ಸೆಪ್ಟೆಂಬರ್ 6, ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಘಟನೆಗಳು ನಡೆದಿದ್ದು ಇಂಗ್ಲೆಂಡ್ ವಿರುದ್ಧ ಓವಲ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 157 ರನ್ಗಳ ಭರ್ಜರಿ ಜಯ ಗಳಿಸುವುದರ ಮೂಲಕ ಹೊಸ ಇತಿಹಾಸ ಬರೆದಿದೆ ಹಾಗೂ ಜಸ್ಪ್ರೀತ್ ಬುಮ್ರಾ 100 ಟೆಸ್ಟ್ ವಿಕೆಟ್ಗಳನ್ನು ಪಡೆದು ಮತ್ತೊಂದು ದಾಖಲೆ ಬರೆದಿದ್ದಾರೆ. ಹೀಗೆ ಸೆಪ್ಟೆಂಬರ್ 6, ಸೋಮವಾರದಂದು ನಡೆದ ಘಟನೆಗಳ ಕಿರು ನೋಟ ಇಲ್ಲಿದೆ ನೋಡಿ..
* ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ ಅದ್ಭುತ ಪ್ರದರ್ಶನಕ್ಕೆ ಆತಿಥೇಯ ಇಂಗ್ಲೆಂಡ್ ಸಂಪೂರ್ಣ ಶರಣಾಗಿದೆ. ಟಾಸ್ ಸೋತು ಮೊದಲ ಇನ್ನಿಂಗ್ಸ್ನಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ತನ್ನದೇ ಶೈಲಿಯಲ್ಲಿ ತಿರುಗಿ ಬಿದ್ದ ರೀತಿಯಿಂದಾಗಿ ಟೀಮ್ ಇಂಡಿಯಾ ಸರಣಿಯಲ್ಲಿ ಎರಡನೇ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮೊದಲಿಗೆ ಲಾರ್ಡ್ಸ್ ಮೈದಾನದಲ್ಲಿ ಗೆಲುವು ಸಾಧಿಸಿದ್ದ ವಿರಾಟ್ ಪಡೆ ಈಗ ಓವಲ್ ಅಂಗಳದಲ್ಲಿಯೂ ಇಂಗ್ಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದೆ.
* ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬೂಮ್ರಾ ವಿಶೇಷ ಸಾಧನೆಗಾಗಿ ಗುರುತಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಭಾರತೀಯ ವೇಗಿಗಳಲ್ಲಿ ಸದ್ಯ ಬೂಮ್ರಾ ಮೊದಲ ಸ್ಥಾನದಲ್ಲಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ ವೇಳೆ ಜಸ್ಪ್ರೀತ್ ಬೂಮ್ರಾ ದಾಖಲೆ ನಿರ್ಮಿಸಿದ್ದಾರೆ. ಐದನೇ ದಿನದಾಟದ ವೇಳೆ ಬೂಮ್ರಾ 2 ವಿಕೆಟ್ ಉರುಳಿಸಿ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆಂಗ್ಲ ಬ್ಯಾಟ್ಸ್ಮನ್ಗಳಾದ ಆಲಿ ಪೋಪ್ ಮತ್ತು ಜಾನಿ ಬೇರ್ಸ್ಟೋವ್ ವಿಕೆಟ್ ಮುರಿಯುವುದರೊಂದಿಗೆ ಬೂಮ್ರ ದಂತಕತೆ ಕಪಿಲ್ ದೇವ್ ದಾಖಲೆ ಸರಿಗಟ್ಟಿದ್ದಾರೆ.
'ಕೊಹ್ಲಿ ತೆಗೆದುಕೊಂಡ ಈ ತಪ್ಪು ನಿರ್ಧಾರದಿಂದ 4ನೇ ಟೆಸ್ಟ್ ಭಾರತದ ಕೈತಪ್ಪುತ್ತೆ'; ಕಿಡಿಕಾರಿದ ಮಾಜಿ ಕ್ರಿಕೆಟಿಗ
* ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಕೋಚ್ ರವಿ ಶಾಸ್ತ್ರಿ ಕೋವಿಡ್-19 ಸೋಂಕಿಗೀಡಾಗಿದ್ದಾರೆ. ಶಾಸ್ತ್ರಿ ಅಲ್ಲದೆ, ಬೆಂಬಲ ಸಿಬ್ಬಂದಿ ಸದಸ್ಯ ಭರತ್ ಅರುಣ್, ಬೌಲಿಂಗ್ ಕೋಚ್ ಆರ್ ಶ್ರೀಧರ್ ಅವರ ಆರ್ಟಿ-ಪಿಸಿಆರ್ ಪರೀಕ್ಷಾ ಫಲಿತಾಂಶ ಪಾಸಿಟಿವ್ ಬಂದಿದೆ. ಕೋವಿಡ್-19 ಪಾಸಿಟಿವ್ ಬಂದಿರುವುದರಿಂದ ರವಿ ಶಾಸ್ತ್ರಿ, ಭರತ್ ಅರುಣ್ ಮತ್ತು ಆರ್ ಶ್ರೀಧರ್ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟೆಸ್ಟ್ಗಾಗಿ ಮ್ಯಾನ್ಚೆಸ್ಟರ್ಗೆ ಹೋಗುವಂತಿಲ್ಲ. ಭಾರತ vs ಇಂಗ್ಲೆಂಡ್ ಐದನೇ ಟೆಸ್ಟ್ ಪಂದ್ಯ ಮ್ಯಾನ್ಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 10ರಿಂದ ನಡೆಯಲಿದೆ.
* ಟಿ20 ವಿಶ್ವಕಪ್ಗೆ ಕೆಲವೇ ದಿನಗಳಿರುವಾಗ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಗಳು ಆಗಿದೆ. ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಹಾಗೂ ಬೌಲಿಂಗ್ ಕೋಚ್ ಯೂನಿಸ್ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಹಂಗಾಮಿ ಕೋಚ್ಗಳನ್ನು ತಕ್ಷಣವೇ ನೇಮಕ ಮಾಡಿದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ. ನ್ಯೂಜಿಲೆಂಡ್ ತಂಡದ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಯ ಹಿನ್ನೆಲೆಯಲ್ಲಿ ತಕ್ಷಣವೇ ಹಂಗಾಮಿ ಕೋಚ್ಗಳನ್ನು ಹೆಸರಿಸಲಾಗಿದೆ. ಮಾಜಿ ಕ್ರಿಕೆಟರ್ಗಳಾದ ಸಕ್ಲೇನ್ ಮುಶ್ತಾಕ್ ಹಾಗೂ ಅಬ್ದುಲ್ ರಜಾಕ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಂಗಾಮಿ ಕೋಚ್ಗಳನ್ನಾಗಿ ನೇಮಕ ಮಾಡಿದೆ. ಸದ್ಯ ಇವರಿಬ್ಬರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಮಾತ್ರವೇ ಕೋಚ್ಗಳಾಗಿ ತಂಡದೊಂದಿಗೆ ಇರಲಿದ್ದಾರೆ. ಸೆಪ್ಟೆಂಬರ್ 17ರಿಂದ ನ್ಯೂಜಿಲೆಂಡ್ ತಂಡದ ವಿರುದ್ಧ ಸೀಮಿತ ಓವರ್ಗಳ ಸರಣಿ ಪಾಕಿಸ್ತಾನದಲ್ಲಿ ನಡೆಯಲಿದೆ.