1. ವೃದ್ಧಿಮಾನ್ ಸಹಾ
ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ತಂಡದಲ್ಲಿ ವೃದ್ಧಿಮಾನ್ ಸಹಾ ಅವಕಾಶವನ್ನೇನೋ ಪಡೆದುಕೊಂಡಿದ್ದಾರೆ, ಆದರೆ ಆಡುವ ಬಳಗಕ್ಕೆ ಆಯ್ಕೆ ಆಗುವುದು ಸುಲಭದ ಮಾತಲ್ಲ. ಏಕೆಂದರೆ ಭಾರತ ಟೆಸ್ಟ್ ತಂಡದ ಮೊದಲ ಆದ್ಯತೆಯ ವಿಕೆಟ್ ಕೀಪರ್ ರಿಷಭ್ ಪಂತ್. ಹೌದು ರಿಷಭ್ ಪಂತ್ ಇರುವಾಗ ವೃದ್ಧಿಮಾನ್ ಸಹಾಗೆ ಅವಕಾಶ ಸಿಗುವುದು ತೀರಾ ಕಷ್ಟ. ಕಳೆದ ಆಸ್ಟ್ರೇಲಿಯಾ ಪ್ರವಾಸದ ಮೊದಲನೇ ಟೆಸ್ಟ್ ಪಂದ್ಯ ಆಡಿದ ಬಳಿಕ ಇದುವರೆಗೂ ಯಾವುದೇ ಟೆಸ್ಟ್ ಪಂದ್ಯದಲ್ಲಿಯೂ ಆಡುವ ಅವಕಾಶವನ್ನು ವೃದ್ಧಿಮಾನ್ ಸಹಾ ಪಡೆದಿಲ್ಲ. ಹೀಗಾಗಿ ಈ ಇಂಗ್ಲೆಂಡ್ ಪ್ರವಾಸ ಮುಗಿದ ಬಳಿಕ 34 ವರ್ಷದ ವೃದ್ಧಿಮಾನ್ ಸಹಾ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆಗಳು ಹೆಚ್ಚಿವೆ.
2. ಶಿಖರ್ ಧವನ್
ಶಿಖರ್ ಧವನ್ ಸೀಮಿತ ಓವರ್ಗಳ ಪಂದ್ಯಗಳಲ್ಲಿ ಟೀಂ ಇಂಡಿಯಾದ ಸ್ಫೋಟಕ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಟೆಸ್ಟ್ ತಂಡದಲ್ಲಿ ಶಿಖರ್ ಧವನ್ ಸ್ಥಾನ ಪಡೆದುಕೊಳ್ಳುವುದರಲ್ಲಿ ವಿಫಲರಾಗುತ್ತಿದ್ದಾರೆ. ಟೀಮ್ ಇಂಡಿಯಾ ಟೆಸ್ಟ್ ತಂಡದ ಆರಂಭಿಕರಾಗಿ ರೋಹಿತ್ ಶರ್ಮಾ, ಶುಬ್ಮನ್ ಗಿಲ್ ಹಾಗೂ ಮಯಾಂಕ್ ಅಗರ್ವಾಲ್ ಇರುವ ಕಾರಣ ಶಿಖರ್ ಧವನ್ ಅವಕಾಶ ವಂಚಿತರಾಗುತ್ತಿದ್ದಾರೆ. ಇನ್ನು ಭಾರತದ ಪರ ಶಿಖರ್ ಧವನ್ ಟೆಸ್ಟ್ ಪಂದ್ಯವನ್ನಾಡಿ 3 ವರ್ಷಗಳು ಕಳೆದಿವೆ. 2018ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶಿಖರ್ ಧವನ್ ಕೊನೆಯದಾಗಿ ಟೆಸ್ಟ್ ಪಂದ್ಯವನ್ನಾಡಿದ್ದರು. ಹೀಗಾಗಿ ಶಿಖರ್ ಧವನ್ ಕೂಡ ಆದಷ್ಟು ಬೇಗ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.
3. ಇಶಾಂತ್ ಶರ್ಮಾ
ಇಶಾಂತ್ ಶರ್ಮಾ ಪ್ರಸ್ತುತ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾದ ಅತಿಹೆಚ್ಚು ಅನುಭವ ಹೊಂದಿರುವಂತಹ ಆಟಗಾರ. ಇಶಾಂತ್ ಶರ್ಮಾ ಟೆಸ್ಟ್ ತಂಡಕ್ಕೆ ಸತತವಾಗಿ ಆಯ್ಕೆಯಾಗುತ್ತಿದ್ದರೂ ಸಹ ಗಾಯದ ಸಮಸ್ಯೆಯಿಂದ ಆಗಾಗ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಳ್ಳದೆ ತಂಡದಿಂದ ಹೊರಗುಳಿದ ಉದಾಹರಣೆಗಳಿವೆ. ಇನ್ನು ಈಗಾಗಲೇ ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಇಶಾಂತ್ ಶರ್ಮಾ ಇಂಗ್ಲೆಂಡ್ ಪ್ರವಾಸದ ಬಳಿಕ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
4. ಮುರಳಿ ವಿಜಯ್
ಮುರಳಿ ವಿಜಯ್ ಭಾರತ ಟೆಸ್ಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮುರಳಿ ವಿಜಯ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಮುರಳಿ ವಿಜಯ್ ಭಾರತ ತಂಡದ ಪರ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದು 2018ರ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ. ಆ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಮುರಳಿ ವಿಜಯ್ ಮತ್ತೆ ಅವಕಾಶವನ್ನು ಪಡೆದುಕೊಂಡಿಲ್ಲ. ಇನ್ನು ಅವಕಾಶ ಸಿಗದೆ ಈಗಾಗಲೇ 3 ವರ್ಷಗಳು ಕಳೆದಿದ್ದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿ ಮುಗಿದ ಬಳಿಕ ಮುರಳಿ ವಿಜಯ್ ಕೂಡ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆಯಿದೆ.
5. ದಿನೇಶ್ ಕಾರ್ತಿಕ್
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಭಾರತದ ಪರ ವೀಕ್ಷಕ ವಿವರಣೆ ಮಾಡಲು ಸುನಿಲ್ ಗವಾಸ್ಕರ್ ಜೊತೆ ದಿನೇಶ್ ಕಾರ್ತಿಕ್ ಕೂಡ ಇಂಗ್ಲೆಂಡ್ ತಲುಪಿದ್ದಾರೆ. ಇನ್ನು ಇತ್ತೀಚಿಗಷ್ಟೇ ಮಾತನಾಡಿದ ದಿನೇಶ್ ಕಾರ್ತಿಕ್ ಸೀಮಿತ ಓವರ್ ಪಂದ್ಯಗಳಿಗೆ ಮರಳುವ ಆಸೆಯನ್ನು ವ್ಯಕ್ತಪಡಿಸಿದರು ಆದರೆ ಟೆಸ್ಟ್ ಕ್ರಿಕೆಟ್ ಕುರಿತು ಕಾರ್ತಿಕ್ ಯಾವುದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಲಿಲ್ಲ. ಹಾಗೂ ಇತ್ತೀಚಿನ ಕೆಲ ವರ್ಷಗಳಿಂದ ದಿನೇಶ್ ಕಾರ್ತಿಕ್ ಟೆಸ್ಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಈ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಯ ಬಳಿಕ ದಿನೇಶ್ ಕಾರ್ತಿಕ್ ಕೂಡ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ.