಾರಿಯಾಗಿ ಸೋಲು ಕಾಣುವ ಮೂಲಕ ನಿರಾಸೆಯನ್ನು ಅನುಭವಿಸಿತು. ಈ ಸೋಲಿನ ಕಹಿನೆನಪಿನಲ್ಲಿರುವ ಟೀಮ್ ಇಂಡಿಯಾ ಆಟಗಾರರಿಗೆ ಕೋಚ್ ರವಿ ಶಾಸ್ತ್ರಿ ಸ್ಪೂರ್ತಿಯ ಮಾತುಗಳನ್ನಾಡುವ ಮೂಲಕ ಹುರಿದುಂಬಿಸಿದ್ದಾರೆ. ವಿರಾಟ್ ಪಡೆಯ ಆಟಗಾರರಿಗೆ ಕೋಚ್ ರವಿ ಶಾಸ್ತ್ರಿ ನೇರ ಸಂದೇಶವೊಂದನ್ನು ನೀಡಿದ್ದಾರೆ. ಲಾರ್ಡ್ಸ್ ಪಂದ್ಯವನ್ನು ಸ್ಮರಿಸಿಕೊಳ್ಳಿ, ಲೀಡ್ಸ್ ಸೋಲನ್ನು ಮರೆತುಬಿಡಿ" ಎಂದು ರವಿ ಶಾಸ್ತ್ರಿ ಟೀಮ್ ಇಂಡಿಯಾ ಆಟಗಾರರಿಗೆ ಸ್ಪೂರ್ತಿಯುತ ಮಾತುಗಳನ್ನು ಆಡಿದ್ದಾರೆ.
* ಇನ್ನು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ಆರ್ ಅಶ್ವಿನ್ಗೆ ಆಡುವ ಬಳಗದಲ್ಲಿ ಸ್ಥಾನ ನೀಡದ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಾರಣವನ್ನು ನೀಡಿದ್ದಾರೆ. "ಇಂಗ್ಲೆಂಡ್ ತಡದಲ್ಲಿ ನಾಲ್ವರು ಎಡಗೈ ಆಟಗಾರರು ಇದ್ದಾರೆ. ಹೀಗಾಗಿ ಜಡೇಜಾಗೆ ಉತ್ತಮ ಹೊಂದಾಣಿಕೆಯಾಗಲಿದೆ. ಇದರೊಮದಿಗೆ ನಮ್ಮ ತಂಡದ ವೇಗಿಗಳು ಕೂಡ ದಾಳಿ ನಡೆಸಲಿದ್ದಾರೆ. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ಮೂಲಕವೂ ಕೂಡ ಜಡೇಜಾ ತಂಡದ ಸಮತೋಲನಕ್ಕೆ ಕಾರಣವಾಗುತ್ತಾರೆ" ಎಂದು ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
* ಲಂಡನ್ನ ಓವಲ್ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಮಹತ್ವದ ಮೈಲಿಗಲ್ಲು ನೆಟ್ಟಿದ್ದಾರೆ. ಓವಲ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 23,000 ಅಂತಾರಾಷ್ಟ್ರೀಯ ರನ್ಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ ಕ್ರಿಕೆಟಿಗ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
* ಯುಎಇಯಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಕುರಿತು ಮಾತನಾಡಿರುವ ಪಾರ್ಥಿವ್ ಪಟೇಲ್ ಟೀಮ್ ಇಂಡಿಯಾ ಟೂರ್ನಿಯಲ್ಲಿ ವಿಜೇತ ತಂಡವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಇರುವ ಟೀಮ್ ಇಂಡಿಯಾ ಅತ್ಯಂತ ಬಲಿಷ್ಠವಾಗಿದೆ, ಮುಂದಿನ ಹತ್ತು ವರ್ಷಗಳ ಕಾಲ ಈಗಿರುವ ಟೀಮ್ ಇಂಡಿಯಾ ಕ್ರಿಕೆಟ್ ಜಗತ್ತನ್ನು ಆಳ್ವಿಕೆ ಮಾಡಲಿದೆ, ಮುಂಬರುವ ಹಲವಾರು ಐಸಿಸಿ ಟ್ರೋಫಿಗಳನ್ನು ಈ ತಂಡ ಗೆದ್ದು ಬೀಗಲಿದೆ ಹಾಗೂ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಸಹ ಭಾರತ ತಂಡ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪಾರ್ಥಿವ್ ಪಟೇಲ್ ಭವಿಷ್ಯ ನುಡಿದಿದ್ದಾರೆ.