
ಹೊಸದಿಲ್ಲಿ, ಮೇ 05: ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ನಡುವಣ ಮಾತಿನ ಚಕಮಕಿ ಮುಂದುವರಿದೆ. ಪಾಕ್ನ ಸ್ಟಾರ್ ಆಲ್ರೌಂಡರ್ ಅಫ್ರಿದಿ ಇತ್ತೀಚೆಗಷ್ಟೇ ತಮ್ಮ ಆತ್ಮಚರಿತ್ರೆ 'ಗೇಮ್ ಚೇಂಜರ್'ನಲ್ಲಿ ಗಂಭೀರ್ಗೆ ವ್ಯಕ್ತಿತ್ವವೇ ಇಲ್ಲ. ಅವರ ವರ್ತನೆಯಲ್ಲೂ ಸಮಸ್ಯೆ ಇದೆ ಎಂದು ಜರಿದಿದ್ದರು.
"ಕರಾಚಿಯಲ್ಲಿ ಇಂತಹ ವ್ಯಕ್ತಗಳನ್ನು 'ಸರ್ಯಾಲ್' (ಉರಿದುಕೊಳ್ಳುವವ) ಎಂದು ಕರೆಯುತ್ತೇವೆ. ಎಷ್ಟೇ ಆಕ್ರಮಣಕಾರಿಯಾಗಿದ್ದರೂ, ಎಷ್ಟೇ ಸ್ಪರ್ಧಾತ್ಮಕವಾಗಿ ಇದ್ದರೂ, ಧನಾತ್ಮಕವಾಗಿ ಆಲೋಚಿಸುವವರಾಗಬೇಕು. ಗಂಭೀರ್ ಆರೀತಿಯ ವ್ಯಕ್ತಿಯಲ್ಲ,'' ಎಂದು ತಮ್ಮ ಪುಸ್ತಕದಲ್ಲಿ ಅಫ್ರಿದಿ ಬರೆದುಕೊಂಡಿದ್ದಾರೆ.
ಇದಕ್ಕೆ ತಕ್ಕ ಉತ್ತರವನ್ನೇ ನೀಡಿದ್ದ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗಂಭೀರ್, ಅಫ್ರಿದಿಗೆ ಮನಶಾಸ್ತ್ರಜ್ಞರನ್ನು ಭೇಟಿ ಮಾಡುವ ಅಗತ್ಯವಿದೆ ಎಂದು ಕುಟುಕಿದ್ದರು.
ಇದೀಗ ಮತ್ತೆ ತುಟಿ ಬಿಚ್ಚಿರುವ ಅಫ್ರಿದಿ, ಮಾಜಿ ಕ್ರಿಕೆಟಿಗ ಹಾಗೂ ಸದ್ಯ ರಾಜಕೀಯದಲ್ಲಿ ಹೊಸ ಇನಿಂಗ್ಸ್ ಆರಂಭಿಸಿರುವ ಗಂಭೀರ್ಗೆ ಆರೋಗ್ಯ ಸಮಸ್ಯೆ ಇದ್ದು ಅದಕ್ಕೆ ಪಾಕಿಸ್ತಾನದಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದಾರೆ.
"ಗೌತಮ್ ಗಂಭೀರ್ಗೆ ಏನೋ ಸಮಸ್ಯೆ ಇದೆ ಎಂದನಿಸುತ್ತಿದೆ. ಆಸ್ಪತ್ರೆಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇನೆ. ಅವರ ಈ ಸಮಸ್ಯೆಗೆ ಇಲ್ಲಿ ಉತ್ತಮ ಚಿಕಿತ್ಸೆ ಕೊಡಿಸಬಲ್ಲೆ. ಭಾರತ ಸರಕಾರ ನಮ್ಮ ಜನರಿಗೆ ಸಾಮಾನ್ಯವಾಗಿ ವೀಸಾ ನೀಡುವುದಿಲ್ಲ. ಆದರೆ ಭಾರತದ ಎಲ್ಲರಿಗೂ ಪಾಕಿಸ್ತಾನಕ್ಕೆ ಸ್ವಾಗತಿಸುತ್ತೇನೆ. ನಮ್ಮ ಜನ ಮತ್ತು ನಮ್ಮ ಸರಕಾರ ಭಾರತೀಯರನ್ನು ಸದಾ ಸ್ವಾಗತಿಸುತ್ತದೆ. ಇನ್ನು ಗೌತಮ್ಗೆ ನಾನೇ ವೀಸಾ ಸಿದ್ದಪಡಿಸಿಕೊಡುತ್ತೇನೆ. ಈ ಮೂಲಕ ಅವರು ಇಲ್ಲಿ ಚಿಕಿತ್ಸೆ ಪಡೆದುಕೊಳ್ಳ ಬಹುದಾಗಿದೆ,'' ಎಂದು ಅಫ್ರಿದಿ ಮರಳಿ ಟಾಂಗ್ ನೀಡಿದ್ದಾರೆ.
ಅಫ್ರಿದಿ ತಮ್ಮ ವಿವಾದಾತ್ಮಕ ಆತ್ಮಚರಿತ್ರೆ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ. ಕಾಶ್ಮೀರ ಕುರಿತಾಗಿ ತಮ್ಮ ನಿಲುವುಗಳು ಮತ್ತು ಕ್ರಿಕೆಟ್ ವೃತ್ತಿ ಬದುಕಿನಲ್ಲಿ ತಮ್ಮ ನಿಜವಾದ ವಯಸ್ಸಿನ ಕುರಿತಾಗಿ ಎಲ್ಲದರಿಂದಲೂ ಭಾರಿ ಚರ್ಚೆಗೆ ಕಾರಣರಾಗಿದ್ದಾರೆ.